Tuesday, December 30, 2008

ಅವಳು ಹೊರಗೆ, ಇವಳು ಬಳಿಗೆ



[caption id="attachment_236" align="aligncenter" width="500" caption="ಚಿತ್ರಕೃಪೆ: ಸ್ಪ್ರಾಗ್‌ ಫೋಟೋ ಸ್ಟಾಕ್‌"]ಸ್ಪ್ರಾಗ್‌ ಫೋಟೋ ಸ್ಟಾಕ್‌[/caption]

ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿಸುತ್ತದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ನಿರೀಕ್ಷೆ, ಕಾತರದ ಕಣ್ಣುಗಳು. ಪ್ರತಿ ವರ್ಷ ಕಳೆಯುವಾಗಲೂ ಆ ವರ್ಷ `ಸಾಕಪ್ಪಾ' ಎನಿಸಿರುತ್ತದೆ, ಅಯ್ಯೋ ಈ ವರ್ಷದಷ್ಟು ಕೆಟ್ಟದಾಗಿ ಯಾವುದೂ ಇರಲಿಲ್ಲ ಎಂಬ ಭ್ರಮೆ ಮೂಡುತ್ತದೆ. ಅಂದರೆ ಮನೆಯ ಅಜ್ಜಿಯಂತೆ ಆಕೆ ಯಾರಿಗೂ ಬೇಡ. ಹೊಸ ವರ್ಷ ಮನೆಗೆ ಬರುತ್ತಿರುವ ಹೊಸ ಹೆಣ್ಣಂತೆ, ಎಲ್ಲರಿಗೂ ಕುತೂಹಲ.
ಗೋಡೆಯ ಮೇಲೆ ಕ್ಯಾಲೆಂಡರ್‌ ಬದಲಾಗಿ, ಸಹಿ ಕೆಳಗೆ ಬರೆಯುವ ದಿನಾಂಕಗಳು ಬದಲಾಗಿ, ಇಸವಿಗೆ ಒಂದು ವರ್ಷ ಹೆಚ್ಚು ವಯಸ್ಸಾಗಿ ಜಗತ್ತು ಮುಂದಡಿ ಇಡುತ್ತಿದೆ. ಡಿಸೆಂಬರ್‌ನ ಚಳಿ, ನವೆಂಬರ್‌ನ ಬಾಂಬ್‌ ದಾಳಿ, ಈ ವರ್ಷದ ಕೊನೆಯ ರಿಸೆಷನ್‌ ಭೂತ, ಸಮರ ಭೀತಿ-ಗಳ ಮಧ್ಯೆ ಬೆಳಗ್ಗೆ ಬರುವ ಸೂರ್ಯನಂತೆ ಹೊಸ ವರ್ಷ ಬರುತ್ತಿದೆ. ಆದರೆ ಆ ಹೊತ್ತಿಗೆ ಕಳೆದ `ಹಳೆಯ ವರ್ಷ' ನಮ್ಮ ಬ್ಲಾಗ್‌ನ ಕವಿತೆಗೆ ಕಂಡಿದ್ದು ಹೀಗೆ.
ಹೇಗೆ?

`ಅ-ಮೃತವರ್ಷಿಣಿ' ಕವಿತೆ ಏನನ್ನುತ್ತಿದೆಯೋ, ಹಾಗೆ.

ಒಂದೇ ವರ್ಷದ ಹಿಂದೆ
ವರ್ಷಾರಂಭದ ತಾರೀಕುಗಳ,
ವಾರಗಳ,
ದಿವಾ, ಗಳಿಗೆಗಳ
ಮನೆಗೆ ನಗುನಗುತ್ತಾ ಕಾಲಿಟ್ಟವಳು
ಆಕೆ, ವರ್ಷಿಣಿ.

ಹಳೆಯ ಕಸಗಳ
ಒಂದೂ ಬಿಡದೇ ಎತ್ತಿ ಎಸೆದು
ಹೊಸ ಸರಸಗಳ
ಮೆಲ್ಲ ಮೆಲ್ಲ ಎತ್ತಿಟ್ಟು
ಎಲ್ಲರನ್ನೂ ಮುತ್ತಿಟ್ಟಳು,
ಹಸಿದ ಬಾಯಿಗಳಿಗೆ ತುತ್ತಿತ್ತಳು.
ಈ ಜಗತ್ತಿನ ಎಲ್ಲಾ
ಸಂಭ್ರಮಗಳೂ
ಇವಳ ಮಡಿಲ ಮೇಲಾಡಿ,
ಸಂಕಟಗಳೆಲ್ಲಾ
ಒಡಲನ್ನು ಹುಡಿಮಾಡಿ
ಹಾರಿ ಹೋದವು ಕಾಲದ
ರೆಕ್ಕೆಯ ಮೇಲೆ...

Saturday, December 27, 2008

ಕಳೆದ ರಾತ್ರಿ ಕಂಡ ಕೆಟ್ಟ ಕನಸು

parzania-2005-9b(ಧರ್ಮಾಂಧತೆಗೆ ಬಲಿಯಾದ ಜಗತ್ತಿನ ಎಲ್ಲಾ ಅಮಾಯಕರಿಗೆ ಮಿಡಿಯುವ ಬರಹ)



ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ' ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ  ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.
`ಪರ್ಜಾನಿಯಾ' ಕತೆ ಗೋಧ್ರಾ ದುರಂತದ ನಂತರ ನಡೆಯುವ  ಅಹ್ಮದಾಬಾದ್‌ನ ಒಂದು ಘಟನೆ. ನಾಸಿರುದ್ದೀನ್‌ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ  ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್‌ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ.
ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ.

Tuesday, December 23, 2008

ಚಳಿಗಾಳಿ ಸಹಿ ಹಾಕಿದೆ ಮನಸಿನಲಿ...

ಈ ಚಳಿ ಯಾಕಾಗಿದೆ, ಏನು ನಿನ್ನ ಚಳಿಯ ಲೀಲೆ, ಚಳಿಗಾಳಿ, ಚಳಿಗಾಳಿ ಸಹಿ ಹಾಕಿದೆ ಮನಸಿನಲಿ...
ಹೀಗೆ ನಮ್ಮ ಜನಪ್ರಿಯ ಚಿತ್ರಗೀತೆಗಳನ್ನೆಲ್ಲಾ ಬದಲಿಸಿಕೊಂಡು ಹಾಡುವಂತೆ, ನಡುಗುತ್ತಾ ಮುದುರುವಂತೆ ಈ ಸಲ ಚಳಿಗಾಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. `ಗರಿಮುದುರು ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು' ಎಂಬ ಎಸ್‌ವಿ ಪರಮೇಶ್ವರ ಭಟ್ಟರ ಸಾಲುಗಳನ್ನು ಕೇಳುತ್ತಿದ್ದರೆ ನಮಗೆಲ್ಲಾ ಚಳಿಯ ಈ ದಿನಗಳೇ ನೆನಪಾಗುತ್ತವೆ.
ಕಿವಿಗೊಂದು ಮಫ್ಲರ್‌, ಮೈಗೆ ಸ್ವೆಟರ್‌, ಕಾಲಿಗೆ ಸಾಕ್ಸ್‌, ಆಗಾಗ ಉಜ್ಜಿ ಉಜ್ಜಿ ಕೈಬಿಸಿ ಮಾಡಿಕೊಳ್ಳುವ ಅಗತ್ಯ, ಬೆಂಕಿ ಕಂಡರೆ, ಬಿಸಿಲು ಬಿದ್ದರೆ ಮೈ ಒಡ್ಡುವ ತವಕ. ಬೆಳಿಗ್ಗೆಯ ವಾಕಿಂಗ್‌ ಬ್ಯಾನ್‌ ಮಾಡಿ, ಸಂಜೆಯ ಯಾವುದಾದರೂ ಮೀಟಿಂಗ್‌ ಕ್ಯಾನ್ಸಲ್‌ ಮಾಡಿ ಮನೆ ಸೇರಿಕೊಂಡು, ಕಂಬಳಿ ಸೇರಿಕೊಳ್ಳುವವರ ಸಂಖ್ಯೆ ಜಾಸ್ತಿ ಇರಬಹುದು.
ತುಟಿ ಒಡೆಯದಿರಲು ಲಿಪ್‌ಗಾರ್ಡೂ ಮೈಕೈ ಒಡೆದು ಸಿಪ್ಪೆ ಏಳದಿರಲು ವ್ಯಾಸಲಿನ್ನೂ ನಮಗೀಗ ಬೇಕಾಗಿದೆ. ಅದನ್ನು ಕೊಂಡು ತರುವವರೂ ಹೆಚ್ಚು, ಅದಕ್ಕಾಗಿ ಅಂಗಡಿಯಲ್ಲಿ ವ್ಯಾಪಾರವೂ ಹೆಚ್ಚು. ಇಂಥದೇ ಚಳಿಯ ಬಗ್ಗೆ ಶೇಕ್ಸ್‌ಪಿಯರ್‌ `ಬ್ಲೋ ಬ್ಲೋ ದೌ ವಿಂಟರ್‌ವಿಂಡ್‌' ಎಂದು ಬರೆದ. ಅವನು ಚಳಿಗಾಳಿ ಬಗ್ಗೆ ಬರೆದ ಸಂದರ್ಭದಲ್ಲಿ ಅವನದೇ ಪಾತ್ರ ಕಿಂಗ್‌ ಲೀಯರ್‌ ತನ್ನ ಮಕ್ಕಳಿಂದ ಬೇರ್ಪಟ್ಟು, ನಿರ್ಗತಿಕನಾಗಿದ್ದ. ನಿರ್ಗತಿಕನಾಗುವುದಕ್ಕಿಂತ ಚಳಿ ಬೇರಿಲ್ಲ. `ಸುಳಿ ಸುಳಿ ಓ ಚಳಿಗಾಳಿ, ಮನುಷ್ಯಗಿಂತ ನೀ ನಿರ್ದಯವಲ್ಲ ತಿಳಿ' ಎಂದು ಶೇಕ್ಸ್‌ಪಿಯರ್‌ ಅದ್ಭುತವಾಗಿ ಬರೆಯುತ್ತಾ ಹೋಗುತ್ತಾನೆ.
ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೂಲಕ ಮನಸ್ಸನ್ನು ಬೆಚ್ಚಗಾಗಿಸಲು ಇಲ್ಲಿ ಚಳಿಗಾಲದ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಲಾಗುತ್ತಿದೆ. ಇದನ್ನು ನ್ಯೂಸ್‌ ಏಜನ್ಸಿ, ಫೋಟೋ ಬಕೆಟ್‌ ಮೊದಲಾದ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಅವರಿಗೆಲ್ಲಾ ಕೃತಜ್ಞತೆಗಳು.


