Tuesday, August 26, 2008

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ

ನಾವೆಲ್ಲಾ `ಇಲ್ಲಿ ಬಂದೆ ಸುಮ್ಮನೆ'ಗಳು!
ನಮ್ಮಲ್ಲಿ ಹೆಚ್ಚಿನವರಿಗೆ `ಅಲ್ಲಿದೆ ನಮ್ಮನೆ'. ಹೊಟ್ಟೆ ಪಾಡಿನ ಹೆಸರು ಹೇಳಿಕೊಂಡು ನಮ್ಮ ಪಾಡಿಗೆ ನಾವು ಪಟ್ಟಣವಾಸಿಗಳಾದವರು. ಇಲ್ಲಿನ ಬಾಡಿಗೆ, ಭೋಗ್ಯದ ಮನೆಯಾಚೆ ನಮಗಿರುವುದು ಸೋಗೆ ಮನೆ, ನಾಡ ಹೆಂಚಿನ ಮನೆ, ಹೊಗೆ ತುಂಬಿದ ಮನೆ, ಮಳೆ ಬಂದರೆ ಮನೆ ಸೋರುವ ಮನೆ, ರಾತ್ರಿ ಪೂರ್ತಿ ಧೋ ಎಂದು ಮಳೆಯ ಸದ್ದು ಕೇಳಿದ ಮನೆ, ನಾಟಿ ಮಾಡಲು ಬೆಳಿಗ್ಗೆ ಬೇಗ ಸಜ್ಜಾದ ಮನೆ, ತೋಟಕ್ಕೆ ಔಷಧ ಹೊಡೆಸಬೇಕೆಂದು ಗಡಿಬಿಡಿ ಮಾಡಿದ ಮನೆ, ಅಮ್ಮನಿಗೆ ಅಪ್ಪ ಪೆಟ್ಟು ಕೊಟ್ಟಿದ್ದನ್ನು ರಾತ್ರಿ ಎವೆಯಿಕ್ಕದೇ ನೋಡಿದ ಮನೆ, ನೆಂಟರು ಬಂದಾಗ ಸಂಭ್ರಮಿಸಿದ ಮನೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗ ಪಾಸ್‌ ಆದಾಗ ಕುಣಿದು ಕುಪ್ಪಳಿಸಿದ ಮನೆ, ಅಜ್ಜಿ ಸತ್ತಾಗ ಅತ್ತ ಮನೆ.
ಮನೆ ಮನೆ ನಮ್ಮ ಮನೆ, ನಾನು ಅವನು ಬೆಳೆದ ಮನೆ, ಅಪ್ಪ, ಅಮ್ಮ ಇರುವ ಮನೆ...

Monday, August 25, 2008

ಈ ಮನೆಯಲ್ಲಿ ಯಾವಾಗಲೂ (ಕವಿತೆ)

ಹಲವು ಲೇಖನಗಳ ನಡುವೆ ಹೀಗೊಂದು ಕವಿತೆ ನಿಮ್ಮ ಮುಂದೆ. ಈ ಬೆಂಗಾಳಿ ಕವಿತೆ ಹಲವು ಕಾರಣಕ್ಕೆ ನಿಮ್ಮನ್ನು ತಲ್ಲಣಗೊಳಿಸುತ್ತಾ ಹೋಗುತ್ತದೆ, ಅದರ ನಡುವೆಯೇ ಸಣ್ಣ ಭರವಸೆಯನ್ನೂ ಮೂಡಿಸುತ್ತದೆ. ಬಹಳ ಸೂಕ್ಷ್ಮವಾದ ಈ ಕವಿತೆಯ `ಅನುವಾದ'ದ ಪ್ರಯತ್ನ ಮಾತ್ರ ಇಲ್ಲಿದೆ. ಮೂಲ ಕವಿತೆಯ ಸತ್ವವನ್ನು ಈ ಅನುವಾದ ತಾರದೇ ಹೋದರೆ ಕ್ಷಮೆ ಇರಲಿ.

ಯಾವಾಗಲೂ ಈ ಮನೆಯಲ್ಲಿ ಹೀಗೇ
ಬೆಳಗಿನ ಹೊಗೆ ಮನೆಯ ಮಾಡಿಂದ ಮೇಲೆ ಮೇಲೆ
ಬಾಗಿಲು, ಕಿಟಕಿಗಳ ಕಿಂಡಿಯಲ್ಲೂ
ಅವುಗಳ ನಿಟ್ಟುಸಿರ ಮಾಲೆ.
ಅಮ್ಮನ ಕಣ್ಣೀರಿನ ಮುಖವನ್ನು
ಅನ್ನದ ತಪ್ಪಲೆ,
ನೀರಿನ ಹೂಜಿಗಳು ಖಾಲಿಖಾಲಿಯಾಗಿ
ಪ್ರತಿಬಿಂಬಿಸುತ್ತಿವೆ.
ಬೀದಿಯಲ್ಲಿ ಬಿದ್ದ ಒಣ ದೂಳುಗಳ ನೋಡಿದರೆ
ಕಳೆದ ರಾತ್ರಿ ಸುರಿದದ್ದು ಮಳೆಯೋ
ರಕ್ತದ ಹೊಳೆಯೋ
ಹೇಳಲು ದುಸ್ಸಾಧ್ಯ...

ಕಿನ್ನರರ ಕತೆ ಕೇಳುತ್ತಾ
ಒಳಮನೆಯಲ್ಲಿ ನಿದ್ದೆಹೋದ
ಕಂದಮ್ಮಗಳು
ಈಗ ಕಣ್ಣುಜ್ಜುತ್ತಾ
ಖಚಿತಪಡಿಸಿಕೊಳ್ಳುತ್ತಿವೆ;
ಇದು ಕಿನ್ನರರ ಲೋಕವಲ್ಲ,
ತಮ್ಮನ್ನು ಈ ಜಗದಿಂದ ಕೊಂಡೊಯ್ಯುವ
ಯಾವ ಗಾಳಿಯೂ ಇಲ್ಲ.
ಮೆಲ್ಲ ಎದ್ದು ನಿಲ್ಲಲು ಪ್ರಯತ್ನಿಸಿದರೆ
ಎತ್ತಿದ ಕೈಗಳು
ಕಪ್ಪು ಆಕಾಶಕ್ಕೆ ಮುಖ,
ದೃಷ್ಟಿ ಮೂಕ, ಶಕ್ತಿ ಮೂಕ.
ಹೌದೇ, ಅವು ಇಷ್ಟೊತ್ತು
ಹೊಗೆ ತುಂಬಿದ ಎದೆಯಲ್ಲಿ
ಮಲಗಿಬಿಟ್ಟಿದ್ದವೇ?

ಇದೀಗ ದನಿ ಎತ್ತೆತ್ತರಕ್ಕೆ ಏರುತ್ತಿದೆ
ಅದು ನೆರೆಯ ಕೂಗೇ, ನೆರೆಮನೆಯ ಕೂಗೇ
ಸಮುದ್ರ ಮೊರೆವ ಕೂಗೇ
ಹುಡುಕುವ ಮೊದಲೇ ಉತ್ತರ,
ಕೂಗು ಏರುತ್ತದೆ ಎತ್ತರ ಎತ್ತರ..
ಮರದ ಎಲೆಗಳು ಈಗ ಅದುರುತ್ತಲೇ ಇಲ್ಲ
ಹೊಗೆ ಮಾತ್ರ ಎಂದಿನಂತೆ ಸುರುಳಿ ಸುರುಳಿಯಾಗುತ್ತಿವೆ
ಅಳುವ ಕಣ್ಣಲ್ಲೂ ಮುಖ ಎತ್ತುತ್ತಾಳೆ
ಅರೆ ಕ್ಷಣ ತಾಯಿ,
ಹೊಗೆಮನೆಯಿಂದ
ಹೊರಗಿಣುಕುವ
ಮಕ್ಕಳ ನೀನೇ ಕಾಯಿ!

ಮೂಲ: ಅರುಣ್‌ ಮಿತ್ರ (ಬೆಂಗಾಳಿ ಕವಿ)

Wednesday, August 20, 2008

ಡೆಡ್‌ ಎಂಡ್‌, ಟರ್ನ್‌ ಲೆಫ್ಟ್‌!

