Friday, November 28, 2008

ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು

IND2760Bಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ'ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ'ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
IND27164Bಮುಂಬಯಿ, ಬೆಂಗಳೂರು, ದೆಹಲಿ, ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಭಯೋತ್ಪಾದಕತೆ ಒಂದು ಲೆಕ್ಕದಲ್ಲಿ ಪರಸ್ಪರ ದ್ವೇಷದ ಕತೆ ಅಷ್ಟೇ. `ಮುಸ್ಲೀಮರಿಗೆ ಯಾವುದೇ ತೊಂದರೆಯಾಗಬಾರದು' ಎಂದು ಎಚ್ಚರಿಕೆ ನೀಡಲು ಮೊನ್ನೆಯ `ಬ್ಲ್ಯಾಕ್‌ ವೆಡ್ನೆಸ್‌ಡೇ' ಕಾರ್ಯಾಚರಣೆ ನಡೆಯಿತು ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹೇಳಿವೆ. ಇತ್ತೀಚಿನ ಸ್ವಾ ಪ್ರಕರಣ `ಹಿಂದೂ ಭಯೋತ್ಪಾದನೆ'ಯನ್ನು ಪ್ರತಿಪಾದಿಸಿತು. ಅಲ್ಲಿಗೆ ದ್ವೇಷಕ್ಕೆ ದ್ವೇಷದ, ಹಿಂಸೆಗೆ ಹಿಂಸೆಯ ಉತ್ತರವೇ ಸಾಗಬೇಕಾಗುತ್ತದೆ. ಇದೇ ತೀವ್ರಗೊಂಡರೆ ಮುಂದೊಂದು ದಿನ ಉಳಿಯುವುದು ಶಾಂತಿಯಲ್ಲ, ಹೊರತಾಗಿ ಅಲ್ಲಿ ಉಳಿಯುವುದು ದ್ವೇಷ ಮಾತ್ರ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ' ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ' ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ'ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್‌ ನ್ಯೂಸ್‌' (ಸುದಿ ಸೋಟ) ಎನ್ನುವುದು `ಬ್ಲಾಸ್ಟ್‌ ನ್ಯೂಸ್‌' ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.

10 comments:

  1. ಥ್ಯಾಂಕ್ಯೂ ವಿಕಾಸ. ವಿವೇಚನೆಯ ಕೆಲ ಮಾತುಗಳಿಗಾಗಿ.

    ReplyDelete
  2. >>ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.<<

    ರಾಜಕೀಯವಲಯದ ಸುಧೃಡ ನಿರ್ಧಾರಗಳು, ನಮ್ಮ ಮನಸ್ಸುಗಳ ಗಟ್ಟಿತನ, ಇಂಟೆಲಿಜೆನ್ಸ್ ನ ಗೆಲುವುಗಳು ಇವನ್ನೆಲ್ಲಾ ನಂಬಿಕೊಳ್ಳುವುದಕ್ಕಿಂತ ನಿಮ್ಮ ಈ ಮೇಲಿನ ವಾಕ್ಯ ನಿಜವಾಗಲಿ ಅಂತ ಪ್ರಾರ್ಥಿಸುವುದೇ ಸದ್ಯಕ್ಕೆ ಸುಲಭ ಪರಿಹಾರ ಅನ್ನಿಸುತ್ತಿದೆ..

    ReplyDelete
  3. `ಭಾ­ವ­ನಾ­ತ್ಮಕ ಭಯೋ­ತ್ಪಾ­ದನೆ' ಅನ್ನು­ವುದು ಪೂರ್ವ­ಗ್ರಹ ಪೀಡಿತ ಮನ­ಸ್ಸು­ಗ­ಳಲ್ಲಿ ಮಾತ್ರ. ಅವರು ಅದನ್ನು ಸಮಾ­ಜದ ಮೇಲೆ ಹಾಕಿ ಸ್ವಾಸ್ಥ್ಯತೆ ಹಾಳು ಮಾಡು­ತ್ತಿ­ದ್ದಾರೆ. ಹಾಗೆ ನೋಡಿ­ದರೆ, ಈಗಲೂ ನಮ್ಮಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಮನ­ಸ್ಸು­ಗ­ಳಿಗೆ ಕೊರತೆ ಇಲ್ಲ. ಉಳಿ­ದಂತೆ, ಸ್ವಾಸ್ಥ್ಯ ಸಮಾಜ ನಿರ್ಮಾಣ ಕಲ್ಪ­ನೆಯ ನಿಮ್ಮ ಅನಿ­ಸಿ­ಕೆ­ಗಳು ಫೈನ್‌.

    ReplyDelete
  4. Matured thoughts which are rare in such circumstances. keep it up.