INDIA-WEATHER-WINTER22bnp131cimg0756coffee-1taipei_india-wintervacation2007-052

Monday, December 22, 2008

ಕೈಗೆ ಬಂದೂಕು ಕೊಡದಿರಲಿ ದೇವರು



[caption id="attachment_217" align="aligncenter" width="500" caption="ಚಿತ್ರಕೃಪೆ: ಫ್ಲಿಕರ್‌"]ಫ್ಲಿಕರ್‌[/caption]

ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ ಅಂತಿಮವಾಗಿ ಯಾವೊಂದು ರಾಷ್ಟ್ರಕ್ಕೂ ಶಾಶ್ವತ ಸಂತೋಷವನ್ನು, ಪರಿಹಾರವನ್ನು  ಕಂಡುಕೊಟ್ಟಿಲ್ಲ. ಪರಸ್ಪರ ಸೇಡು ತೀರಿಸಿಕೊಳ್ಳಲು ಮಾತ್ರ ಅದು ಬಳಕೆಯಾಗಿದೆ. ಸಮರ ಬೇಡ ಎಂದೇ ಯಾವತ್ತಿಗೂ ಜನಸಾಮಾನ್ಯರೆಲ್ಲರೂ ಪ್ರತಿಪಾದಿಸಿದರು. `ಕೈಯ್ಯಲ್ಲಿ ಬಂದೂಕು ಕೊಡುವ ದೇವರು ಹಿಂದೂಗಳಿಗೂ ಬೇಡ, ಮುಸಲ್ಮಾನರಿಗೂ ಬೇಡ' ಎಂದು ಮೊನ್ನೆ ಡಾ. ಯು ಆರ್‌ ಅನಂತಮೂರ್ತಿ ಹೇಳಿದರು. ಕೈ ಕೈ ಮಿಲಾಯಿಸಿ, ಸಾವು ತಂದುಕೊಂಡ ಯಾವುದೆ ರಾಷ್ಟ್ರವೂ ಮತ್ತೊಮ್ಮೆ ಸಮರವನ್ನು ಬಯಸುವುದಿಲ್ಲ. ಯಾಕೆಂದರೆ ಕದನದ ಅನಂತರದ ಸ್ಥಿತಿ ನಮಗೆಲ್ಲಾ ಗೊತ್ತು. ಮಹಾಭಾರತ ಸಮರ, ಅಶೋಕ ಮಾಡಿದ ಕದನ-ಗಳ ಪರಿಣಾಮವನ್ನು ತಿಳಿದ ರಾಷ್ಟ್ರ ನಮ್ಮದು.
ನಾವು ಈ ಕೈ ಕೈ ಮಿಲಾಕತ್‌ಗೂ ಮೀರಿದ ಪರಿಹಾರವನ್ನು ಸರ್ವ ರಾಷ್ಟ್ರಗಳ ಸಹಯೋಗದೊಂದಿಗೆ, ರಕ್ತರಹಿತ ಕ್ರಾಂತಿಯಂತೆ, ಮೌನಸಂಗ್ರಾಮದಂತೆ ಕಂಡುಕೊಳ್ಳುವ ಜರೂರತ್ತು ಇವತ್ತಿದೆ. ಯಾಕೆಂದರೆ ಅಮಾಯಕರನ್ನು ಕೊಲ್ಲುವುದನ್ನು ಬಿಟ್ಟು ಈ ಸಮರ ಬೇರೇನನ್ನೂ ಮಾಡುವುದಿಲ್ಲ. ಅಫ್ಗಾನ್‌ನಲ್ಲಿ ಕೆಲವೇ ವರ್ಷಗಳ ಹಿಂದೆ ಆದ ಸಮರದ ಪರಿಣಾಮ ನಮಗೆಲ್ಲರಿಗೂ ಮೊನ್ನ ಮೊನ್ನೆ ನಡೆದಂತೆ ಹಚ್ಚ ಹಸಿರಾಗಿದೆ. ಭಾರತ ನಡೆಸುವ ಸಮರದಲ್ಲೂ ಅಮೆರಿಕಾದಂಥ ರಾಷ್ಟ್ರ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗುತ್ತಿದೆ. ಸಮರವನ್ನು ನಾವು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟರೆ ಅದೇ ಅಸ್ತ್ರ  ಮುಂದೊಂದು ದಿನ ನಮ್ಮ ಕಡೆಗೇ ತಿರುಗುತ್ತದೆ.
ಸಮರವನ್ನು ಪ್ರತಿಭಟಿಸುತ್ತಾ, ಭಯೋತ್ಪಾದಕತೆ ನಿವಾರಣೆಗೆ ಆದಷ್ಟು ಹುಷಾರಾದ ಮಾರ್ಗವನ್ನು  ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಾ ಹಿಂದೆ ಅಫ್ಗಾನ್‌ ಸಮರದ ತರುವಾಯ ಬರೆದ
`ಅಫ್ಗಾನ್‌ಗೆ ಬನ್ನಿ ಇಫ್ತಾರ್‌ ಕೂಟಕ್ಕೆ' ಎಂಬ ಕವಿತೆಯನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲರ ಒಂದೊಂದು ಕೂಗೂ ನಡೆಯಲು ಅನುವಾಗಿರುವ ಸಮರವನ್ನು ಪ್ರತಿಭಟಿಸಲಿ.

(Now In afgan everything is was- ಅಫ್ಘಾನ್‌ ಗೈಡ್‌ ಒಬ್ಬ ಹೇಳಿದ್ದು.)

ಕಾಬೂಲ ವಿರಳ ಪ್ರಾಚ್ಯ ಸಂಗ್ರಹಾಲಯ,
ದರುಲಮನ್‌ ಅರಮನೆ ಆವರಣ
ಝೂನ ಮುಗ್ಧ ಜೀವಿ ಜಗತ್ತು
ಮದ್ದುಗುಂಡಿನಡಿ ಮುದ್ದೆಯಾಗಿ
ಕಾಬೂಲಿನ
ಆಲಯಗಳೆಲ್ಲಾ ಈಗ ಬಟಾ ಬಯಲು!
ಬಬೂರು ಗಾರ್ಡನಿನ ಹೊಸ ಹೂಗಳು,
ಆ ಹೂವಿನಂಥ ಜನಗಳು
ಒಟ್ಟುಗೂಡಿಸಿಟ್ಟಿದ್ದ ಅಷ್ಟೋ ಇಷ್ಟೋ ಅಗುಳು-
ನಜ್ಜುಗುಜ್ಜಾಗಿದೆ ಈಗ...