ಶುಭಂ, ದಿ ಎಂಡ್‌, ಸಮಾಪ್ತಿ
ಹೀಗೆ ಸಿನಿಮಾಗಳು ಮುಗಿಯುತ್ತಿದ್ದ ಕಾಲಕ್ಕೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಹೋರಡಲನುವಾಗುತ್ತಿದ್ದರು, ಮಕ್ಕಳಿಗೆ `ಸಾಕಿನ್ನು, ಟೀವಿ ಆರಿಸಿ' ಎಂಬ ಬುಲಾವ್‌ ಬರುತ್ತಿತ್ತು. ಆಟ ಬಿಟ್ಟು, ಟೀವಿ ಹಚ್ಚಿದ್ದ ಮಕ್ಕಳಿಗೆ ಆಡಲು ಮತ್ತೆ ಮನಸ್ಸಾಗುತ್ತಿತ್ತು. ಒಲೆಯ ಮೇಲಿಟ್ಟ ಅನ್ನದ ತಪ್ಪಲೆ ನೆನಪಾಗುತ್ತಿತ್ತು. ಬಿಟ್ಟ ಕೆಲಸಗಳೆಲ್ಲಾ ಎಲ್ಲರಿಗೂ ಅದೇ ಕ್ಷಣದಲ್ಲಿ ನೆನಪಿಗೆ ಬಂದು `ಥೂ ಎಲ್ಲಾ ಹಾಳಾಯಿತು' ಎಂದು ಚಿಂತೆ ಮೂಡುತ್ತಿತ್ತು.
ಆದರೆ ಸಿನಿಮಾಗಳು ಮಾರ್ಡ್ರನ್‌ ಆಗತೊಡಗಿದ ಮೇಲೆ `ದಿ ಎಂಡ್‌' ಎಂದೆಲ್ಲಾ ಯಾರೂ ಹೇಳಿ, ಸಿನಿಮಾ ಮುಗಿಸುವುದಿಲ್ಲ. ಚಿತ್ರದ ಎರಡು, ಮೂರನೇ ಸ್ತರದ ತಂತ್ರಜ್ಞರ ಹೆಸರುಗಳು ತೆರೆಯ ಮೇಲೆ ಸ್ಕ್ರೋಲ್‌ ಆಗುತ್ತಲೇ ಸಿನಿಮಾ ಮುಗಿಯಿತು ಎಂಬ ಅನುಭವ ಎಲ್ಲರಿಗಾಗುತ್ತದೆ. `ತರ್ಕ', `ಹೆಂಡ್ತಿಗ್ಹೇಳ್ತೀನಿ', `ಪಾಂಡುರಂಗ ವಿಠಲ' ಮೊದಲಾದ ಸಿನಿಮಾಗಳು ಕನ್ನಡದಲ್ಲಿ `ಮಾಡಿದರೆ ಹೀಗೆ ಸಿನಿಮಾವನ್ನು ಎಂಡ್‌ ಮಾಡಬೇಕು' ಎಂದು ತೋರಿಸಿಕೊಡುವಷ್ಟು ಅದ್ಭುತವಾಗಿವೆ. `ಸೈ' ಎಂಬ ಜಪಾನಿ ಸಿನಿಮಾವನ್ನು ನೀವ್ಯಾವಾಗಾದರೂ ನೋಡಿದರೆ `ಅಂತ್ಯ ಹೀಗಿರಬೇಕು' ಎಂದು ನೀವೆಲ್ಲರೂ ಸಂಭ್ರಮಿಸುತ್ತೀರಿ.
ಆದರೆ `ಎಲ್ಲರೂ ಕೊನೆಯಲ್ಲಿ ಸುಖವಾಗಿ ಬಾಳಿದರು' ಎಂಬರ್ಥದಲ್ಲಿ ಸಿನಿಮಾ ಅಂತ್ಯಗೊಂಡರೆ ಆತಂಕವಾಗುತ್ತದೆ. ಯಾಕೆಂದರೆ ಹಾಗಾಗಲು ಸಾಧ್ಯವೇ ಇಲ್ಲ. ಅಷ್ಟು ವರ್ಷ ಪ್ರಿಯತಮ- ಪ್ರಿಯತಮೆಯರು ಕಷ್ಟಪಟ್ಟು, ಕೊನೆಯಲ್ಲಿ ದಿಢೀರನೆ ಪೋಷಕರಿಂದ ಒಪ್ಪಿಗೆ ಪಡೆದುಕೊಂಡರೆ ಆ ಸಂಸಾರ ಮುಂದೆ ಸುಖವಾಗಿರುತ್ತದಾ? ಅಂತರ್ಜಾತಿ ವಿವಾಹ ಆದ ಮೇಲೆ ಇವನ ಮಾಂಸ, ಅವಳ ಸೊಪ್ಪು ಸದೆ ಒಟ್ಟಾಗಿ ಬಾಳುವುದು ಅಷ್ಟು ಸುಲಭದ ಮಾತಾ? ಸಿನಿಮಾ ಇಡೀ ಕೆಟ್ಟದ್ದನ್ನೇ ಮಾಡುವ ಖಳಭೂಪ, ಸಿನಿಮಾದ ಕೊನೆಯಲ್ಲಿ ಕ್ಷಮೆ ಯಾಚಿಸಿದ ಮೇಲೆ, ಒಳ್ಳೆಯತನವನ್ನು ಅವನ ಕಣ ಕಣದಲ್ಲೂ ರೂಢಿಸಿಕೊಂಡು ಬದುಕಲು ಸಾಧ್ಯವಾ?
ಸಿನಿಮಾಗಳ ಪಾತ್ರಗಳ ಬಣ್ಣ ನಿಜವಾಗಿಯೂ ಬಯಲಾಗಬೇಕಾದರೆ `ದಿ ಎಂಡ್‌'ನಿಂದ ಮತ್ತೆ ಆ ಸಿನಿಮಾ ಪ್ರಾರಂಭವಾಗಬೇಕು!
ಆಗ ಮದುವೆಯಲ್ಲಿ ಅಂತ್ಯಗೊಂಡ ಪ್ರೇಮಕತೆಗಳು ಡಿವೋರ್ಸ್‌ನಲ್ಲಿ ಪ್ರಾರಂಭವಾಗಬಹುದು. ಕೇಡಿಗಳನ್ನು ಜೈಲಿಗೆ ಹಾಕಿಸಿದ್ದ ಸಿನಿಮಾಗಳು ಮತ್ತೆ ಅವರ ಕೈಯಿಂದ ನಾಯಕ, ನಾಯಕಿಯರು ಕೊಲೆಯಾಗುವಲ್ಲಿ ಪ್ರಾರಂಭವಾಗಿಬಿಡಬಹುದು. ಒಡೆದು ಒಂದಾದ ಮನೆಗಳು ಮತ್ತೆ ಒಡೆಯುತ್ತಾ ಇನ್ನು ಹತ್ತಿಪ್ಪತ್ತು ಅಂಥ ಸಿನಿಮಾಗಳಿಗೆ ನಾಂದಿ ಹಾಡಬಹುದು. ಒಂದು ಕಾಲಕ್ಕೆ ಹೀನಾಮಾನ ಬೈದಾಡಿಕೊಂಡಿದ್ದ, ಶೀಲವನ್ನು ಶಂಕಿಸಿದ್ದ ಗಂಡ- ಹೆಂಡತಿಯರು ಮತ್ತೆ ಒಂದಾಗುತ್ತಾರೆ, ಆದರೆ ಪರಸ್ಪರರ ನಂಬಿಕೆಗೆ ಆ ಅವಯಲ್ಲಿ ಬಿದ್ದ ಕೊಡಲಿ ಏಟು ಮತ್ತಷ್ಟು `ಡಿವೋರ್ಸ್‌' ಕತೆಗಳ ಹುಟ್ಟಿಗೆ ಕಾರಣವಾಗಬಹುದಲ್ಲಾ? ನಾಯಕ ಸತ್ತ ಎಂಬಲ್ಲಿಗೆ ಕೊನೆಗೊಂಡ ಸಿನಿಮಾಗಳ ನಾಯಕಿಯರಿಗೆ ನಿಧಾನವಾಗಿ ಇನ್ನೊಬ್ಬ ಹುಡುಗನ ಜತೆ ಪ್ರೀತಿ ಪ್ರಾರಂಭವಾಗಿಬಿಡಬಹುದು.
***
ಮಲೆಯಾಳಂನಲ್ಲಿ `ರೀ ರಿಟರ್ನ್ಡ್‌' ಪುರಾಣಗಳು ತುಂಬ ಬಂದಿವೆ. `ಕಂಸಾಯಣ', `ಚಿಂತಾವಿಷ್ಠಯಾ ಸೀತಾ' ಮೊದಲಾದ ಪುರಾಣದ ಮರು ವ್ಯಾಖ್ಯೆಗಳು ಅಲ್ಲಿ ಬಂದಿವೆ. `ಚಿಂತಾವಿಷ್ಠಯಾ ಶ್ಯಾಮಲಾ' ಎಂಬ ಸಿನಿಮಾವೊಂದನ್ನೂ ನಿರ್ದೇಶಕ ಶ್ರೀನಿವಾಸನ್‌ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಮ್ಮ ಎಲ್ಲಾ ಜನಪ್ರಿಯ ಸಿನಿಮಾಗಳನ್ನೂ ಹೀಗೆ ಅಂತ್ಯದಿಂದ ಆರಂಭಿಸಿದರೆ, ಇರುವ ಕತೆಗೆ ಮರು ವ್ಯಾಖ್ಯಾನವನ್ನು ನೀಡಲು ಸಾಧ್ಯವಾದರೆ ಕತೆ ಇಲ್ಲ ಎನ್ನುವವರ ಬಾಯಿ ಒಂದಷ್ಟು ದಿನವಾದರೂ ಬಂದ್‌ ಆಗಬಹುದು.
ರೀಮಿಕ್ಸ್‌ ಮಾಡುವವರು ಹ್ಯಾಗೆ ಇರುವ ಹಾಡನ್ನು `ಇಲ್ಲವಾಗಿಸುವಂತೆ' ಹಾಡುತ್ತಾರೋ ಹಾಗೆ ಇರುವ ಕತೆಯನ್ನು ಅದೇ ಅಲ್ಲ ಎನ್ನುವಂತೆ ಹೊಸದಾಗಿಯೇ ಹೇಳಲು ಪ್ರಯತ್ನಪಡಬಹುದು. ಹಾಗೆ ಒಂದಿಷ್ಟು ಪ್ರಯತ್ನಗಳು ನಡೆದರೆ ಒಂದಿಷ್ಟು ಹೊಸತನವಾದರೂ ಬರುತ್ತದೆ. ಹಾಗೆ ನೋಡಿದರೆ ಕನ್ನಡದಲ್ಲಿ ಎರಡನೇ ಭಾಗಗಳೇ ಅಷ್ಟು ಯಶಸ್ವಿಯಾಗಿ ಮೂಡಿ ಬಂದಿಲ್ಲ. ಆ ಬಗ್ಗೆ ಆಲೋಚಿಸುವುದು ಚಿತ್ರರಂಗದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
***
ಹೀಗೆ ಒಂದು ಆಲೋಚನೆಯನ್ನು ಹುಟ್ಟುಹಾಕಿದ್ದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ `ಏಕವ್ಯಕ್ತಿ ನಾಟಕೋತ್ಸವ'. ಕೃಷ್ಣಮೂರ್ತಿ ಕವತ್ತಾರ್‌ ಎನ್ನುವ ನಿರ್ದೇಶಕ, ನಟರ `ಸಾಯುವನೇ ಚಿರಂಜೀವಿ' ನಾಟಕ ನೂರು ಪ್ರದರ್ಶನದ ಗಡಿಯನ್ನು ಮುಟ್ಟಿದೆ. ಆ ಕಾರಣಕ್ಕೆ ಏಳು ದಿನಗಳ `ಒನ್‌ ಮ್ಯಾನ್‌ ಶೋ' ಉತ್ಸವ ಬೆಂಗಳೂರಿನ `ನಯನ' ಸಭಾಂಗಣದಲ್ಲಿ ನಡೆಯುತ್ತಿದೆ. ಬರುವ ಭಾನುವಾರ (ಆಗಸ್ಟ್‌ 24ರವರೆಗೆ) ನಡೆಯುವ ಈ ಉತ್ಸವದಲ್ಲಿ ನಮ್ಮ ಎಲ್ಲಾ ಪುರಾಣ ಪಾತ್ರಗಳ ಮರು ವ್ಯಾಖ್ಯಾನದ ಪ್ರಸಂಗಗಳೇ ಹೆಚ್ಚಿವೆ. ಈಗಾಗಲೇ ಮಂಗಳಾ ಅವರು ನಡೆಸಿಕೊಟ್ಟ `ಊರ್ಮಿಳಾ' ಪ್ರದರ್ಶನ ರಾಮಾಯಣದ `ಊರ್ಮಿಳಾ' ಪಾತ್ರವನ್ನು ಕುರಿತಾದ್ದು.
ಡಾ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರು ರಚಿಸಿದ ಈ ನಾಟಕ ಪ್ರಾರಂಭವಾಗುವುದೇ 14 ವರ್ಷ ವನವಾಸ ಮುಗಿದ ದಿನದಿಂದ. ಆವರೆಗೆ ಊರ್ಮಿಳಾ ಅನುಭವಿಸಿದ ನೋವು, ನಿರಾಶೆ, ಹತಾಶೆ, ಒಂಟಿತನ, ಆಕೆ ರಾಮಾಯಣವನ್ನು ವಸ್ತುನಿಷ್ಠವಾಗಿ, ಕಟುವಾಗಿ ವಿಶ್ಲೇಷಿಸುವ ರೀತಿ ತುಂಬ ಅರ್ಥಗರ್ಭಿತ. ಗುರುವಾರ `ಅಲೆಗಳಲ್ಲಿ ಅಂತರಂಗ' ನಾಟಕವಿದೆ. ವೈದೇಹಿ ಅವರು ಬರೆದ ಕತೆಯ ಆಧಾರವಿರುವ ಆ ನಾಟಕದಲ್ಲಿ ಶಾಕುಂತಲಾ ಕೇಂದ್ರ ಪಾತ್ರ. ಆಕೆ ಇಡೀ `ಅಭಿಜ್ಞಾನ ಶಾಕುಂತಲ' ಪ್ರಕರಣವನ್ನು ತನ್ನ ದೃಷ್ಟಿಕೋನದಲ್ಲಿ ನೋಡುತ್ತಾಳೆ. ಆ ಪಾತ್ರವನ್ನು ಸೀತಾ ಕೋಟೆ ನಿರ್ವಹಿಸುತ್ತಾರೆ. ಅದೇ ಥರ ಬಿ ಜಯಶ್ರೀ ಅವರ `ಉರಿಯ ಬೇಲಿ' ಏಕವ್ಯಕ್ತಿ ಪ್ರದರ್ಶನ ಶುಕ್ರವಾರ ಇದೆ. ಅದೂ ಒಂದು ಪುರಾಣ ಪಾತ್ರದ ವಿಶ್ಲೇಷಣೆಯಂತೆ. ಡಾ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರು ಬರೆದ ನಾಟಕ ಇದೂ ಕೂಡ. ಆಮೇಲೆ ಕೈಲಾಸಂ ಅವರೇ ತಮ್ಮ ಜೀವನ, ಪಾತ್ರಗಳನ್ನು ವಿಶ್ಲೇಷಿಸುವ `ಟಿಪಿಕಲ್‌ ಟಿಪಿ ಕೈಲಾಸಂ' ನಾಟಕ ಶನಿವಾರ ಇದೆ. ಟಿ ಎನ್‌ ನರಸಿಂಹನ್‌ ಬರೆದ ಈ ನಾಟಕವನ್ನು ಸಿ ಆರ್‌ ಸಿಂಹ ನಿರ್ವಹಿಸುತ್ತಾರೆ. ಕಡೆಯಲ್ಲಿ ಅಶ್ವತ್ಥಾಮನ್‌ನ ಆಂತರಿಕ ತೊಳಲಾಟದ ನಾಟಕ: ಸಾಯುವನೇ ಚಿರಂಜೀವಿ. ಕೃಷ್ಣಮೂರ್ತಿ ಕವತ್ತಾರ್‌ ನಾಟಕ ಅದು.
ಪ್ರತಿ ದಿನ ಸಂಜೆ ಏಳಕ್ಕೆ ಬೆಂಗಳೂರಿನ ಟೌನ್‌ಹಾಲ್‌ ಪಕ್ಕದ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ `ಕನ್ನಡ ಭವನ'ದ ತಳಮನೆ `ನಯನ'ದಲ್ಲಿ ಈ ನಾಟಕಗಳ ಪ್ರದರ್ಶನ. ನೆನಪಿರಲಿ. ಎಲ್ಲಾ ನಾಟಕಗಳ ಪ್ರವೇಶ ದರ ಮೂವತ್ತು ರೂಪಾಯಿಗಳು.