    ReplyDelete
  5. ಪ್ರಿಯ ವಿಕಾಸ,
    ಈ ಹಿಂಸೆ, ರಕ್ತಪಾತ, ಪರಸ್ಪರ ಅಪನಂಬಿಕೆ ಧರ್ಮಕಾರಣ ತಾನೆ? ಅದೆಷ್ಟು ವೀರರನ್ನು ನಾವಿನ್ನೂ ಕಳೆದುಕೊಳ್ಳಬೇಕೋ? ದೇಶದ್ರೋಹಕ್ಕೆ ತಕ್ಕ ಶಿಕ್ಷೆ ಜಾರಿಯಾಗದ ಹೊರತೂ ಯಾರಿಗೂ ಬುದ್ಧಿ ಬರದು. ಇಂಥ ವಿಚಾರಗಳಲ್ಲಿ ’ಪಕ್ಷ ರಾಜಕೀಯ’ ವನ್ನು ನಾವೆಲ್ಲರೂ ವಿರೋಧಿಸಬೇಕು.

    ReplyDelete
  6. I agree with you Vikas. But it is high time the Muslims of India come out and show their anger against the ever-growing fanaticism within the Muslim community.

    Remember that the whole world is associating Islam with terrorism...

    Muslim intelligentsia has to take a firm step to come out of such [alleged?] associations..

    ReplyDelete
  7. "ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ’ ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ’ ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ."
    ನಿಜ ಆದರೆ ನಮ್ಮ ಯಾವ ತಪ್ಪಿಗೆ (ಹಿಂದೂಗಳ) ಈ ಶಿಕ್ಷೆ ವಿಕಾಸ್, ನೀವೇನೋ ಕಾವ್ಯಮಯವಾಗಿ ಬರೀತೀರಿ ಆದರೆ ಆ ಭಾವನಾತ್ಮಕ ಮನಸ್ಸು ಅವರಿಗಿಲ್ವಲ್ಲ??? ಕಾಶ್ಮೀರದಿಂದ ಸಹಸ್ರಮಾನಗಳಿಂದ ಬದುಕುಳಿದಿದ್ದ ಪಂಡಿತರನ್ನು ಹಿಂದೂಗಳು ಎನ್ನುವ ಒಂದೆ ಕಾರಣಕ್ಕೆ ಒಡಹುಟ್ಟಿದವರಂತೆ ಬದುಕುತ್ತಿದ್ದವರೆ ಅವರ ಬದುಕನ್ನು ಕಿತ್ತುಕೊಂಡಾಗ ಅವರೇಕೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಲಿಲ್ಲ? ಈ ದೇಶದಲ್ಲಿ ಗಾಂಧಿ ಬುದ್ದ ಎಲ್ಲರೂ ಹಿಂದೂಗಳಷ್ಟೆ ಅಹಿಂಸಾವಾದಿಗಳಾಗಿ ಅಂತ ಹೇಳಿದರಾ? ನಾನು ಮಾತ್ರ ಒಂದು ಕೆನ್ನೆಗೆ ಹೊಡೆದ್ರೆ ಎಷ್ಟು ದಿನ ಇನ್ನೊಂದು ಕೆನ್ನೆ ತೋರಿಸ್ಕೊಂಡು ಒಡಾಡ್ಲಿ? ಗಂಡಾಂತರ ಇನ್ನೂ ಕಾಯ್ತಾ ಇದೆಯಾ? ಈಗಾಗ್ಲೆ ಬಂದಿರೋದು ಸಾಲ್ದ? ನೋಡಿ ವಿಕಾಸ್, ಅವರೆಲ್ಲ ಸಂಖ್ಯೆ ಕಡಿಮೆ ಇರುವಷ್ಟು ಸಮಯ ಮಾತ್ರ ನಿಮ್ಮೊಂದಿಗೆ ಒಳ್ಳೆಯವರೆಂತೆ ನಟಿಸುತ್ತಿದ್ದಾರೆ. ಅಷ್ಟೆ ಭಯೊತ್ಪಾದಕ ಅವರ ಜೊತೆ ಸೇರಿದ ದಿನವೆ ನೀವು ಅದೆ ನೆರೆಮನೆಯವನಿಗೆ ಶತ್ರುವಿನ ಹಾಗೆ ಕಾಣಿಸ್ತಿರ. ಇದಕ್ಕೆ ಅವರ ಧರ್ಮದಲ್ಲಿರುವ ಕಾಫಿರರನ್ನೆಲ್ಲ ಕೊಲ್ಲು ಎನ್ನುವ ಮನೋಭಾವವೇ ಕಾರಣ. ಭಾವನಾತ್ಮಕ ಭಯೋತ್ಪಾದನೆ ಸೂಕ್ಷಮವಾಗಿ ನಿವಾರಿಸಿಕೊಳ್ಳುವುದರ ಬಗ್ಗೆ ಬರೆಯುವ ತಾವು ನಮ್ಮ ನೆರೆಹೊರೆಯ ಮುಸ್ಲಿಂ ಭಾಂದವರಿಗೆ ಹೇಳಿ ಒಪ್ಪಿಸಿ ಅವರಿಗೆ ಧರ್ಮಕ್ಕಿಂತ ದೇಶ ಬದುಕು ದೊಡ್ಡದು ಎಂದು.
    ನಮ್ಮ ರಾಜಕಾರಣಿಗಳು ಲದ್ದಿಜೀವಿಗಳು ಮಾತ್ರವೇ ಈ ತೆರನಾದ ಮೃದು ಧೋರಣೆ ತಾಳುತ್ತಿದ್ದರೆ ಪರವಾಗಿರಲಿಲ್ಲ, ಆದರೆ ನಮ್ಮ ಬೌದ್ದಿಕ ವಲಯ ಕೂಡ ದಿವಾಳಿತನ ಪ್ರದರ್ಶಿಸುತ್ತಿದೆ. ನ್ಯಾಯವನ್ನು ಇದೇ ನ್ಯಾಯ ಅಂತ ಪ್ರತಿಪಾದಿಸುವ ಧೈರ್ಯ ಕೆಚ್ಚು ಬೌದ್ದಿಕವಲಯದಲ್ಲು ಕಾಣೆಯಾಗುತ್ತಿರುವುದೆ ನಿಜಕ್ಕೂ ಕಳವಳಕಾರಿ ಇದಕ್ಕೆ ಕಾರಣ ನಮ್ಮಲ್ಲಿನ ಕ್ಷಾತ್ರ ಗುಣ ಮಾಯವಾಗುತ್ತಿರುವುದೇ ಇರಬಹುದೆ? ಅಹಿಂಸೆ ಎಂದರೆ ಬರಿ ಹಿಂಸೆ ಮಾಡದಿರುವುದಷ್ತೆ ಅಲ್ಲ ಹಿಂಸೆಯನ್ನು ತಡೆಗಟ್ಟಲು ಮಾಡುವ ಎಲ್ಲ ವಿಧಾನಗಳೂ ಕೂಡ ಅಹಿಂಸೆಯೆ ಅದು ಯುದ್ದವಾದರೂ ಸೈ.