ಲೂಟಿಯಾದ ಮೇಲೆ ಕೋಟೆಯ ಬಾಗಿಲು
ಇಕ್ಕಿಕೊಂಡು
ಹಿರಿಯರ ಬಣ
ಘನ ಸರಕಾರದ ಚೌಕಟ್ಟು ಚಾಚಿತು
ನಾವು... ಇದನ್ನು
ನೀವು... ಅದನ್ನು
ನಾವೆಲ್ಲರೂ... ನಿಮ್ಮೆಲ್ಲರನ್ನೂ
ನೋಡಿಕೊಳ್ಳುತ್ತೇವೆಂದು
ಕರ್ಝಾಯಿ ಡಂಗುರ ಹೊರಡಿಸುತ್ತಿದ್ದಂತೇ-
ಕಿವಿಗೊಟ್ಟು ಆಲಿಸಿ
ಕೇಳುತ್ತಿಲ್ಲವೇ ನಿಮಗೆ-
`ಪ್ರಭು ಪ್ರಭುತ್ವವನ್ನು ಹೇರಿ
ತೋರಾಬೋರಾದಲ್ಲಿ ಈಗಾಗಲೇ
ಸೇರಿಕೊಂಡಿದ್ದಾನೆ...'
ಎಂಬ
ನಿರಾಶ್ರಿತರ ಪಿಸು ನಿಟ್ಟುಸಿರು!

ರಮ್ಜಾನ್‌ನ ಪೂರ್ಣಚಂದ್ರ ಕಾಣಿಸಿಕೊಂಡ,
ಓ ಚಂದ್ರ
ಎಲ್ಲಿ ಬೆಳುದಿಂಗಳು?
ಎಲ್ಲಾ ಮತ್ತದೇ ಧರ್ಮಾಂಧರ ತಂಗಳು
ಇನ್ನೆಲ್ಲಿ ಖುಷಿ ತಿಂಗಳು?
ಬುರ್ಖಾ ಕಿತ್ತೊಗೆದರೇನು ಬಂತು
ಯಾರಿಗೆ
ಎಲ್ಲಿಗೆ
ಮತ್ತೆ... ಯಾತಕ್ಕೆ
ಬಂದತಾಯ್ತು ಅಸಂತುಷ್ಟ ಸ್ವಾತಂತ್ರ್ಯ?

ವಿಚ್ಛಿದ್ರ ಬದುಕಿನ ಮೃತಯಾಚನೆ
ಅಬ್ಬಾ!
ಈ ಹಬ್ಬ!
ಮಾಯದ ಅಮಾಯಕರ ಮರುಕ
ನಮಾಜ್‌
ವ್ರಣ, ಹೆಣಗಳುರುಳಿದ ಕಣದಲ್ಲಿ
ರಕ್ತಸಿಕ್ತ ಇಫ್ತಾರ್‌...
ಈ ಸಾರಿ
ಅಫ್ಘಾನಿಗೆ ಬನ್ನಿ ಇಫ್ತಾರ್‌ಗೆ
ಬೇಕಾದಷ್ಟು ಉಂಡು
ಸಾಧ್ಯವಾದರೆ
ಕೊಂಡೂ ಹೋಗಿ
ಈ ರೌರವ ಔತಣ!

ಅಫ್ಘಾನಿನ ಸುತ್ತಾ
ಈಗೆಲ್ಲಾ

ಗತ... ಗತ... ಗತ...

Friday, December 19, 2008

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ

diwali_2ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡುಗೊರೆ ಕೊಡುವುದೇ? ಸ್ನೇಹ ಇರುವುದು ಪ್ರೀತಿಯಲ್ಲಾ, ನಿಕಟ ಒಡನಾಟದಲ್ಲಾ, ತ್ಯಾಗದಲ್ಲಾ, ಸ್ವಾರ್ಥದಲ್ಲಾ ನಿಃಸ್ವಾರ್ಥದಲ್ಲಾ? ಈ ಮಾತಿಗೆ ಕಾಲಮಾನಕ್ಕೊಂದು ವ್ಯಾಖ್ಯೆ ಬಂದುಹೋಗಿವೆ. ಸ್ನೇಹದಲ್ಲಿ ನಿಸ್ವಾರ್ಥ ಇರಬೇಕು ಎಂಬ ಹಳಸಲು ಮಾತುಗಳು ಸದಾ ನಮ್ಮ ನಡುವೆ ಹಾದು ಹೋಗಿವೆ. ಆದರೆ ಗೆಳೆತನ ಈ ಎಲ್ಲಾ ಹಂಗನ್ನೂ ತೊರೆದು ಎರಡು ಜೀವಗಳ ಮಧ್ಯೆ ಲಿಂಗ, ವಯಸ್ಸು, ಜಾತಿ, ವರ್ಚಸ್ತು, ಅಂತಸ್ತು, ಮತಾತೀತವಾಗಿ ಹುಟ್ಟಿಕೊಂಡಿದೆ. ಸ್ನೇಹ ಮತ್ತೊಬ್ಬನನ್ನು ಇತ್ಯಾತ್ಮಕ(ಪಾಸಿಟಿವ್‌)ವಾಗಿ ಬದಲಿಸಬೇಕು ಎಂಬ ಒಂದು ಹಿತ ನುಡಿಯ ಮೇಲೆ ಇಲ್ಲೊಂದು ಕತೆ ಇದೆ. ಅದು ಅತ್ಯಂತ ಜನಪ್ರಿಯ ಕತೆ. ಆದರೆ ಓದಿದ ಪ್ರತಿ ಸಲವೂ ಅದು ನಮ್ಮನ್ನು ಆರ್ದ್ರಗೊಳಿಸುತ್ತದೆ. ಪ್ರತಿ ಓದಿನಲ್ಲೂ ಅದು ನಿಮಗೆ ಏನೇನನ್ನೋ ಹೇಳುತ್ತದೆ. ನಿಮಗೇ ಗೊತ್ತು, ಅದು ಓ ಹೆನ್ರಿ ಕತೆ. ಹೆಸರು:  ಆಫ್ಟರ್‌  20 ಈಯರ್ಸ್‌ (ಇಪ್ಪತ್ತು ವರ್ಷಗಳ ನಂತರ). ಅನುವಾದ: ಚಿತ್ರಾಂಗದ.
ನಮ್ಮ `ತಿಳಿಯ ಹೇಳುವ ಇಷ್ಟಕತೆಯನು' ಮಾಲಿಕೆಯಲ್ಲಿ ಈ ಬಾರಿ ಒಂದು ಅನುವಾದಿತ ಕತೆ. ಓದಿ, ಪ್ರತಿಕ್ರಿಯಿಸಿ.


ದೊಂದು ತಬ್ಬಲಿ ರಾತ್ರಿ. ಕರುಳು ಕೊರೆಯುವ ಚಳಿಗಾಲ. ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು. ಜನ ಸಂದಣಿ ಕಡಿಮೆ. ಒಬ್ಬ ಪೊಲೀಸ್‌ ಪೇದೆಯ ಉಪಸ್ಥಿತಿಯಿತ್ತು. ಅವನಿಗೆ ರಾತ್ರಿ ಪಾಳಿ. ಗಸ್ತು ತಿರುಗುವುದು ಅಭ್ಯಾಸವಾಗಿತ್ತು. ಆದರೆ ಯಾರನ್ನೋ ತೃಪ್ತಿಪಡಿಸುತ್ತಿದ್ದೇನೋ ಎಂಬ ಛಾತಿಯಲ್ಲಿ ಅವನ ನೈಟ್‌ ಬೀಟ್‌ ನಡೆಯುತ್ತಿತ್ತು.
ಅಲ್ಲೊಂದು ಸಣ್ಣ ಕ್ಲಬ್‌. ಅದರ ನಿರ್ಜನತೆಗೆ ವಿರುದಾರ್ಥಕ ಪದವಾಗಿ ಒಬ್ಬ ಆಸಾಮಿ ನಿಂತಿದ್ದ. ಏನೋ ಚಡಪಡಿಕೆ, ಏನೋ ಆತಂಕ, ಯಾವುದೋ ನಿರೀಕ್ಷೆ ಆ ಆಫೀಸರನ ಮುಖದಲ್ಲಿ. ಅವನ ಕಣ್ಣುಗಳು ದೂರದ ನೀರವ ಬೀದಿಗಳತ್ತ ನೆಟ್ಟಿದ್ದವು. ಅಲ್ಲಿಗೆ ಪೊಲೀಸ್‌ ಪೇದೆ ಹೋಗುವುದಕ್ಕೂ ಆ ವ್ಯಕ್ತಿ ತನ್ನ ಸಿಗಾರ್‌ಅನ್ನು ಉರಿಸಲು ಹೊರಡುವುದಕ್ಕೂ ಸರಿ ಹೋಯ್ತು. ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಾಯ್ದರು. ಪೇದೆ `ಸಾರಿ ಸರ್‌, ಕಾಣಲಿಲ್ಲ' ಎಂದ. ಆತ ಪರವಾಗಿಲ್ಲ ಎಂಬಂತೆ ನೋಡಿ, ಪೇದೆಗೆ ಹೇಳತೊಡಗಿದ. `ನಾನು ನನ್ನೊಬ್ಬ ಗೆಳೆಯನಿಗಾಗಿ ಕಾಯ್ತಿದ್ದೇನೆ. ನಿಮಗೆ ಗೊತ್ತಾ, ಇದೊಂಥರ ವಿಚಿತ್ರ ಕೇಸ್‌' .