Saturday, August 16, 2008

ದೋಣಿ ಸಾಗಲಾ ಮುಂದೆ ಹೋಗಲಾ?

ದೆಷ್ಟೋ ಮುಖ್ಯಮಂತ್ರಿಗಳು ಪ್ರತಿ ವರ್ಷ ಕಾವೇರಿ ನದಿಗೆ ಬಾಗೀನವನ್ನು ತೇಲಿ ಬಿಡುತ್ತಿದ್ದ ಹೊತ್ತಿಗೆ ಆಗ ಬಾಲ್ಯದಲ್ಲಿದ್ದ ನನ್ನಂಥವರು ನೀರಿನಲ್ಲಿ ಕಾಗದದ ದೋಣಿ ತೇಲಿ ಬಿಡುತ್ತಿದ್ದೆವು.
ಕಾಗದದ ದೋಣಿಗಳಿಗಾಗಿ ಜೀವತೆತ್ತ ನೋರ್ಟ್ಸ್‌ ಹಾಳೆಗಳೂ, ಪತ್ರಿಕೆಯ ಪುಟಪುಗಳೂ, ಅಮ್ಮ ಕೂಡಿಟ್ಟ ಅಮೂಲ್ಯ ರಸೀತಿ ಪತ್ರಗಳೂ, ತವರುಮನೆಯಿಂದ ಅಮ್ಮನಿಗೆ ಬರುತ್ತಿದ್ದ ಕಾಗದ, ಪತ್ರಗಳೂ ದೋಣಿಯಾಗಿ ಮನೆಯ ಅಂಗಳದ ನೀರಲ್ಲಿ ತೇಲಿಸೋ ಇಲ್ಲಾ ಮುಳುಗಿಸೋ ಎಂದು ಸದ್ದಿಲ್ಲದೇ ಹುಯಿಲಿಡುತ್ತಿದ್ದವು. ದೋಣಿ ಹೆಸರಲ್ಲಿ ನೀರುಪಾಲಾದ ಕಾಗದ, ಪತ್ರಗಳನ್ನು ಕಂಡು ಕಂಗಾಲಾಗಿ ಅಮ್ಮ ರಾತ್ರಿ ಬೆತ್ತದ ಸೇವೆ ಮಾಡುತ್ತಿದ್ದಳು. ನಾವು ಇನ್ನಷ್ಟು ಪೆಟ್ಟು ಬೀಳದಿರಲಿ ಎಂದು ಪೆಟ್ಟಿಗೆ ಮುಂಚೆ ಅಳುವಿನ ಸೇವೆ ಮಾಡುತ್ತಿದ್ದೆವು.
ನಾವು ಇಲ್ಲದ ಕರೆಂಟಿನ ಬೇಜಾರನ್ನು, ಇನ್ನೂ ಹಾಕಿಸದ ಟಿವಿಯ ಬಗ್ಗೆ ನೋವನ್ನೂ, ಮಳೆ ಇದ್ದರೂ ಎರಡು ಮೂರು ಕಿಲೋಮೀಟರ್‌ಗಟ್ಟಲೆ ನಡೆದು ಶಾಲೆಗೆ ಸೇರಬೇಕಲ್ಲಾ ಎಂಬ ಮುನಿಸನ್ನೂ, ಹೋಂವರ್ಕ್‌ ಮಾಡಬೇಕೆಂಬ ಸಂಕಟವನ್ನೂ, ಮುಗಿಯದ ಪಿರಿಪಿರಿ ಮಳೆಯನ್ನು ತಡೆಯಲು ಯಾರೂ ಇಲ್ಲವೇ ಎಂಬ ಅಳುಕನ್ನೂ ಮೀರುತ್ತಿರುವಂತೆ ಕಾಗದ, ಪತ್ರ, ಪತ್ರಿಕೆಗಳನ್ನು ಒಂದೊಂದಾಗಿ ಪರಪರನೆ ಸಾಯಿಸುತ್ತಾ ದೋಣಿ ಮಾಡುತ್ತಿದ್ದೆವು. ಹೋದ ಕರೆಂಟ್‌ಗೆ, ಕಾಟ ಕೊಡುವ ತರಗತಿಗಳಿಗೆ, ನಿಲ್ಲದ ಮಳೆಗೆ, ಮುಗಿಯದ ಓದಿಗೆ ಕಂಪ್ಲೆಂಟ್‌ ಬರೆದು ಕಳಿಸುವಂತೆ ದೋಣಿರಾಯನನ್ನು ರಾಯಭಾರಿ ಮಾಡುತ್ತಿದ್ದೆವು. ಆದರೆ ಹೋದ ದೋಣಿ ಒಂದೂ ಮರಳಿ ಬರುತ್ತಿರಲಿಲ್ಲ ಅಥವಾ ಮರಳಿ ಬರಲು ಈವರೆಗೂ ಆ ದೋಣಿಗಳಿಗೆ ನಮ್ಮ ಮನೆಯ ದಾರಿ ಸಿಕ್ಕಿಲ್ಲ!
***
ಹಳ್ಳಿಗಳ ಹುಡುಗರೆಲ್ಲಾ ಮಳೆಗಾಲದಲ್ಲಿ ಒಂದೇ ಸಮನೆ ದೋಣಿ ಬಿಟ್ಟರೆ ಸುಮಾರು ಹತ್ತು ವರ್ಷಗಳಲ್ಲಿ ದೋಣಿಗಳ ಸಂಖ್ಯೆ ಅದೆಷ್ಟಾಗಿರಬೇಡ? ಹಾಗಾಗಿ ಮಕ್ಕಳೆಲ್ಲಾ ದೊಡ್ಡವರಾಗುವ ಹೊತ್ತಿಗೆ, ದೊಡ್ಡವರಾಗಿ ದೊಡ್ಡ ಪಟ್ಟಣ, ಉದ್ದ ಕಟ್ಟಡಗಳಲ್ಲಿ ಕೆಲಸ ಹುಡುಕಿಕೊಳ್ಳುವ ಹೊತ್ತಿಗೆ ಅಮ್ಮನ ಸಾಲ ಸೋಲದ ಕಾಗದ ಪತ್ರಗಳೂ ಹೆಚ್ಚಾಗಿವೆ, ಆ ಪತ್ರಗಳನ್ನೇ ದೋಣಿ ಮಾಡಿಕೊಳ್ಳುತ್ತಾ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಅರೆ, ಅರೆ. ಮಕ್ಕಳು ನೋಡು ನೋಡುತ್ತಲೇ ಆ ಕಾಗದದ ದೋಣಿಗಳನ್ನೇ ಏರಿ ಪಟ್ಟಣ ಸೇರಿದ್ದಾರೆ, ಸೇರುತ್ತಿದ್ದಾರೆ. ನಮ್ಮ ದೋಣಿಗಳಿಗಾಗಿ ಅಪ್ಪ, ಅಮ್ಮನ ಸಾಲ ಸೋಲದ ಕಾಗದ ಪತ್ರಗಳು ಆತ್ಮಹತ್ಯೆ ಮಾಡಿಕೊಂಡಿವೆ. ಅವುಗಳ ಆತ್ಮಹತ್ಯೆಯ ಸೌಧದ ಮೇಲೆ ನಮ್ಮ ಮೊಬೈಲು, ನಮ್ಮ ಲ್ಯಾಪ್‌ಟಾಪ್‌, ನಮ್ಮ ಕರೆನ್ಸಿ, ನಮ್ಮ ಕರೆಂಟ್‌ ಅಕೌಂಟ್‌, ನಮ್ಮ ಅಪಾರ್ಟ್‌ಮೆಂಟ್‌, ಕಾರು, ಮೊಬೈಕು, ಇ ಮೈಲ್‌, ಜಿ ಟಾಕ್‌, ಏರೊಪ್ಲೇನ್‌...
***
ಈಗ ನಾವು ಹಬೆಯ ಕಾಫಿ ಕುಡಿಯುತ್ತಾ ಪೇಪರ್‌ ಓದುತ್ತಿದ್ದೇವೆ. ನಮ್ಮ ಪೇಪರ್‌ನೊಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಾಗೀನವನ್ನು ಕಾವೇರಿಯೊಳಗೆ ತೇಲಿಬಿಟ್ಟ ಫೋಟೋ, ಮೂರು ಕಾಲಮ್ಮು ಸುದ್ದಿ. ನನಗೆ ಬೆವರು ಬರುತ್ತದೆ, ಈವರೆಗೆ ಮುಖ್ಯಮಂತ್ರಿಗಳೆಲ್ಲಾ ಬಿಟ್ಟು ಬಿಟ್ಟ ಬಾಗೀನಗಳೆಲ್ಲಾ ನಮ್ಮ ಕಾಗದದ ದೋಣಿಗಳಂತೆ ಇಡೀ ರಾಜ್ಯವನ್ನು, ರಾಷ್ಟ್ರವನ್ನು ತುಂಬಿಬಿಟ್ಟಿವೆಯೇ? ಹಾಗಾಗಿಯೇ ಊರೂರುಗಳಲ್ಲಿ ಮನೆ, ಮಠ, ಮನುಷ್ಯ, ಮಕ್ಕಳು ಮುಳುಗಿ ಹೋಗುತ್ತಿದ್ದಾರಾ?
ಇದೀಗ ಮಳೆಗೆ ಸತ್ತ ಮಕ್ಕಳು, ಮುರಿದು ಹೋದ ಮನೆ, ಕುಸಿದುಬಿದ್ದ ಛಾವಣಿ, ಎಡಕ್ಕೆ ಮಗುಚಿ ಬಿದ್ದ ಬಾಗಿಲು, ಕಿಟಕಿಗಳೆಲ್ಲಾ ನನಗೆ ಕಾಗದದ ದೋಣಿಯ ಹಾಗೆ ಕಾಣುತ್ತಿವೆ.
ಒದ್ದೆಯಾಗಿ, ಮುದ್ದೆಯಾಗಿ, ಇನ್ನಷ್ಟು ಸಾವಿನ ಸುದ್ದಿಯನ್ನು ಇನ್ನೇನು ತಂದು ಪತ್ರಿಕೆಗಳ ಕಾಗದಗಳಲ್ಲಿ ತುಂಬಲಿರುವಂತೆ... `ಬ್ರೇಕಿಂಗ್‌ ನ್ಯೂಸ್‌'ಗಳ ಹೊಟ್ಟೆಯನ್ನು ಕಷ್ಟಪಟ್ಟು ತುಂಬುತ್ತಿರುವಂತೆ...