    ReplyDelete
  8. ಎಲ್ಲರಿಗೂ ತಮಗೆ ಮುಳ್ಳು ನಾಟಿದಾಗಲೆ ನೊವು ಆಗುವುದು, ಖಂಡನೆಗೆ ಎಲ್ಲ ಜಾತಿಯ ಭಯೊತ್ಪಾದಕರು ಅರ್ಹರೆ, ಹಾಗೆಯೇ ಭಯೊತ್ಪಾದಕರಿಗೆ ಜಾತಿಯಿಲ್ಲ ಎಂದು ಬುದ್ದಿಜೀವಿಯ ಹಾಗೆ ಮಾತನಾಡಲಾರೆ, ಎಲ್ಲರಿಗೂ ಜಾತಿಗಳಿವೆ ಊರಿನ ಸುದ್ದಿ ಬಂದಾಗ ಒಬ್ಬ ಊರಿನ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರೆಂದರೆ ಎಲ್ಲ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರಲ್ಲ. ಆದರೆ ಸರಾಸರಿಯಲ್ಲಿ ಕೆಟ್ಟವರ ಸಂಖ್ಯೆ ಜಾಸ್ತಿ ಬಂದರೆ "ಹೆಚ್ಚಿನ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು" ಎಂದಾಗುತ್ತದೆ, ಅದೇ ಬರಬರುತ್ತಾ "ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು"...ಎಂದಾಗೆ ಒಮ್ಮೆ "ಎಲ್ಲ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು" ಎಂದಾಗುತ್ತದೆ.

    ಮತ್ತು ಉದಾಹರಣೆ ಎಂದರೆ "ಕಿತ್ತೂರು ಸಂಸ್ಥಾನ"ಕ್ಕೆ ಮೋಸಮಾಡಿ ದ್ರೋಹದಿಂದ ಚೆನ್ನಮ್ಮನನ್ನು ಸೇರೆ ಹಿಡಿಸಿದ ಮಲ್ಲಪ್ಪ ಶೆಟ್ಟಿಯಿಂದಾಗಿ, ಇವತ್ತಿಗೂ ಗೆಳೆಯರೊಡನೆಯ ಜಗಳಗಳಲ್ಲಿ, ಮಾತಿನ ಚಕಮಕಿಗಳಲ್ಲಿ ನಾನೂ ಕೂಡಾ 'ಮಲ್ಲಪ್ಪ ಶೆಟ್ಟಿಯೇ" ಎನ್ನುತ್ತಾರೆ, ಅದು ನಮ್ಮ ನಮ್ಮ ಕರ್ಮವಷ್ಟೆ, ಆ ಹೆಸರನ್ನು ಕಳೆದುಕೊಳ್ಳಲು ನಾನು ಮತ್ತು 'ಈ' ಹೆಸರನ್ನು ಕಳೆದುಕೊಳ್ಳಲು ನಾವೇನು ಮಾಡಬೇಕು ಎನ್ನುವುದಷ್ಟೆ ಪ್ರಶ್ನೆ?

    ಉತ್ತರ ಹುಡುಕೋಣ, ಎಲ್ಲರೂ ಒಂದಾಗಿ..

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

    ReplyDelete