Monday, December 15, 2008

ದೇವಿಸೂಕ್ತ: ಸಂಧ್ಯೆಯ ವ್ಯಕ್ತ, ಅವ್ಯಕ್ತ

cಸಂಧ್ಯಾದೇವಿ. ಐವತ್ತರ ಆಸುಪಾಸಿನಲ್ಲಿ ತಮ್ಮ `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಎಂಬ ಕವಿತೆಗಳ ದೊಡ್ಡ ಹಣತೆ ಹಿಡಿದು ಕನ್ನಡ ಸಾಹಿತ್ಯ ಲೋಕವನ್ನು ಥಟ್ಟನೆ ಬೆಳಗಿಸಿದವರು.
ತಾವಿಬ್ಬ ಸ್ತ್ರೀಯಾಗಿ ಸ್ತ್ರೀಪರ ಕವಿತೆಯನ್ನೇ ಬರೆಯಬೇಕೆಂಬ ಹಠವಿಲ್ಲದ, ಹೆಣ್ಣು ಮಗಳ ಕವಿತೆಯಾದ ಕಾರಣ `ಸ್ವಲ್ಪ ರೋಚಕವಾಗಿರೋಣ, ಜನ ಓದುತ್ತಾರೆ' ಎಂಬ ಲೋಲುಪತೆ ಇಲ್ಲದ, ಕವಿ ಎಂದ ಕೂಡಲೇ ಘೋಷಣೆ ನಡೆಯಲಿ ಎಂಬ ಹಪಾಹಪಿ ಇಲ್ಲದ, ಕನ್ನಡದ ಅಪರೂಪದ ಕವಯಿತ್ರಿ ಸಂಧ್ಯಾದೇವಿ. `ನಾದದ ಕಡಲಲ್ಲಿ ತೇಲುವ ನಾನೊಂದು ಹಡಗು' ಎಂದು ಬರೆದ ಸಂಧ್ಯಾದೇವಿ ಅವರು ಇದೀಗ ಹೊಸ ಸಂಕಲನ `ಅಗ್ನಿದಿವ್ಯ'ದೊಂದಿಗೆ ಹಾಜರಾಗಿದ್ದಾರೆ.
ಅವರ ಕವಿತೆಗಳನ್ನು ಹೆಚ್ಚು ಹೆಚ್ಚು ವಿಶ್ಲೇಷಿಸಿ ಮೂಗು ತೂರಿಸುವ ಬದಲು ಓದಿ, ಅನುಭವಿಸುವ ಕಾಯಕವಷ್ಟೇ ನಮ್ಮದಾಗಲಿ. ಇಲ್ಲಿ ಅವರ ಸಂಕಲನದ ಕೆಲವು ಸವಿ ಸಾಲುಗಳಿವೆ. ಪ್ರಕಟಿಸಿದ್ದು `ಅಭಿನವ'ದ `ಪಿ. ಪಿ. ಗೆಳೆಯರ `ಅಂಕಣ' ಬಳಗ ಮಾಲೆ'. ಬೆಲೆ ಮೂವತ್ತು ರೂಪಾಯಿ. ಸಂಕಲನದ ಶಾಶ್ವತ ಆನಂದಕ್ಕಾಗಿ ಕೊಂಡು ಓದಿ:
*`...ಇದೀಗ ಇಲ್ಲಿದೆ ಅಚ್ಚರಿ:/ ಬಣ್ಣಗಳ ಮೇಳದಲ್ಲಿ/ ವೇಷ ಕಳಚಿದವ/ ಎಣ್ಣೆ ಹಚ್ಚಿ/ ಬಣ್ಣ ತೆಗೆದವ/ ಚೌಕಿಯಲ್ಲಿ ಒಬ್ಬನಾದರೂ ಇದ್ದೇ ಇದ್ದಾನು'
ಮತ್ತು
...`ಸತ್ತಂತಿದ್ದಾನೆ' ಎನ್ನುತ್ತಾರೆ ಕೆಲವರು/ ಮೂಡರು/ `ಇಲ್ಲ ಇಲ್ಲ'/ ಈಗಷ್ಟೇ ಅಮೃತ ಕುಡಿದು/ ಕಣ್ಣು ಮುಚ್ಚಿ ಕೂತಿದ್ದಾನೆ/ ಎನ್ನುವರು ತಿಳಿದವರು' (ಜಾತ್ರೆಯಲ್ಲಿ ಜ್ಞಾನಿ)

*...ಆಡಿ ಆಡಿ/ ಕಾಣದ ಆಟ/ ಬರೀ ಉಸಿರಾಟ/ ವ್ಯರ್ಥ ಹೋರಾಟ/ ಈ ಜಗವೊಂದು ತೆರೆದ ಕ್ರೀಡಾಂಗಣ/ ಸರ್ವಭೂತಾಂತರಾತ್ಮನಿಗೆ' (ಉಸಿರು ಅಥವಾ ಪ್ರಾಣ)

*...ಸ್ಥಾವರ ಜಂಗಮ ವನಸ್ಪತಿ/ ಪಶುಪಕ್ಷಿ ಪಾಶಾಣ/ ಯಾವ ಯೋನಿಯಲ್ಲಿ ಯಾವ ಶರೀರ/ ಆಯ್ಕೆಯ ಸ್ವಾತಂತ್ರ್ಯ ಯಾರಿಗಿದೆ?/ ಸೃಷ್ಟಿ ಚಕ್ರದಲ್ಲಿ/ ನಮ್ಮನ್ನು ನಿಲ್ಲಿಸಿ/ ಗಿರ್ರನೆ ಒಮ್ಮೆ ಸುಮ್ಮನೆ ತಿರುಗಿಸಿ/ ಯಾವಾಗ ನಿಲ್ಲಿಸುವೆಯೋ ಯಾರಿಗೆ ಗೊತ್ತಿದೆ?/ ಮರಳಿ ಮತ್ತೆಲ್ಲಿ/ ಯಾವ ದೇಶದಲ್ಲಿ/ ಯಾವ ರೂಪದ ಯಾವ ದೇಹದಲ್ಲಿ/ ಯಾವಾಗ ಹುಟ್ಟಿಸುವೆಯೋ? (ಅಂತಿಮ ನಿರ್ಧಾರ)

*... ಕಂಡದ್ದು ಸುಳ್ಳಲ್ಲ/ ಕಾಣದಿದ್ದದ್ದು ಇಲ್ಲವೆಂದಲ್ಲ/ ಆತ್ಮನ ಅಸ್ತಿತ್ವ/ ಕಂಡೂ ಕಾಣದಂತಿರುವುದು..../ಬಿಂಬವಿದ್ದರೆ ಇದ್ದೇ ಇದೆ ಪ್ರತಿಬಿಂಬ/ ಅದಕ್ಕಾಗಿಯೇ ಇದೆ ಎನ್ನುವರು/ ದೇಹವೆಂಬ ಮಾಧ್ಯಮ (ಮಾಧ್ಯಮ)