Tuesday, August 12, 2008

ಮುಕ್ತ... ಮುಕ್ತ...

ಧಾರಾವಾಹಿ ಎಂಬ ಶ್ರೀ ಕೃಷ್ಣ ಪರಮಾತ್ಮ ಸಂಜೆ ಆರರಿಂದ ಪ್ರಾರಂಭವಾಗಿ ರಾತ್ರಿ ಹತ್ತೂವರೆವರೆಗೆ ಮುಂದುವರಿಯುವ `ಮಧ್ಯಮವರ್ಗದ ಜೀವನ'ವನ್ನು ಪೊರೆಯುತ್ತಿದ್ದಾನೆ. ಆ ಹೊತ್ತಿಗೆ ಮನೆಯಲ್ಲಿರುವ ಹೆಣ್ಣುಮಕ್ಕಳು ಕೆಲಸ ಮರೆಯುತ್ತಾ, ಹೆಂಗಸರು ಒಲೆ ಮೇಲಿಟ್ಟ ಅನ್ನ ಮರೆಯುತ್ತಾ, ಗಂಡಸರು ಓದಲಿಟ್ಟ ಪೇಪರ್‌ ಮರೆಯುತ್ತಾ, ಗಂಡು ಮಕ್ಕಳು ಸಂಜೆಯಾಗುವವರೆಗೂ ಆಡುವ ಕ್ರಿಕೆಟ್‌ ಮರೆಯುತ್ತಾ ಟೀವಿ ಮುಂದೆ ಪ್ರತಿಷ್ಠಾಪಿಸಲ್ಪಡುತ್ತಾವೆ...

ಕೃಷ್ಣನಾ ಕೊಳಲಿನ ಕರೆ

ತೊಟ್ಟಿಲ ಹಸುಗೂಸು ಮರೆ ಮರೆ

ೃಂದಾವನಕೆ ತ್ವರೆ ತ್ವರೆ

ಕೃಷ್ಣನ... ಕೊಳಲಿನ... ಕರೆ...

***

`ಮಿಂಚು'ವಿನ ಜಗದೀಶ ಆರಾಮಾಗಲಿ, ಅಲ್ಲಿನ ರಾಜೀವನಿಗೆ ಜೈಲಾಗಲಿ, ಕಾತ್ಯಾಯಿನಿ ಮತ್ತೆ ಹುಟ್ಟಿ ಬರಲಿ, ಸಂಜನಾಗೆ ಇನ್ನೊಂದು ಮದುವೆಯಾಗಲಿ, `ಮುಗಿಲು'ಗಳೇ ಎಂಬ ಟೈಟಲ್‌ ಸಾಂಗ್‌ ಅನ್ನು ದಿನವೂ ಸಂಪೂರ್ಣ ಹಾಕುತ್ತಿರಲಿ, ಪಟ್ರೆ ಅವನಿಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲಿ, ಮೇಘಕ್ಕನಿಗೆ, ತಂಗಿ ವರ್ಷಾಗೆ ನ್ಯಾಯ ಸಿಗಲಿ, ಸುರಭಿಗೆ ಇನ್ನೊಂದು ಮದುವೆ ಆಗದಿರಲಿ, ಸುರಭಿ- ಶಶಿ ಒಂದಾಗಲಿ, `ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...' ಹಾಡಂತೆ ಟಿ ಎನ್‌ ಸೀತಾರಾಂ ಹೆಣ್ಣು ಮಕ್ಕಳ ಜೀವ ತಿಂದು ಕತೆಯನ್ನು ಮುಂದುವರಿಸುತ್ತಾ ಹೋಗಲಿ, ಬೇಗ ಬೇಗ ಕೋರ್ಟ್‌ ಸೀನ್‌ ಬರಲಿ, ಸೀತಾರಾಂ ಆಗಾಗ ಕಾಣಿಸಿಕೊಂಡು ಯಾರನ್ನಾದರೂ ಬೈಯ್ಯುತ್ತಿರಲಿ...

ಮುಗಿಲು ಮೂಕವಾಗಿ

ಯುಗವೇ ತಾಪವಾಗಿ

ಕತ್ತಲು ಬಿರಿದು ಮಿಂಚೀತೇ ಇಂದು

ಮಿಂಚು ಮಿಂಚು ಸುಳಿ ಮಿಂಚು

ಅದು ಬೇಟೆಯಾಡುವ ಮಿಂಚು...

***

ಟೀವೀಲಿ ಒಂದೊಂದು ದಿನ ಒಂದೊಂದು ಧಾರಾವಾಹೀಲಿ ಗರ್ಭಪಾತ ಮಾಡಿಸ್ಕೊಳ್ಳೋಕೆ ಹೋಗ್ತಾ ಇರ್ತಾರೆ, ಚಾನಲ್‌ನೋರೇ ಏನೂ ಹೇಳೋಲ್ಲ. ಇನ್ನು ನಾನು ಈ ಗರ್ಭ ತೆಗೆಸಿಕೊಂಡರೆ ಏನಾಗುತ್ತದೆ ಅಮ್ಮ ಎಂದು ಐಟಿ ಫರ್ಮ್‌ ಒಂದಕ್ಕೆ ರಾತ್ರಿ ಪಾಳಿಗೆ ಹೋಗುವ ಮಗಳು ಅಮ್ಮನನ್ನು ಕೇಳುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲೆಲ್ಲಾ ಕಾಲು ಊನ, ಕೈ ಊನ ಮಾಡಿಕೊಂಡ ಹೆಣ್ಣು ಮಕ್ಕಳು ಇದ್ದೇ ಇರ್ತಾರೆ ಎಂದು ಗಾಲಿಕುರ್ಚಿ ಮೇಲೆ ಕುಳಿತು ಇಡೀ ದಿನ ಕಳೆಯುವ ಹುಡುಗಿ `ಟೀವಿ ಆರಿಸು'ವಂತೆ ಹಠ ಹಿಡಿಯುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲಿ ಗಂಡಸರಲ್ಲಿ ಒಬ್ಬರಿಲ್ಲಾ ಒಬ್ಬರು ಬೇಜವಾಬ್ದಾರರಿರುತ್ತಾರಲ್ಲಾ ಎಂದು ಒಬ್ಬ ಮಗ ಮನೆಯಲ್ಲೇ ಪಿ ಎಚ್‌ಡಿ ಮಾಡುತ್ತಾನೆ.

ತನ್ನಾವರಣವೇ ಸೆರೆ ಮನೆಯಾದರೆ

ಜೀವಕೆ ಎಲ್ಲಿಯ ಮುಕ್ತಿ...