***
ಅಂದಹಾಗೆ ಇಲ್ಲಿನ ಎಲ್ಲಾ ಕವಿತಾಪುಷ್ಪಗಳಿಗೆ ಇರುವ ಅಧ್ಯಾತ್ಮದ ಎಸಳಿಗೆ ಕಾರಣವೆಂದರೆ ಇಲ್ಲಿನ ಎಲ್ಲಾ ಕವಿತೆಯನ್ನೂ `ಕಠೋಪನಿಷತ್‌'ನ ಶ್ಲೋಕದ ಆಧಾರದಲ್ಲಿ ಬರೆಯಲಾಗಿದೆ. ಒಂದು ಲೆಕ್ಕದಲ್ಲಿ ಅದರ ಭಾವಾನುವಾದವಾದರೂ `ಕಠೋಪನಿಷತ್‌' ಅನ್ನು ಕವಯಿತ್ರಿ ತಮ್ಮ ನೆಲೆಯಲ್ಲಿ, ಇಹ- ಪರದ ನಡುವಲ್ಲಿ ಗ್ರಹಿಸಿದ್ದನ್ನು ಕವಿತೆಯಾಗಿಸಿದ್ದಾರೆ. ಆ ಬಗ್ಗೆ ಅವರು ಪುಸ್ತಿಕೆಯ ಬೆನ್ನಿನಲ್ಲಿ ಬರೆದುಕೊಂಡಿರುವುದು ಹೀಗೆ:
`ಇದು ಕಠೋಪನಿಷತ್‌ ಮಂತ್ರಗಳ ಅಕ್ಷರಶಃ ಅನುವಾದವಲ್ಲ. ಮಂತ್ರಗಳ ಅರ್ಥವನ್ನು ಬಿಡಿಸಿಟ್ಟು ಪದ್ಯ ಕಟ್ಟುವುದು ನನ್ನ ಉದ್ದೇಶವೂ ಅಲ್ಲ. ಇದೇನೆಂದರೆ: ಮಂತ್ರಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆ.

Sunday, December 14, 2008

ದಿವಂಗತ ಶ್ರೀಸಾಮಾನ್ಯ!

IND20109Bಸಿದಾಂತಗಳ ಕತ್ತಿಗೆ ಶ್ರೀಸಾಮಾನ್ಯ ಕತ್ತು ಕತ್ತರಿಸಿಹೋಗುತ್ತಿದೆ. ಭಯೋತ್ಪಾದಕ ದಾಳಿ, ನಕ್ಸಲೀಯ ವಾದ, ಎಲ್‌ಟಿಟಿಇ- ಎಂಬ ಹೆಸರಿನ, ರಕ್ತ ಹರಿಸುವುದೇ ಉದ್ದೇಶವಾದ ನಾನಾ ಸಿದಾಂತಗಳ ಜಗತ್ತಿನಲ್ಲಿ ಒಬ್ಬ ಮಾಮೂಲಿ ಮನುಷ್ಯ ಈಗ ನೆಮ್ಮದಿಯಾಗಿ ನಿದ್ರಿಸಲಾರ. ಹೊರಗೆ ಹೋದ ಗಂಡ, ಹೆಂಡತಿ, ಶಾಲೆಗೆ ಹೋದ ಕಂದಮ್ಮಗಳು ಸುರಕ್ಷಿತವಾಗಿ ವಾಪಾಸು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. `ಕೊನೆಗೊಂಡಿತೋ ಓರ್ವೋರ್ವರ ಗರ್ವದ ಕಾಲ, ಇದು ಸರ್ವರ ಕಾಲ' ಎಂದು ಕುವೆಂಪು `ಶ್ರೀಸಾಮಾನ್ಯಗೀತೆ'ಯನ್ನು ಬರೆದರು. ಆದರೆ ಶ್ರೀಸಾಮಾನ್ಯನ ಗೀತೆ ಇದೀಗ ವಿಷಾದ ರಾಗದಲ್ಲೇ ಕೇಳಿಬರಲು ಪ್ರಾರಂಭವಾಗಿದೆ.
(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ  14-12-2008ರಂದು ಪ್ರಕಟವಾದ ಲೇಖನ)

ಉಗ್ರವಾದ, ನಕ್ಸಲ್‌ ಸಿದಾಂತ ಎನ್ನುತ್ತಾ ಒಂದಿಷ್ಟು ವರ್ಗಗಳು ಕಂಬನಿಯ ಕುಯಿಲಿಗೆ ಹೊರಟಿವೆ. ಆ ಸಮಗ್ರ ಕುಯಿಲಿನ ಕುಡುಗೋಲಿಗೆ ಗೋಣಾಗುತ್ತಿರುವವನ ಹೆಸರು: ಶ್ರೀಸಾಮಾನ್ಯ. ಈತನದು ಯಾವ ದೇಶ, ಯಾವ ಭಾಷೆ, ಯಾವ ವರ್ಗ, ಯಾವ ಲಿಂಗ, ಯಾವ ಕೋಮು, ಯಾವ ಧರ್ಮ ಎಂಬ ಪ್ರಶ್ನೆಗಲ್ಲಿ ಅರ್ಥವಿಲ್ಲ, ಕುಡುಗೋಲು ಪಿಡಿದವಗೆ ಅದು ಮುಖ್ಯವೂ ಅಲ್ಲ. ಎಲ್ಲಾ ಸಿದಾಂತಕ್ಕೂ ತನ್ನನ್ನು ತಾನು ಪ್ರಯೋಗಿಸಿಕೊಳ್ಳಲು ಒಂದು ನವಿರಾದ, ಪ್ರತಿಭಟನೆ ಮಾಡದ, ಬೇರೆ ದಾರಿ ಕಂಡುಕೊಳ್ಳಲಾರದ ಗೋಣು ಬೇಕು.
ಈ ಗೋಣು ಯಾವಾಗಲೂ ಯಾವುದಕ್ಕೂ ಸುಲಭದಲ್ಲಿ ಶರಣು. ಆತನಿಗೆ ಈ ಸಿದಾಂತಗಳ್ಯಾವುದೂ ಗೊತ್ತಾಗುವುದಿಲ್ಲ. ಅಗ್ರಿಮೆಂಟ್‌ ಫಾರ್ಮ್‌ ಅನ್ನು ಓದದೇ ಸೈನ್‌ ಮಾಡಿಬಿಡುವಂತೆ ಈ ಸಿದಾಂತಗಳಿಗೂ ಆತ ಮುಗತೆಯಿಂದ ಬದ.

Tuesday, December 9, 2008

`ನನ್ನಪ್ಪ ಸಾಯದೇ ಇರುತ್ತಿದ್ದರೆ...'

princess02ಮುಂಬೈಯ ಎಷ್ಟು ಮನೆಗಳು ಯಜಮಾನರನ್ನು, ಯಜಮಾನರು ತಮ್ಮ ಹೆಂಗಸರನ್ನು, ಹೆಂಗಸರು ಮಕ್ಕಳನ್ನು, ಮಕ್ಕಳು ಅಪ್ಪ ಅಮ್ಮಂದಿರನ್ನು, ಅಮ್ಮಂದಿರು ಬಂಧು ಬಳಗವನ್ನು ಕಳೆದುಕೊಂಡಿವೆಯೋ- ಗೊತ್ತಿಲ್ಲ. ನಾವು ಸಿದಾಂತವನ್ನು, ನೀತಿಯನ್ನು, ಕ್ರೌರ್ಯವನ್ನೂ ಮಾತಾಡುತ್ತಾ, ಲೇಸ್‌ ತಿನ್ನುತ್ತಾ ಟೀವಿ ನೋಡುತ್ತಾ ಕುಳಿತಿದ್ದೇವೆ.
ಬ್ಲಾಗ್‌ಗೆ ಯಾವುದೇ ಹೊಸ ವಿಚಾರವನ್ನೂ ಹಾಕಲು ಮನಸ್ಸಾಗುತ್ತಿಲ್ಲ. ಏನೇ ವಿಚಾರ ಬಂದಾಗಲೂ ಮತ್ತೆ ಹೊಗೆಯಾಡುತ್ತಿರುವ ಮುಂಬೈ, ಓಡುತ್ತಿರುವ ಭಯಭೀತ ಕಾಲುಗಳು, ಸಂದೀಪ್‌ ಉನ್ನಿಕೃಷ್ಣನ್‌, ಆಸ್ಪತ್ರೆಯ ಹೆಣಗಳು, ಹರಿದುಕೊಂಡು ಬಿದ್ದ ಚಪ್ಪಲಿಗಳು ಕಣ್ಣಿಗೆ ಕಟ್ಟುತ್ತಿವೆ.
ಹಿಂದೆ ಅಮೆರಿಕಾ ಅವಳಿ ಕಟ್ಟದ ಮೇಲೆ ಆದ ಬಾಂಬ್‌ ದಾಳಿಯಲ್ಲೂ ಹೀಗೇ ಆಗಿತ್ತು, ಸುನಾಮಿಯಲ್ಲೂ ಹೀಗೇ. ಆದರೆ ಅದಕ್ಕೂ ಹಿಂದೆ ಹಿರೋಷೀಮಾ, ನಾಗಸಾಕಿಯಲ್ಲಿ ಹೀಗೇ ಆಗಿತ್ತಲ್ಲಾ? ಒಂದು ಕಾಲದ ಆ ದುರಂತ ಈಗಲೂ ಮತ್ತಷ್ಟು ಹತಭಾಗ್ಯರನ್ನು ಹಡೆಯುತ್ತಲೇ ಇದೆ. ಮಕ್ಕಳಿಗೆ ಅಪ್ಪ ಇಲ್ಲದೇ, ತಮ್ಮನಿಗೆ ತಂಗಿಯಿಲ್ಲದೇ ಈಗ ಹಿರೋಷಿಮಾದಲ್ಲಿ ಹಡೆದ ಮಕ್ಕಳ ಬಾಯಲ್ಲೆಲ್ಲಾ ಪ್ರಶ್ನೆಗಳೇ.
ಅಲ್ಲಿನ ಶಾಲಾ ಮಕ್ಕಳು ಬರೆದ ಒಂದಿಷ್ಟು ಕವಿತೆಗಳನ್ನು ಓದಿದರೆ ಕರುಳು ಕಿವುಚುತ್ತದೆ. ಅಂಥ ಮೂರು ಕವಿತೆಗಳ ಭಾವಾನುವಾದ ಇಲ್ಲಿವೆ, ಓದಿ.