ಬೆಳಕಿನ ಬಟ್ಟೆಯ ಮುಟ್ಟುವ ಜ್ಯೋತಿಗೆ

ಬಯಲೇ ಜೀವನ್ಮುಕ್ತಿ...

***

ಪ್ರೇಕ್ಷಕ ಪರಮಾತ್ಮನ ಕೈಯ್ಯಲ್ಲಿ ರಿಮೋಟ್‌ ಎಂಬ ಸುದರ್ಶನ ಚಕ್ರ. ಬಟನ್‌ಗಳು ಒತ್ತುತ್ತಾ ಹೋದಂತೆ `ಸುವರ್ಣ ನ್ಯೂಸ್‌ಗೆ ಸ್ವಾಗತ, ಮುಖ್ಯಾಂಶಗಳು... ಬಾಂಬ್‌ ದಾಳಿ ಬಗ್ಗೆ ನಿಮಗೇನನ್ನಿಸುತ್ತದೆ... ನೀವು ತುಂಬ ಚೆನ್ನಾಗಿ ಹಾಡಿದಿರಿ, ಆದರೆ ಶ್ರುತಿ ಬಗ್ಗೆ ಸ್ವಲ್ಪ ಗಮನ ಕೊಡಿ. ಸಾಹಿತ್ಯ ಸ್ಪಷ್ಟವಾಗಿರಲಿಲ್ಲ. ಎರಡನೇ ಪ್ಯಾರಾ ಎರಡನೇ ಲೈನ್‌ನಲ್ಲಿ ಶಾರ್ಪ್‌ ಹಾಡಿದಿರಿ, ಆದರೆ ಅದು ಫ್ಲಾಟ್‌. ಆದರೆ ಓವರ್‌ ಆಲ್‌ ಒಳ್ಳೆಯ ಪರ್‌ಫಾರ್ಮೆನ್ಸ್‌... ಇವತ್ತು ನಮ್ಮ ಜತೆಗಿದ್ದಾರೆ ಕನ್ನಡ ಚಿತ್ರರಂಗದ ಖ್ಯಾತ ಕತೆಗಾರ ಅಜ್‌ ಕುಮಾರ್‌. ಇವರ ಈವರೆಗಿನ ಚಿತ್ರಗಳ ಮೌಲ್ಯಗಳ ಬಗ್ಗೆ ಇಲ್ಲಿ ಒಂದು ಗಂಟೆಗಳ ಕಾಲ ಡಿಸ್‌ಕಷನ್‌... ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ... ನೀವು ಗೆದ್ದಿರೋದು ಎರಡು ಸಾವಿರ ರೂಪಾಯಿಗಳ ಚಿನ್ನ, ಚಪ್ಪಾಳೆ...

ಅಯ್ಯೋ ಮತ್ತೆ ಪವರ್‌ಕಟ್‌!

ದೇವರೇ ಕರೆಂಟು ಬೇಗ ಬರಲಿ, ಧಾರಾವಾಹಿಗಳ ಕತೆ ಮುಗಿಯದಿರಲಿ, ಎಷ್ಟೇ ವರ್ಷವಾಗಲೀ, ಧಾರಾವಾಹಿ ನಿಲ್ಲದಿರಲಿ, ಬಾಂಬ್‌ ಬ್ಲಾಸ್ಟ್‌ ಬಗ್ಗೆ ಒಂದೊಂದು ಚಾನಲ್‌ನವರು ಒಂದೊಂದು ವಿಶೇಷ ಕಾರ್ಯಕ್ರಮ ಮಾಡುತ್ತಿರಲಿ, ಬಾಂಬ್‌ ಬ್ಲಾಸ್ಟ್‌ ಹೀಗೇ ಮುಂದುವರಿಯಲಿ, `ಸಿಂಗರ್‌ ಹಂಟ್‌' ಕಾರ್ಯಕ್ರಮಗಳಲ್ಲಿ ಮಕ್ಕಳು ಶ್ರುತಿ ಸೇರಿಸಿ ಹಾಡಲಿ, ಜಡ್ಜ್‌ಗಳು `ಶ್ರುತಿ ಸರಿಯಿರಲಿಲ್ಲ' ಎಂದು ಕಾಮೆಂಟ್‌ ಮಾಡುತ್ತಿರಲಿ...

Sunday, August 10, 2008

ಅಳು ಬರುವ ಹಾಗಿದೆ...


ಮಳೆಗಾಲ ಉತ್ಕರ್ಷ ಸ್ಥಿತಿಯಲ್ಲಿ ಇರಬೇಕಾಗಿದ್ದ ಈ ಆಗಸ್ಟ್‌ ತಿಂಗಳ ಆರಂಭ ಭಾಗದಲ್ಲಿ `ಮಳೆ ಬರುವ ಸೂಚನೆ'ಯಲ್ಲೇ ದಿನಾ ಬೆಳಗಾಗುತ್ತಿದೆ. ಬರುವ ಸ್ವಾತಂತ್ರ್ಯ ದಿನಾಚರಣೆ, ಬರುವ ವರಮಹಾಲಕ್ಷ್ಮೀ ಹಬ್ಬ, ಬರುವ ಚೌತಿ, ಬರುವ ಕೃಷ್ಣಾಷ್ಟಮಿಗಳನ್ನು ಬರಮಾಡಿಕೊಳ್ಳಲು ಯಾಕೆ ಯಾರಿಗೂ ಮನಸೇ ಇಲ್ಲ?
`ಒಂದು ಕಾಲಕ್ಕೆ ಹಬ್ಬ ಎಂದರೆ ಎಂಥ ಗೌಜು, ಎಂಥ ಗದ್ದಲ, ಎಂಥ ಮೋಜು, ಎಂಥ ಮಸ್ತಿ...' ಎಂದು ಹಳೆಯ ರಾಗವನ್ನು ಹಾಡಬೇಕೆಂದಿಲ್ಲ. ಆದರೆ ಈ ಸಲ ಒಂದು ಕಡೆ ಮಳೆಯ ಅಬ್ಬರ, ಮತ್ತೊಂದು ಕಡೆ ಮಳೆ ಬರುವ ಸೂಚನೆ. ಇದರ ನಡುವೆ ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಿದಂತೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಬಾಂಬ್‌ ಸಿಡಿತದ ಸದ್ದು. ಮಕ್ಕಳನ್ನು ಪೇಟೆಯಲ್ಲಿ ಬಿಟ್ಟ ಅಪ್ಪ ಅಮ್ಮಂದಿರು ಊರಿನಿಂದ ದಿನಕ್ಕೊಂದಾವರ್ತಿ ಫೋನ್‌ ಮಾಡುತ್ತಾರೆ. `ಹ್ಯಾಗಿದೀಯೋ, ಬಾಂಬ್‌ ಬ್ಲಾಸ್ಟ್‌ ಆಯ್ತಂತೆ' ಎಂದು ಆತಂಕದ ಮಾತುಗಳ ನಡುವೆ ಕಂಪಿಸುತ್ತಿದ್ದಾರೆ.
ಆದರೆ ಹಬ್ಬ ಎಂದರೆ ಊರಿಗೆ ಹೋಗಲು ರಜೆ ಸಿಗಬೇಕು, ಬಸ್‌ಸ್ಟ್ಯಾಂಡ್‌ಗೆ ಹೋಗಲು ಮಳೆ ಬಿಡಬೇಕು, ಟಿಕೇಟು ಮೊದಲೇ ಮಾಡಿಸಿಟ್ಟುಕೊಂಡಿರಬೇಕು. ಸಿಗುವ ನಾಲ್ಕು ದಿನದ ರಜೆಯ ಹೊತ್ತಿಗೆ ಆಫೀಸಲ್ಲಿ ಆಗಬೇಕಾದ ಕೆಲಸವನ್ನು ಮೊದಲೇ ಮುಗಿಸಿಕೊಳ್ಳಬೇಕು. ಇದೆಲ್ಲಾ ಆದ ಮೇಲೂ ರಜೆ ಸಿಕ್ಕ ಮೇಲೂ, ಅಬ್ಬಾ ಎಂದು ನಿಟ್ಟುಸಿರು ಬಿಟ್ಟಂತೆ ಊರಿನ ಬಸ್‌ ಇಳಿದ ಮೇಲೂ ಹಬ್ಬದ ಕಳೆ ಬರುವುದಿಲ್ಲ. ಅಡಕೆ ತೋಟಕ್ಕೆ ಔಷ ಹೊಡೆಸಿಲ್ಲ, ಬಿತ್ತನೆ ಬೀಜದ ರೇಟು ಜಾಸ್ತಿ ಆಯ್ತು, ಮಳೆ ಕಡಿಮೆಯಾಗದೇ ಹೋದರೆ ಯಾ ಮಳೆ ಬರದೇ ಹೋದರೆ ಎಂಬ ಆತಂಕ. ಹಬ್ಬದ ದಿನ ದೇವರಿಗೆ ಮಹಾಮಂಗಳಾರತಿ ನಡೆಯುವಾಗಲೂ ಅಮ್ಮನ ಮುಖದಲ್ಲಿ ಸಣ್ಣ ಆತಂಕ, ಅದರ ನಡುವೆಯೂ ಊರಿಗೆ ಅಪರೂಪಕ್ಕೆ ಬಂದಿರುವ ಮಗ- ಸೊಸೆಯರನ್ನು ವಿಚಾರಿಸಿಕೊಳ್ಳಬೇಕಾದ ಅನಿವಾರ್ಯ.
ಬೆಂಗಳೂರಿನ ಆತಂಕಕ್ಕಿಂತ ಹಳ್ಳಿಯ ಅಪ್ಪ ಅಮ್ಮನ ಆತಂಕ ಹೆಚ್ಚೋ ಕಡಿಮೆಯೋ ಎನ್ನುವ ಆಲೋಚನೆಯಲ್ಲಿ ಮಗ- ಸೊಸೆಯ ನಾಲ್ಕು ದಿನಗಳ ರಜೆ ಮುಗಿದು ಹೋಗುತ್ತದೆ. ಜಿನಿಗುಡುವ ಮಳೆ. ಸರ್ಕಾರ ದಯೆಪಾಲಿಸಿದ ಪವರ್‌ಕಟ್‌. ಯಾರಿಗೋ ಹಬ್ಬದ ದಿನವೇ ಹುಷಾರಿಲ್ಲ. ಫೋನ್‌ ಡೆಡ್‌ ಆಗಿದೆ, ದನ ಕರು ಹಾಕಿದೆ, ಆದರೆ ಕಸ ಬಿದ್ದಿಲ್ಲ. ಆ ಕರು ಇಷ್ಟು ರಾತ್ರಿ ಆದರೂ ಮನೆಗೆ ಬಂದಿಲ್ಲ ನೋಡೋ ಮಾರಾಯ. ಈ ಊರಲ್ಲಿ ಯಾವಾಗಲೂ ಫೋನು ಕೆಟ್ಟು ಹೋಗುತ್ತದೆ, ಒಂದು ಮೊಬೈಲು ಕೊಡಿಸಿಬಿಡಲಾ? ಮೊಬೈಲ್‌ ತೆಗೆದುಕೊಳ್ಳಬೇಕಾದರೆ ಇಬ್ಬರ ಆಥರೈಜೇಷನ್‌ ಬೇಕು ಎಂಬ ಸರ್ಕಾರದ ಹೊಸ ಕಾನೂನು. ಬೆಂಗಳೂರಿನಲ್ಲಿ ಮತ್ತೆ ಬಾಂಬ್‌ ಸ್ಪೋಟ, ಯಾರಿಗೂ ಗಾಯಗಳಾಗಿಲ್ಲ. ನಿಮ್ಮ ಟಾಯ್ಲೆಟ್‌ ಬೆಳ್ಳಗಾಗಬೇಕಾದರೆ ಹಾರ್ಪಿಕ್‌ ಬಳಸಿ. ನಿಮ್ಮ ಮಕ್ಕಳು ಪ್ಯೂರಿಫೈಯರ್‌ನ ನೀರನ್ನೇ ಕುಡಿಯುತ್ತಾರಾ. ಮಾತಾಡೋನೇ ಮಹಾಶೂರ. ಈ ಇಪ್ಪತ್ತೈದು ವರ್ಷದ ಯುವತಿ ಕಾಣೆಯಾಗಿದ್ದಾಳೆ, ಇನ್ನೂ ಮನೆಗೆ ಬಂದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಟಿವಿ 9ನಲ್ಲಿ ಮಾತ್ರ. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ.
ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ, ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ...
ಅಳು ಬರುವ ಹಾಗಿದೆ...

ಹೊಸರುಚಿ



ಮೂರ್ನಾಲ್ಕು ದಿನಗಳಿಂದ
ನಾವು ನಮ್ಮ ನೆಂಟರ
ಕಾಲು, ಕೈ, ಹೃದಯ, ಕರುಳುಗಳನ್ನು
ಬೇಯಿಸಿಕೊಂಡು ತಿನ್ನುತ್ತಿದ್ದೇವೆ.
ಬೇಯಿಸಿದ್ದನ್ನು ತಿನ್ನುವಾಗ ಆಗುವ
ಸಂಭ್ರಮ ಹ್ಯಾಗಿರುತ್ತದೆಂದು ನನಗೆ
ತಿಳಿದೇ ಇರಲಿಲ್ಲ, ನೋಡಿ.

ಎಲ್ಲರೂ ಹೊಸ ರುಚಿ
ಮಾಡುವುದು ಹೇಗೆ ಎಂದು
ಕೇಳುತ್ತಾರೆ,
ಪತ್ರಿಕೆ, ಚಾನಲ್‌ನವರು
ಮಾಡುವ ವಿಧಾನವನ್ನಷ್ಟೇ
ಹೇಳುತ್ತಾರೆ.
ಆದರೆ ತಿನ್ನುವುದು ಹೇಗೆ?
ಈ ಸಲದ ನಮ್ಮ ಸ್ಪೆಷಲ್‌;
ನಾವು ಕಂಡುಕೊಂಡ ಆ ಹೊಸ ರುಚಿಯನ್ನು
ತಿನ್ನುವುದು ಹೇಗೆ?

ಬೆಳಿಗ್ಗೆಯಿಂದ ಸಂಜೆಯವರೆಗೆ
ಮನೆಗೆ ಫೋನು ಮಾಡಿ
ತಯಾರಾಗುತ್ತಿರುವ
ಹೊಸ ರುಚಿಯ ಬಗ್ಗೆ,
ನೆಂಟರಿಷ್ಟರ ಅವಯವಗಳು
ಖಾದ್ಯಗಳಾಗಿ ತಯಾರಾಗುತ್ತಿರುವ ಬಗ್ಗೆ
ವಿವರವಾಗಿ ತಿಳಿದುಕೊಳ್ಳಿ.
ಎಸ್ಸೆಮ್ಮೆಸ್‌ ಮೂಲಕ
ತಕ್ಷಣದ ಬೆಳವಣಿಗೆಯನ್ನು
ರವಾನಿಸಲು ಹೇಳುತ್ತಿರಿ.

ಆನಂತರ ಆಫೀಸಿನಿಂದ ಬನ್ನಿ,
ಕೈಕಾಲು ತೊಳೆದುಕೊಳ್ಳಿ,
ಬಟ್ಟೆ ಬದಲಿಸಿಕೊಳ್ಳಿ,
ಹೆಂಡತಿ ಕೊಟ್ಟ ಕಾಫಿ, ಸುದ್ದಿ, ಗಾಳಿಮಾತಿನೊಂದಿಗೆ
ಟೀವಿ ಆನ್‌ ಮಾಡಿ.
ಸತ್ತ ನಿಮ್ಮ ನೆಂಟರಿಷ್ಟರು
ಕ್ಯಾಮರಾ ಬೆಳಕಿನ ಬೆಂಕಿಯಲ್ಲಿ
ಬೇಯುತ್ತಿರುತ್ತಾರೆ,
ಹೊಗೆಯ ಮಧ್ಯೆ, ಆಸ್ಪತ್ರೆಯ ಪಿನಾಯಿಲ್‌ ಮಧ್ಯೆ
ಬೆಯ್ದ ಸಾದಿಷ್ಟ ಮಾಂಸದ ಸುತ್ತ
ಆಕ್ರಂದನಗಳ ಹಿನ್ನೆಲೆ ಸಂಗೀತ.
ಆಗಾಗ ನಿಮ್ಮನ್ನು ರಂಜಿಸಲು
`ಹೇಗೆ ಕೈ ಬೆಂದಿತು, ಏನನಿಸಿತು' ಎಂಬ
ಕ್ವಶ್ಚನ್‌ ಅವರ್‌.

ನಿಮ್ಮ ಕಣ್ಗಳನ್ನು ಬಾಯಂತೆ
ತೆರೆದುಕೊಳ್ಳಿ.
ಬೆಯ್ದ ದೇಹವನ್ನು
ಕೈ, ಕಾಲು, ಹೊಟ್ಟೆ, ಮೂಗು, ಬಾಯಿ
ರಕ್ತದ ಕಲೆ, ಮಣ್ಣಲ್ಲಿ ಮಿಂದ ತಲೆಗೂದಲು
ಎಂದು ಬೇರ್ಪಡಿಸಿ
ಎವೆಯಿಕ್ಕದೇ ತಿನ್ನತೊಡಗಿರಿ,
ತಿಂದು ತಿಂದು ಅನುಭವ ಆಗಿಹೋಗಿರುವ
ಮೈಕ್‌ಮನ್‌ಗಳು, ಗನ್‌ಮನ್‌ಗಳು
ಖಾಕಿ, ಖಾದಿ, ಕೈದಿಗಳ
ಕಣ್ಣುಗಳ ಯಾಂತ್ರಿಕ ಚಪ್ಪರಿಕೆಯ
ಕಡೆಗೂ ಆಗಾಗ ನಿಮ್ಮ ಗಮನವಿರಲಿ.

ತಿನ್ನುತ್ತಾ ತಿನ್ನುತ್ತಾ
ಚಪ್ಪರಿಸುತ್ತಾ ಸವಿಯುತ್ತಾ ಹೋದಹಾಗೇ
ಮುಂದೊಮ್ಮೆ ನಿಮ್ಮ ಮುಂದೆ
ನಿಮ್ಮ ಹೆಂಡತಿ, ಮಕ್ಕಳ
ಕೈಕಾಲುಗಳು ಬೇಯುತ್ತಿದ್ದರೂ
ನಿಮ್ಮ ಬಾಯಲಿ ನೀರೂರುತ್ತದೆ.

Friday, August 8, 2008

ಪರಿಚಿತ ನೋವೇ...

ಪರಿಚಿತನಾದದ್ದಕ್ಕೇ
ಈ ಪರಿಯ
ಫಜೀತಿ,
ನೀ ನಮ್ಮೆಲ್ಲರ ಗೊಡವೆ,
ಕೆಟ್ಟ ಕನವರಿಕೆಯ
ನೋವೇ
ಸಾವೇ!

ನೀ ಪರಿಚಿತನಲ್ಲದೇ ಇನ್ನೇನು;
ಸಾವಿರದ ಮನೆಯ
ಸಾಸಿವೆ ಕೇಳಿದರೆ
ನಾವು ಕೊಡುವುದಿಲ್ಲ,
ಅರೆ ಏಕೆ ಎನ್ನುತ್ತೀರಾ?
ಇಷ್ಟೇ ಸಾಕು ಎಂದರೂ ಬಿಡದಷ್ಟು
ಮಂದಿ
ನನ್ನ ಮುಂದೆ ಸರತಿ ನಿಂತು
ಸತ್ತಿದ್ದಾರೆ
ನಮ್ಮವರು ಅವರ ಎತ್ತಿದ್ದಾರೆ
ಬಿಕ್ಕುತ್ತಲೇ ಬೆಂಕಿ ಇಕ್ಕಿದ್ದಾರೆ...

ನನ್ನ ಸುತ್ತಮುತ್ತೆಲ್ಲಾ
ಕೆಲವರು ಇದ್ದೂ ಸತ್ತು,
ಸತ್ತೂ ಅಮರರಾದಂತೆ ಇದ್ದು,
ಮತ್ತೂ ಕೆಲವರು ಭೂತವಾಗೆದ್ದು,
ನನ್ನೊಳಗಿನ ಪ್ರಶ್ನೆಗಳ ಗುದ್ದಾಟವಾಗಿದ್ದಾಗ
ನಮ್ಮೊಂದಿಗೆ ಸುಳಿದಾಡುತ್ತಿದ್ದುದು
ನೀವೇ,
ಸಾವೇ!
ಸಾವೇ,
ನೀವೇ ಹಾಗೆ
ಶಬ್ದಕ್ಕಷ್ಟೇ ನಿಮಗೆ
ಪದ ಪರ್ಯಾಯ
ಮತ್ತೆ
ಎಲ್ಲರ ಉತ್ತರಕ್ರಿಯೆ
ಅನಿವಾರ್ಯ...