Saturday, December 6, 2008

ಕಾಪಾಡು ಶ್ರೀ ಡಿಸೆಂಬರ್‌ ಮಾರಾಯನೇ

hands-folded-in-prayerಈ ಡಿಸೆಂಬರ್‌ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿದೆ. ಭಯೋತ್ಪಾದಕ ಕೃತ್ಯಗಳಿಂದಾಗಿ ಯಾರೂ ನೆಮ್ಮದಿಯಾಗಿ ಆಫೀಸಿಗೆ, ಸಿನಿಮಾಕ್ಕೆ, ಶಾಪಿಂಗ್‌ಗೆ ಹೋಗುತ್ತಿಲ್ಲ. ಚಿತ್ರಮಂದಿರಗಳಿಗೆ, ಮಾಲ್‌ಗಳಿಗೆ ವ್ಯಾಪಾರವಿಲ್ಲ. ಜನ ಸಂಚಾರದಲ್ಲಿ ಒಂದು ಬಗೆಯ ದುಗುಡ.
ಎಲ್ಲಕ್ಕೂ ಮುಖ್ಯವಾಗಿ ಡಿಸೆಂಬರ್‌ ಮಹಾ ಚಳಿಯ ತಿಂಗಳು. ಬೆಂಗಳೂರಿನಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇದ್ದಂತಿಲ್ಲ. ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು. ಆಮೇಲೆ ಬಿಸಿಲಿಗೆ ಮೈ, ಕೈ ಒಡೆದುಕೊಂಡು ಇಡೀ ದಿನ ದೂಡಬೇಕು. ಸಂಜೆಯಾಗುತ್ತಲೇ ಬಹಳ ಬೇಗ ಆವರಿಸಿಕೊಳ್ಳುತ್ತದೆ ಕತ್ತಲು. ಸಂಜೆ ರಾತ್ರಿಯಲ್ಲಿ ಸೇರಿಕೊಂಡು ಯಾವುದು ಸಂಜೆ, ಯಾವುದು ರಾತ್ರಿ ಎಂದೇ ಗುರುತಿಸುವುದು ಕಷ್ಟ. ಹೀಗಾಗಿ ಚಳಿ ನಮ್ಮೆಲ್ಲರನ್ನೂ ಮಂಕಾಗಿಸುತ್ತಿದೆ, ಮೂಡ್‌ ಹಾಳು ಮಾಡುತ್ತಿದೆ.
ಹಿಂದೊಮ್ಮೆ ನವೆಂಬರ್‌ ತಿಂಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯ ನಡೆದದ್ದು ಅಮೆರಿಕಾದ ಅವಳಿ ಕಟ್ಟಡದ ಮೇಲೆ. ಅಲ್ಲಿಂದ ಶುರುವಾದ ಭಯ ಬೆಳೆಯುತ್ತಲೇ ಇದೆ. ಈ ನವೆಂಬರ್‌ನಲ್ಲಂತೂ ಮುಂಬೈ ಭಯೋತ್ಪಾದಕ ಕೃತ್ಯ ಇಡೀ ದೇಶವನ್ನು ನಡುಗಿಸಿದೆ. ಇನ್ನಷ್ಟು ದಾಳಿಯ ಭೀತಿ ಎಲ್ಲಾ ಕಡೆ ಇರುವುದರಿಂದ ಈ ಡಿಸೆಂಬರ್‌ ಆ ಭಯದಲ್ಲೇ ತಿಂಗಳು ದೂಡುವ ಅನಿವಾರ್ಯತೆ ಇದೆ. ಡಿಸೆಂಬರ್‌ ತಿಂಗಳಲ್ಲೇ ಬಾಬ್ರಿ ಮಸೀದಿ ಮೇಲೆ ದಾಳಿ ನಡೆದಿದ್ದರಿಂದ ಆ ಬಗ್ಗೆ ಭೀತಿ ಮುಂದುವರಿದಿದೆ. ಆ ಘಟನೆಯ ನೆನಪು ಸಹಜವಾಗಿ ಒಂದು ತಳಮಳವನ್ನು ಸಣ್ಣಗೆ ಹುಟ್ಟು ಹಾಕಿದೆ.
`ಆವುದೋ ಭಯ ಎಂಥದೋ ಭಯ' ಎಂಬ ಸಾಲಿನ ಗೀತೆಯೊಂದು ಪು. ತಿ. ನರಸಿಂಹಾಚಾರ್‌ ಅವರ `ಗೋಕುಲ ನಿರ್ಗಮನ' ಗೀತ ನಾಟಕದಲ್ಲಿ ಬರುತ್ತದೆ. ಹಾಗೆಯೇ ಈ ಡಿಸೆಂಬರ್‌ನಲ್ಲಿ ನಮ್ಮೆಲ್ಲರಿಗೂ ಕೂಡ ಆವುದೋ ಭಯ. ಮೇಲಕಾರಿಗಳು ಉದ್ಯೋಗಿಯನ್ನು ಚೇಂಬರ್‌ಗೆ ಕರೆದರೆ ಕೆಲಸ ಕಳೆದುಬಿಡುತ್ತಾರೋ ಎಂಬ ಭಯ. ನಮ್ಮ ಏರಿಯಾದಲ್ಲಿ ಯಾವುದೋ ಪಟಾಕಿ ಸಿಡಿದರೆ ಬಾಂಬ್‌ ಇಟ್ಟರೋ ಎಂಬ ಭಯ. ಬೆಂಗಳೂರಿನಲ್ಲಿರುವ ಮಗ/ ಮಗಳು ಊರಲ್ಲಿರುವವರ ಸಂಪರ್ಕಕ್ಕೆ ಎರಡು ದಿನ ಸಿಗಲಿಲ್ಲವೆಂದರೆ ಊರಲ್ಲಿ ಅಪ್ಪ, ಅಮ್ಮಂದಿರಿಗೆ ಆತಂಕ. ಆಫೀಸಿನಿಂದ ಗಂಡ ಬರುವುದು ಸ್ವಲ್ಪ ತಡವಾದರೆ ಹೆಂಡತಿಗೂ, ಮಗ/ಗಳು ಶಾಲೆ, ಕಾಲೇಜಿನಿಂದ ಬರುವುದು ಸ್ವಲ್ಪ ತಡವಾದರೂ ಅಪ್ಪ- ಅಮ್ಮನಿಗೆ ಜೀವವೇ ಬಾಯಿಗೆ ಬಂದ ಹಾಗೆ.
ಬಿವಿ ಕಾರಂತರು `ಗೋಕುಲ ನಿರ್ಗಮನ'ವನ್ನು ರಂಗ ರೂಪಕ್ಕಿಳಿಸಿದಾಗ ಕೊನೆಯಲ್ಲಿ ಒಂದು ದೃಶ್ಯ ತಂದಿದ್ದರು. ಗೋಕುಲ ತೊರೆದು ಹೋದ ಕೃಷ್ಣನಿಗಾಗಿ ಎಲ್ಲರೂ ದೀಪ ಇಟ್ಟುಕೊಂಡು ಕಾಯುತ್ತಾ ಮರಳಿ ಬರುವಂತೆ ಪ್ರಾರ್ಥಿಸಿ ಹಾಡುತ್ತಾರೆ. ಹಾಗೇ ನಾವೆಲ್ಲಾ ಹಾಡಬೇಕು, ನಮ್ಮನ್ನು ಕಾಪಾಡಲು ಬರಲಿರುವ ಆವುದಾದರೂ ಶಕ್ತಿಗಾಗಿ, ನಮ್ಮನ್ನು ಬಿಟ್ಟು ಹೋಗಲಿರುವ ಭೀತಿಗಾಗಿ, ನಮ್ಮನ್ನು ಮತ್ತೆ ಆವರಿಸಿಕೊಳ್ಳಲಿರುವ ನೆಮ್ಮದಿಗಾಗಿ, ನಮ್ಮವರು ರಾತ್ರಿ ಮನೆಗೇ ಬರಬೇಕೆಂಬ ಬೇಡಿಕೆಗಾಗಿ, ಕೆಲಸ ಕಳೆದು ನಿರ್ಗತಿಕರನ್ನಾಗಿ ಮಾಡಬಾರದೆಂಬ ಅಪೇಕ್ಷೆಗಾಗಿ, ರಸ್ತೆ, ಮನೆ, ಶಾಲೆ, ಹೊಟೇಲ್‌, ರೈಲ್ವೇ ನಿಲ್ದಾಣ, ರೈಲುಗಳು ರಕ್ತಸಿಕ್ತವಾಗಬಾರದೆಂಬ ಕಾಳಜಿಗಾಗಿ.