ಹಳೆ ಊರಲ್ಲಿ ಹೊಸ ಹುಡುಕಾಟ

ಮೊನ್ನೆ ಬಿಸಿಲ ಝಳ ಕಡಿಮೆಯಾಗುತ್ತಿರುವ ಒಂದು ಸಂಜೆ ಸಣ್ಣ ಬ್ಯಾಗ್‌ ಹೆಗಲಿಗೇರಿಸಿಕೊಂಡು, ಉಡುಪಿ ಬಸ್‌ಸ್ಟಾಪ್‌ನಲ್ಲಿ ಇಳಿದೆ. ಒಂದು ಕಾಲಕ್ಕೆ ಆ ಜಾಗ ನನ್ನ ಅತ್ಯಂತ ಪರಿಚಿತ ಜಾಗವಾಗಿತ್ತು ಎಂಬುದನ್ನು ಆಗ ನನಗೆ ನಂಬಲೇ ಆಗಲಿಲ್ಲ. ಅದೇ ರಸ್ತೆ, ಅದೇ ಒಳದಾರಿ, ಅದೇ ಬಂಗಾರದಂಗಡಿ, ಅದೇ ಬ್ಯಾಂಕ್‌, ಅದೇ ರಥಬೀದಿ, ಅದೇ ಶಾಲೆ, ಅದೇ ಆಟದ ಬಯಲು. ಹೀಗೆ ಭೌತಿಕವಾಗಿ ಅದೇ ಶಹರ, ಅದೇ ವಿವರ. ಬಸ್‌ಸ್ಟ್ಯಾಂಡ್‌ ಜಾಗ ಬದಲಿಸಿಕೊಂಡಿತ್ತು, ರಸ್ತೆಗಳು ಕೆಲವೆಡೆ ಒನ್‌ವೇ, ಕೆಲವೆಡೆ ಟೂ ವೇ ಆಗಿದ್ದವು ಎಂಬಂಥ ಒಂದಷ್ಟು ವ್ಯತ್ಯಾಸಗಳಿದ್ದರೂ ಅವು ಒಂದು ಕಾಲದ ಆ ನಗರದ ಹಳಬರನ್ನು ದಿಕ್ಕು ತಪ್ಪಿಸುವಂತೇನೂ ಇರಲಿಲ್ಲ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ಇದೇ ಉಡುಪಿಯಲ್ಲಿ ನಾನು ಚಡ್ಡಿ ಹಾಕಿಕೊಂಡು ರಸ್ತೆ ರಸ್ತೆಗಳನ್ನು ಅಲೆದಿದ್ದೆ. ಏಳರಿಂದ ಎಸ್ಸೆಸ್ಸೆಲ್ಸಿವರೆಗೆ ಅಲ್ಲಿನ ಶಾಲೆಯೊಂದರಲ್ಲೇ ಕಲಿತಿದ್ದೆ, ಅಲ್ಲಿನ ಮಠಗಳಲ್ಲೇ ವಾಸ್ತವ್ಯ ಹೂಡಿದ್ದೆ. ಅಲ್ಲಿನ ಕೃಷ್ಣನ ಮನೆಯಲ್ಲೇ ಉಂಡಿದ್ದೆ. ಅಲ್ಲಿನ ಪುಷ್ಕರಣಿಗಳಲ್ಲಿ ಈಜು ಬರದ ನನ್ನಂಥವರ ಜತೆ ಕಡಿಮೆ ನೀರು ಇರುವಲ್ಲಿ ಸ್ನಾನ ಮಾಡಿದ್ದೆ. ಏಕಾದಶಿ ಬಂದಾಗ ಮಠದವರು ಊಟ ಹಾಕುವುದಿಲ್ಲವಾದ್ದರಿಂದ ಆಗ ನಾನೇ ಉಪ್ಪಿಟ್ಟು ಮಾಡಿಕೊಂಡು, ದೋಸೆ ಹೊಯ್ದುಕೊಂಡು ಹೊಟ್ಟೆ ಹೊರೆದುಕೊಂಡಿದ್ದೆ.
ನಾನು ತೀರ್ಥಹಳ್ಳಿಯ ಹುಡುಗ. ಉಡುಪಿಗೆ ಕಲಿಯಲಿ ಎಂದು ಅಮ್ಮ ನನ್ನನ್ನು ಕಳಿಸಿಕೊಟ್ಟಳು. ಉಡುಪಿಯಲ್ಲಿ ನನ್ನ ಜೀವನ ಶುರುವಾದ ಮೊದಲ ವರ್ಷ ನನ್ನ ಕಣ್ಣು ಪಟ್ಟಣ ನೋಡುವುದಕ್ಕಿಂತ ಹೆಚ್ಚು ಕಣ್ಣೀರನ್ನೇ ನೋಡಿತ್ತು. ಮನೆ ಬಿಟ್ಟು ಬಂದ ದುಃಖದಲ್ಲಿ ಕಂತು ಕಂತುಗಳಲ್ಲಿ ಅತ್ತು ಕರೆದು ಊರನ್ನು ನೆನಪು ಮಾಡಿಕೊಳ್ಳತೊಡಗಿದ್ದೆ. ಆದರೆ ನಿಧಾನವಾಗಿ ನನ್ನ ದೇಹ ಮತ್ತು ಮನಸ್ಸು ಆ ನಗರವನ್ನು ನನ್ನ ಬೆಳವಣಿಗೆಯ ಭಾಗವಾಗಿ ಸ್ವೀಕರಿಸಿತು. ಸಿನಿಮಾಗಳನ್ನು ಕದ್ದು ನೋಡುವ ಮೂಲಕ, ರಾಜಾಂಗಣದ ಯಕ್ಷಗಾನಗಳನ್ನು, ಬೀದಿಬೀದಿಗಳ ಆರ್ಕೆಷ್ಟ್ರಾಗಳನ್ನು, ಗಣೇಶ ಹಬ್ಬದ ತೊದಲು ಬೊಂಬೆಯಾಟವನ್ನು ಗುಂಪು ಗುಂಪಾಗಿ ನೋಡುವ ಮೂಲಕ ನಾನು ಉಡುಪಿಯ ಮನೆ ಮಗನಾಗಿದ್ದೆ, ತೀರ್ಥಹಳ್ಳಿ ಭಾಷೆಯನ್ನು ನಿಧಾನವಾಗಿ ಮರೆತು, ಮಂಗಳೂರು ಕನ್ನಡವನ್ನು ರೂಢಿಸಿಕೊಳ್ಳತೊಡಗಿದ್ದೆ.
ಅದೆಲ್ಲಾ ಕೊನೆಗೊಂಡು, ಉಜಿರೆಗೆ ಹೋಗಿ ಅಲ್ಲಿ ಡಿಗ್ರಿವರೆಗೆ ಕಲಿತು, ಆಮೇಲೆ ಬೆಂಗಳೂರು ಸೇರಿ ವೃತ್ತಿ ಪ್ರಾರಂಭಿಸಿ ಬೆಂಗಳೂರೇ ನನ್ನ ಮನೆ ಎಂದು ನನ್ನನ್ನು ನಾನು ನಂಬಿಸಿಕೊಂಡ ಹೊತ್ತಲ್ಲಿ ಮೊನ್ನೆ ಉಡುಪಿಗೆ ಹೋಗಿದ್ದು. ಒಂದೂವರೆ ದಿನ ಅಲ್ಲೇ ಉಳಿದುಕೊಂಡೆ. ಅಲ್ಲೇ ಸಿನಿಮಾ ನೋಡಿದೆ. ಏನನ್ನೋ ಕಳೆದುಕೊಂಡವನಂತೆ ದಿಕ್ಕು ನೋಡುತ್ತಾ ರಸ್ತೆ ರಸ್ತೆಗಳನ್ನು ಅಲೆದೆ. ಕೃಷ್ಣ ಮಠ ಸುತ್ತಿ ಬಂದೆ. ಅಷ್ಟಮಠ ಅಳೆದು ಬಂದೆ. ಅಲ್ಲಿ ಕೊಟ್ಟ ತೀರ್ಥ, ಪ್ರಸಾದ, ಗಂಧಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿದೆ. ಅನಂತೇಶ್ವರ ದೇವಸ್ಥಾನಕ್ಕೆ ಎಣ್ಣೆ ಬತ್ತಿ ಸೇವೆ ಸಲ್ಲಿಸಿದೆ. ಕುಂಕುಮ ಹಚ್ಚಿಕೊಳ್ಳುವಾಗ ಈಗಿನ ಪೆಡಸು ಹಣೆಯ ಜಾಗದಲ್ಲಿ ಹಿಂದೊಮ್ಮೆ ನೆಲೆಸಿದ್ದ ನನ್ನ ಎಳಸು ಹಣೆಯನ್ನು ಸವರಿ ಸವರಿ ಹುಡುಕಿಕೊಂಡೆ. ರಥಬೀದಿಯನ್ನು ಸುತ್ತುವಾಗ ಕಟ್ಟಿಗೆ ರಥ ಹಾಗೆಯೇ ಇತ್ತು. ರಥಬೀದಿಯನ್ನು ಸದಾ ಸಲಹುವ ಸೆಗಣಿಯ ಘಂ ವಾಸನೆ ಹಾಗೇ ಇತ್ತು, ಮಠದಿಂದ ಮಠಕ್ಕೆ ಸಾಲು ಸಾಲು ವಟುಗಳು ದಂಡೆತ್ತಿ ಹೋಗುವಾಗ ಅವರಲ್ಲೊಬ್ಬ ನಾನೇ ಆದಂತೆ ರೋಮಾಂಚಿತನಾದೆ. `ಓಹೋ ಅದೇ ಉಡುಪಿ' ಎಂದು ಒಂದು ಕ್ಷಣ ಮನಸ್ಸು ಪ್ರಫುಲ್ಲವಾಯಿತು.