Monday, December 1, 2008

ಇದೀಗ ಬಂದ ಪ್ರತಿಕ್ರಿಯೆ

ಪ್ರಿಯ ವಿಕಾಸ,

IND2771Bಮುಂಬೈ ದುಷ್ಕೃತ್ಯದ ಹಿನ್ನೆಲೆಯಲ್ಲಿ ಹೃದಯದಿಂದ ಮಾತನಾಡಿದ್ದೀರಿ. ಹಾಗೆಂದೆ ನನ್ನ ಹೃದಯವೂ ಹಗರಾಗಿದೆ, ಆತಂಕದ ಸಂದರ್ಭದಲ್ಲಿ ಅಪ್ಪಿಕೊಳ್ಳುವಷ್ಟು. ಆ ಎರಡು ದಿನ ಒಳಗೊಳಗೆ ಅತ್ತವನು ನಾನು. ಇಸ್ಲಾಮಿನ ಹೆಸರಿನಲ್ಲಿ ಮನುಷ್ಯವಿರೋಧಿ ರಕ್ಕಸರು ಮಾಡಿದ ಹೇಯ ಕೃತ್ಯವದು. ಅವರು ತಮ್ಮನ್ನು ಇಸ್ಲಾಮಿಯರು ಎಂದು ಭ್ರಮಿಸಿಕೊಂಡಿದ್ದಾರೆ. ಅವರಷ್ಟೆ ಅಲ್ಲಾ, ಹಾಗೇ ಯೋಚಿಸುವ ಮತಾಂಧರು ಆಳದಲ್ಲಿ ಸೈತಾನರೇ ಆಗಿರುತ್ತಾರೆ. ಇಂತಹ ಕಲ್ಪಿತ
ಜೆಹಾದ್‌ನಲ್ಲಿ ಸತ್ತು ಸ್ವರ್ಗ ಸೇರುತ್ತೇನೆಂಬ ಭ್ರಮೆ ಅವರಿಗಿದ್ದರೆ ನಂಬದಿದ್ದರೂ ನಾನು ಹೇಳುತ್ತೇನೆ. ಅವರು ನರಕಕ್ಕೆ ಮಾತ್ರ ಯೋಗ್ಯರು. ಧರ್ಮದಮಲಿನ ಮತ್ತನ್ನು ನೆತ್ತಿಗೆರಿಸಿಕೊಂಡ ಹಿಂದೂ, ಮುಸ್ಲಿಂ ಇತ್ಯಾದಿ ಅತಿರೇಕಗಳೇ ಚರಿತ್ರೆಯಿಂದ ಇವರೆಗೂ ರಾಕ್ಷಸರನ್ನು ಸೃಷ್ಠಿಸಿರುವುದು. ದೇಶಭಕ್ತಿ, ಧರ್ಮ ಭಕ್ತಿಗಳ ತೋರುಗಾಣಿಕೆಯ ಹಿಂದಿನ ಅಧಿಕಾರ ರಾಜಕಾರಣ ಇಂತಹ ಮತಾಂಧ ಸಾಮಾಜಿಕತೆಯನ್ನು ಸೃಷ್ಠಿಸುತ್ತದೆ. ಜಿನ್ನಾ, ಗೊಲ್ವಾಲ್ಕರ ಮೊದಲಾದವರ
ಚಿಂತನೆಗಳಲ್ಲಿ ಇವತ್ತಿನ ಸಂದರ್ಭದ ಬೀಜಗಳಿವೆ. ಜಿನ್ನಾ ಧಾರ್ಮಿಕನಾಗಿರಲಿಲ್ಲ. ಆದರೆ ಧಾರ್ಮಿಕವೆಂಬ ದೇಶವನ್ನು ಸೃಷ್ಠಿಸಿದ, ಅದು ಶುದ್ಧ ಸ್ಮಶಾನದ ಮೇಲೆ. ಪಾಕಿಸ್ತಾನ ನಿಜಕ್ಕೂ ಬೇಯುತ್ತಿರುವುದೇ ಖಬರಸ್ತಾನ ಮೇಲೆ. ಇತ್ತ ಕಡೆ ಚಿಂತನಗಂಗಾದ ಮಾರ್ಗದರ್ಶನದಲ್ಲಿ ಹಿಂದೂ ಮತೀಯ ರಾಷ್ಟ್ರೀಯ ನಿರ್ಮಾಣಕ್ಕೆ ಗೊಡ್ಸೆ ಮಾಡಿದ್ದು ಅದನ್ನೆ.
ನನಗೀತ ಭಾರತದ ಧಾರ್ಮಿಕ ಭಯೋತ್ಪಾದನೆಯ ಸಂಸ್ಥಾಪಕನೆಂದು ಕಾಣುತ್ತಾನೆ. ಈ ಯಾವ ಅರಿವಿಲ್ಲದೆ ಭಯೋತ್ಪಾದನೆ ಎಂದರೆ ಮುಸ್ಲಿಂರು ಎನ್ನುವುದು. ಮಕ್ಕಳನ್ನು ಹಡೆದು ಜನಸಂಖ್ಯೆ ಹೆಚ್ಚುಸುತ್ತಿದ್ದಾರೆ ಎನ್ನುವುದು. ನೆಮ್ಮದಿಯಿಂದ ದುಡಿದು ಬದುಕುತ್ತಿರುವ ನಿಷ್ಪಾಪಿ ಮುಸ್ಲಿಂರನ್ನು ಸಾಮೂಹಿಕವಾಗಿ ಶಂಕಿಸುವಂತೆ ಹಿಂದೂ ದೇಶಭಕ್ತಿಯ ಸನ್ನಿ ಸೃಷ್ಠಿಯಾಗುತ್ತಿರುವುದು ಇದು ಇನ್ನೊಂದು ಬಗೆಯ ಅತಿರೇಕದ ಅಪಾಯ.
ಲದ್ದಿಜೀವಿಗಳೆಂದು ಲೇವಡಿ ಮಾಡುವುದು, ನಕಲಿ ಜಾತ್ಯಾತೀತರೆನ್ನುವುದು ಇಂತಹ ಬಳಕೆಗಳ ಹಿಂದೆ ವಿವೇಕವನ್ನು ಸಮೂಹ ಸನ್ನಿಯ ಕೈಗೆ ಒಪ್ಪಿಸಿದ ಆಪಾಯವಿದೆ. ಇಂತಹ ಸಂದರ್ಭದಲ್ಲಿ ಇಸ್ಲಾಂ ಕಾಫಿರರನ್ನು ಕೊಲ್ಲು ಎನ್ನುತ್ತದೆ ಇತ್ಯಾದಿ... ಇಸ್ಲಾಮಿನ ಅಪವ್ಯಾಖ್ಯಾನ ಓದಿನ ಕೊರತೆಗಿಂತ ರಾಜಕೀಯ ಅಪಪ್ರಚಾರವೇ ಆಗಿರುತ್ತದೆ.
ಕುರಾನ ಆಗಲಿ, ಭಗವದ್ಗೀತೆಯಾಗಲಿ ಇವತ್ತಿನ ಸಮಸ್ಯೆಗಳಿಗೆ ಉತ್ತರಿಸುತ್ತವೆ ಎನ್ನುವುದೇ ಮೂರ್ಖತನ. ಈ ಮೂರ್ಖರು ಎದರುಬದರು ನಿಂತು ಗುಜರಾತನ್ನು, ಮುಂಬೈಯನ್ನು ಭಯೋತ್ಪಾದಕ ನಕಾಶೆಯಲ್ಲಿ ಗುರುತಿಸಿದ್ದಾರೆ. ಮುಖ್ಯವಾದದ್ದನ್ನು ಹೇಳಿ ಮುಗಿಸುತ್ತೇನೆ. ಈ ಹೊತ್ತಿನ ದುರಂತ ಮತ್ತು ಆಪಾಯವೆಂದರೆ ಭಯೋತ್ಪಾದನೆಯ ವಿರೋಧದ ನೆಪದಲ್ಲಿ ಮುಸ್ಲಿಂ ಜನಸಮುದಾಯ ವಿರೋಧಿ, ಹಿಂದೂ ರಾಜಕಾರಣಕ್ಕೆ ಪೂರಕವಾಗಿ ನಮ್ಮ ಕೆಲ ಬರಹಗಾರ ಮಿತ್ರರು ಆವೇಶವನ್ನು
ಅಪವ್ಯಾಖ್ಯಾನವನ್ನು, ಸುಳ್ಳನ್ನು ಪರಿಣಾಮದಲ್ಲಿ ಅಮೇರಿಕಾದ ಸಾಮ್ರಾಜ್ಯಷಾಹಿ ಏಜೆಂಟರಾಗಿ ಬರಹಕ್ಕೆ ಇಳಿದಿರುವುದು. ಲಾಡೆನ ಬೆಳೆದಿದ್ದು ಹೀಗೆಯೇ, ಅಂತೆಯೇ ಇಂದಿನ ಇಂಡಿಯಾದ ಸೋಕಾಲ್ಡ ಹಿಂದೂ ದೇಶಭಕ್ತ (ನಿಜ ಹಿಂದೂವಲ್ಲದ) ಪತ್ರಕರ್ತರು ಇವರ ಅಪ್ರೋಚ ಬಗ್ಗೆ ನನಗೆ ಖೇದವಿದೆ. ಲಷ್ಕರೆ ಕ್ರಿಮಿಗಳಿಗೂ, ಗೊಡ್ಸೆ, ಮುತಾಲಿಕ ಮೊದಲಾಗಿ ಯಾವ ವ್ಯತ್ಯಾಸವೂ ಆಳದಲ್ಲಿ ಇಲ್ಲ.
ಥ್ಯಾಂಕ ಯೂ ವಿಕಾಸ. ಬರೆಯುತ್ತಾ ದೊಡ್ಡದಾಯಿತು. ನನ್ನದೆಯೂ ಕುದಿಯುತ್ತಿದೆ. ಈ ದೇಶ ತಣ್ಣಗಾಗಿಸಲು.
ಹಿಂದೂ, ಮುಸ್ಲಿಂ ಅತಿರೇಕಗಳಿಂದ ಹೊರ ಬಂದು ಯೋಚಿಸಲು ಸಾಕಷ್ಟು ಇದೆ. ಇಲ್ಲದಿದ್ದರೆ ಭಯೋತ್ಪಾದನೆಯನ್ನು ಖಂಡಿತ ನಿವಾರಿಸಲು ಆಗದು.
ಅಮೇರಿಕಾದ ಗಿಡುಗ ನಮ್ಮ ನೆತ್ತಿಯ ಮೇಲೆ ಹಾರುತ್ತಲೇ ಇದೆ. ಇಂಡಿಯಾದ ಅಸ್ತಿತ್ವದ ಸೂತ್ರವೇ ಇದರ ಪಂಜಿನಲ್ಲಿ ಸಿಕ್ಕು ಹಾಕಿಕೊಂಡಿರುವಾಗ ಕವಿ, ಪತ್ರಕರ್ತ, ಬರಹಗಾರರ ವಿವೇಕ ಸರಿದಾರಿಗೆ ಬರಬೇಕಿದೆ.
ನಿಮ್ಮೊಳಗಿನ ಪ್ರಾಮಾಣಿಕ ಮಿಡಿತಕ್ಕೆ, ಮಾನವೀಯತೆ ಜೊತೆ ನಾನಿದ್ದೇನೆ ವಿಕಾಸ ಕೈಚಾಚಿ ನನ್ನೊಂದಿಗೆ.
ನಿಜ ಹೇಳಲೇ ಆಸರೆಯೂ ಬೇಕಿದೆ ಈ ಹೊತ್ತು. ಬೀಸಿ ಬರುವ ಕಲ್ಲುಗಳಿಂದ ಮರೆಯಾಗಲು, ಮನುಷ್ಯತ್ವದ ತಾಣಬೇಕಿದೆ ನನ್ನಂತವರಿಗೆ.
- ಬಿ. ಪೀರಭಾಷ