ಆದರೂ ಇದು ನಾನು ನೋಡಿದ ಉಡುಪಿಯಲ್ಲ! ನನ್ನ ಉಡುಪಿ ಒಂದು ಕಾಲಕ್ಕೆ ದಯಾಮಯವಾಗಿತ್ತು. ಮನೆಗೆ ಹೋಗುವ ನೆನಪಾದಾಗಲೆಲ್ಲಾ ಬಸ್‌ಸ್ಟಾಂಡ್‌ಗೆ ಓಡಿ ಹೋಗಿ, ನಮ್ಮೂರಿಗೆ ಹೋಗುವ ಬಸ್‌ಗಳನ್ನೇ ನೋಡಿ ಸಮಾಧಾನ ಮಾಡಿಕೊಂಡಾಗ ಇದೇ ಉಡುಪಿ ನನ್ನನ್ನು `ಬುಲ್ಪೊಡ್ಚಿ' (ಅಳಬೇಡ) ಎಂದು ತುಳುವಿನಲ್ಲಿ ಸಮಾಧಾನ ಮಾಡಿತ್ತು. ಒಮ್ಮೆ ಹಾಸ್ಟೆಲ್‌ನಲ್ಲಿ ಒಬ್ಬನೇ ಇದ್ದಾಗ ಹಠಾತ್‌ ಹೊಟ್ಟೆನೋವು ಪ್ರಾರಂಭವಾಗಿ ಹೊರಳಾಡುತ್ತಿದ್ದವನನ್ನು ಅಲ್ಲಿನ ಪೋಸ್ಟ್‌ ಹಾಕುವ ಅಪರಿಚಿತ ಹೆಂಗಸೊಬ್ಬಳು ಶುಶ್ರೂಷೆ ಮಾಡಿದ್ದಳು. ರಥಬೀದಿ ಸುತ್ತಮುತ್ತಲ ಅದೆಷ್ಟೋ ಹೆಸರು ಗೊತ್ತಿಲ್ಲದವರ ಮನೆಗಗಳ ಟೀವಿ ಪರದೆಗಳು ನಮ್ಮಂಥ ಹಾಸ್ಟೆಲ್‌ ಹುಡುಗರಿಗೆ ಭಾನುವಾರದ ಸಿನಿಮಾ ತೋರಿಸಿ, ವರ್ಲ್ಡ್‌ ಕಪ್‌ ಮ್ಯಾಚ್‌ ತೋರಿಸಿ ಹರೆಯ ಬರಿಸಿದ್ದವು. ಸಾರ್ವಜನಿಕ ಗಣೇಶೋತ್ಸವ ನಡೆಸುವ ಅದೆಷ್ಟೋ ಸಮಿತಿಗಳು ಪಂಚಕಜ್ಜಾಯ ತಿನ್ನಿಸಿ, ಬಾಯಿ ಒರೆಸಿಕೋ ಮರ್ಲಾ (ಹುಚ್ಚಾ) ಎಂದು ಪ್ರೀತಿಯಿಂದ ಗದರಿದ್ದವು. ಅಲ್ಲಿನ ಬೇಕರಿ ಅಂಗಡಿಗಳು ನಮಗೆ ಕಡಿಮೆ ದುಡ್ಡಿಗೆ ರಸ್ಕ್‌ ಕೊಟ್ಟು ಕೊಟ್ಟು ತಿಂಡಿಯ ರುಚಿ ಹತ್ತಿಸಿದ್ದವು. ವಿದ್ಯಾಭೂಷಣ್‌ ಹಾಡಿರುವ `ಏಳು ನಾರಾಯಣನೇ ಏಳು ಲಕ್ಷ್ಮೀ ರಮಣ' ಎಂಬ ಹಾಡನ್ನು ದಿನಾ ಬೆಳಿಗ್ಗೆ ಐದಕ್ಕೇ ಹಾಕಿ, ಕೃಷ್ಣನನ್ನಲ್ಲ, ಇಡೀ ಉಡುಪಿಯವರನ್ನು ಕೃಷ್ಣಮಠ ಎಬ್ಬಿಸಿತ್ತು.
ಇದನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಲಾಡ್ಜ್‌ ಒಂದರ ಮೂರನೇ ಮಹಡಿಯಲ್ಲಿ ಮೊನ್ನೆ ತಂಗಿದ್ದಾಗ ಆ ರಾತ್ರಿ ನನ್ನನ್ನು ಯೋಚನೆಗೆ ಹಚ್ಚತೊಡಗಿತು. ಮನಸ್ಸು ಹೊಸ ಉಡುಪಿಯಲ್ಲಿ ಹಳೆಯ ಉಡುಪಿಯನ್ನು ಹುಡುಕುತ್ತಾ ಹಠ ಮಾಡುವುದನ್ನು ಮುಂದುವರಿಸಿಯೇ ಇತ್ತು. ನಿಧಾನವಾಗಿ ಚಿಂತೆ, ಚಿಂತನೆ ಶುರುವಾಯಿತು. ಕಾರಣ ಕೆದಕತೊಡಗಿತು. ಒಂದು ಕಾರಣ ಇದಿರಬಹುದೇ? ಎಲ್ಲಾ ನಗರಗಳಂತೆ ಉಡುಪಿಯೂ ಸಾಕಷ್ಟು ಬೆಳೆದು ನಿಂತಿದೆ. ಇನ್ನೊಬ್ಬರ ಮನೆಗೆ ಹೋಗಿ ಟೀವಿ ನೋಡುವುದಕ್ಕೆ ಆಸ್ಪದವನ್ನೇ ಕೊಡದಂತೆ ಹಾಸ್ಟೆಲ್‌ಗೇ ಟೀವಿ ಬಂದಿದೆ. ಈ ಜನರೇಷನ್‌ನ ತಿಂಡಿ ಹುಚ್ಚು ಗಣೇಶೋತ್ಸವದ ಪಂಚಕಜ್ಜಾಯವನ್ನೂ ಮೀರಿ, ಪಿಡ್ಜಾ- ಬರ್ಗರ್‌ಗಳನ್ನು ತಾಕಿದೆ. ತಂತ್ರಜ್ಞಾನದ ಸಂಪರ್ಕ ತಂತುಗಳು ಎಲ್ಲಾ ನಗರಗಳನ್ನೂ ಸುತ್ತಿಕೊಳ್ಳುತ್ತಿವೆ. ಎಲ್ಲಾ ನಗರಗಳಂತೆ ಉಡುಪಿಯೂ ಹೆಚ್ಚು ತಾಂತ್ರಿಕವಾಗುತ್ತಿದೆ, ಯಾಂತ್ರಿಕವಾಗುತ್ತಿದೆ.
ಅಲ್ಲ, ಇದೂ ಕಾರಣವಲ್ಲ. ಪ್ರಪಂಚದ ಎಲ್ಲಾ ನಗರಗಳೂ ಒಬ್ಬನ ಬಾಲ್ಯದಲ್ಲಿ ಸಿಕ್ಕ ನಗರಗಳೇ ಆಗಿ ಯಾವತ್ತೂ ಉಳಿದಿಲ್ಲ ಮತ್ತು ಉಳಿಯುವುದಿಲ್ಲ. ಅವರ ಪಾಲಿಗೆ ಅವರ ಬಾಲ್ಯದ ನಗರ/ ಹಳ್ಳಿ/ ಮನೆ/ ಮನ ಅವರ ಯೌವನಾವಸ್ಥೆಯಲ್ಲಿ ತನ್ನ ಕೌಮಾರ್ಯವನ್ನು ಕಳೆದುಕೊಂಡಿರುತ್ತದೆ!
ಅಲ್ಲ, ಹಾಗೂ ಅಲ್ಲವೇನೋ? ಹೀಗೆ ಅದೂ ಇದೂ ಜಿಜ್ಞಾಸೆಗಳ ಕೊನೆಯಲ್ಲಿ, ವೇದನೆ ಜತೆ ಮಧ್ಯರಾತ್ರಿ ಎಷ್ಟೋ ಹೊತ್ತಿಗೆ ನಿದ್ರೆಗೆ ಜಾರುವಾಗ ಥಟ್ಟನೆ ಅಂದುಕೊಂಡೆ: ಹಳೆಯ ಉಡುಪಿ ಹೊಸ ಉಡುಪಿಯಾಗಿ ಬದಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಳೆ ನಾನು ಹೊಸ ನಾನಾಗಿಯಂತೂ ಖಂಡಿತ ಬದಲಾಗಿದ್ದೇನೆ. ಮನುಷ್ಯ ತಾನು ಬದಲಾಗಿ, ಇನ್ನೊಬ್ಬರು ಬದಲಾದರು ಎಂದು ಭಾವಿಸಿಕೊಳ್ಳುತ್ತಾ ಹೋಗುತ್ತಾನೆ. ಉದಾಹರಣೆಗೆ ರಾಮಾಯಣ ಬದಲಾಗುವುದಿಲ್ಲ, ಆ ಕತೆ ಕೇಳುತ್ತಾ ಬೆಳೆದವನು ತನ್ನ ನಿಲುವುಗಳನ್ನು ವಯಸ್ಸಿಗನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ಹೋಗುತ್ತಾನೆ ಮತ್ತು ಅವನೇ ಬದಲಾಗುತ್ತಾನೆ!
***
ಮರುದಿನ ಎದ್ದಾಗ ಸಿಕ್ಕ ಉಡುಪಿ ಹೆಚ್ಚು ಹೆಚ್ಚು ಹಳೆ ಉಡುಪಿಯೇ ಆಗಿತ್ತು. ಸ್ನಾನ ಮಾಡುವಾಗ ಮೈಮೇಲೆ ಅದೇ ಗಡಸು ನೀರು, ಕನಕನ ಕಿಂಡಿಯಲ್ಲಿ ಹಣಕಿದಾಗ ಅದೇ ಹಳೆ ಕೃಷ್ಣ, ಹೊಟೇಲ್‌ನಲ್ಲಿ ತಿಂಡಿ ತಿನ್ನುವಾಗ ಅದೇ ರುಚಿ ಕೊಡುವ ಮಸಾಲೆ ದೋಸೆ. ಹೊಟೇಲ್‌ನವನ (ಹನ್ನೆರಡು ವರ್ಷದ ಹಿಂದಿನ ಈ ಹುಡುಗನನ್ನು ನೆನಪಿಟ್ಟುಕೊಂಡ) ಅದೇ ಪರಿಚಿತ ನಗು. ಅನಂತೇಶ್ವರ ದೇವಸ್ಥಾನದಲ್ಲಿ ಸಿಕ್ಕು ಬ್ರಹ್ಮಾಂಡ ಸಂತೋಷ ಕೊಟ್ಟ ನನ್ನ ವಾರಗೆಯ ವಟು. ಅವನು ಕೊಟ್ಟ ನನ್ನ ಕ್ಲಾಸ್‌ಮೇಟ್‌ಗಳ ವಿವರ. ಬಸ್‌ ಹತ್ತಿದಾಗ ಅದೇ `ಏರ್‌ ಉಡುಪಿ- ಮಣಿಪಾಲ್‌, ಉಡುಪಿ- ಮಣಿಪಾಲ್‌' ಎಂಬ ಕಂಡಕ್ಟರ್‌ ಕೂಗು ಮತ್ತು ಮತ್ತು ಬಿಸಿ ಉಸಿರಿನಂತೆ ಬೀಸಿ ಬೀಸಿ ಮೈಯ್ಯಲ್ಲಿ ಬೆವರ ಹನಿ ಹುಟ್ಟಿಸುವ ಕರಾವಳಿ ಸೆಖೆ.ಙ