ಬಾಂಬು, ಬುಲೆಟ್ಸ್‌, ಭಗವದ್ಗೀತೆ!

IND3092B`ಕಳ್ಳ ಕುಳ್ಳ'ನ ಮನೆಯಲ್ಲಿ ಎರಡು ದಿನಗಳ ಹಿಂದೆ ಬರೆದ `ತೊಳೆಯಲಿ ರಕ್ತ ತೊಡೆಯಲಿ ಕಣ್ಣೀರು' ಲೇಖನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆ ಎಲ್ಲಾ ಪ್ರತಿಕ್ರಿಯೆಯಲ್ಲೂ ಭಯೋತ್ಪಾದನೆಗೆ ಒಕ್ಕೊರಲಿನ `ಕ್ಕಾರ' ವ್ಯಕ್ತವಾಗಿದೆ ಎನ್ನುವುದು ಸಮಾಧಾನಕರ. ಆದರೆ ಒಂದು ಮಾತು, ಮುಂಬೈ ಸೇರಿದಂತೆ ಅನೇಕ ಕಡೆ ಇಷ್ಟು ವರ್ಷಗಳಿಂದ ನಡೆದುಕೊಂಡೇ ಬಂದ ಭಯೋತ್ಪಾದಕ ದಾಳಿಗೆ ಆ ಲೇಖನ ಒಂದು ಪ್ರತಿಕ್ರಿಯೆಯಾಗಿತ್ತು ಅಷ್ಟೇ.
ಆದರೆ ಇಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕು. ಒಂದು, ಮುಸ್ಲಿಂ ಸಮುದಾಯದ ಮೇಲೆ ಇರುವ ಅನುಮಾನ ಅಮಾನವೀಯ ಎನ್ನುವುದು. ಈ ಮಾತುಗಳನ್ನು ಕೆಲವರ ಸಣ್ಣ ಆಕ್ಷೇಪದೊಂದಿಗೆ ನೋಡಿಯಾರು. ಆದರೆ ಒಂದಂತೂ ಸತ್ಯ. ಭಯೋತ್ಪಾದಕತೆಯನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಸಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಕಾನೂನಿನ, ರಕ್ಷಣಾ ತಂತ್ರ ಮಟ್ಟದ ಪರಿಹಾರ ಸಿಗಬೇಕು. ಹಾಗಂತ ಭಯೋತ್ಪಾದನೆ ಎನ್ನುವ ಒಂದು `ಹಿಂಸಾನಿಲುವಿ'ಗೆ ಯಾವುದೇ ಕೋಮನ್ನು ಆರೋಪಿಸುವುದು ಸರಿಯಾದ ಅಭಿಪ್ರಾಯ ಅಲ್ಲ. ಒಂದು ಊರಲ್ಲಿ ಭ್ರೂಣ ಹತ್ಯೆ ಜಾಸ್ತಿ ಆಯಿತು ಎಂದ ಕೂಡಲೇ ಆ ಊರಲ್ಲಿರುವ ಹೆಂಗಸರೆಲ್ಲಾ `ಶಿಶುಹತ್ಯೆ' ಮಾಡುವವರು, ಕಟುಕರು ಎಂದು ಅಭಿಪ್ರಾಯಪಡುವಂತಿಲ್ಲ. ಯಾಕೆಂದರೆ ಅಲ್ಲಿರುವ ಹೆಂಗಸರಲ್ಲಿ ನಿಮ್ಮ ಅಮ್ಮನೂ ಇರಬಹುದಲ್ಲಾ?