Friday, November 28, 2008

ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು

IND2760Bಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ'ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ'ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
IND27164Bಮುಂಬಯಿ, ಬೆಂಗಳೂರು, ದೆಹಲಿ, ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಭಯೋತ್ಪಾದಕತೆ ಒಂದು ಲೆಕ್ಕದಲ್ಲಿ ಪರಸ್ಪರ ದ್ವೇಷದ ಕತೆ ಅಷ್ಟೇ. `ಮುಸ್ಲೀಮರಿಗೆ ಯಾವುದೇ ತೊಂದರೆಯಾಗಬಾರದು' ಎಂದು ಎಚ್ಚರಿಕೆ ನೀಡಲು ಮೊನ್ನೆಯ `ಬ್ಲ್ಯಾಕ್‌ ವೆಡ್ನೆಸ್‌ಡೇ' ಕಾರ್ಯಾಚರಣೆ ನಡೆಯಿತು ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹೇಳಿವೆ. ಇತ್ತೀಚಿನ ಸ್ವಾ ಪ್ರಕರಣ `ಹಿಂದೂ ಭಯೋತ್ಪಾದನೆ'ಯನ್ನು ಪ್ರತಿಪಾದಿಸಿತು. ಅಲ್ಲಿಗೆ ದ್ವೇಷಕ್ಕೆ ದ್ವೇಷದ, ಹಿಂಸೆಗೆ ಹಿಂಸೆಯ ಉತ್ತರವೇ ಸಾಗಬೇಕಾಗುತ್ತದೆ. ಇದೇ ತೀವ್ರಗೊಂಡರೆ ಮುಂದೊಂದು ದಿನ ಉಳಿಯುವುದು ಶಾಂತಿಯಲ್ಲ, ಹೊರತಾಗಿ ಅಲ್ಲಿ ಉಳಿಯುವುದು ದ್ವೇಷ ಮಾತ್ರ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ' ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ' ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ'ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್‌ ನ್ಯೂಸ್‌' (ಸುದಿ ಸೋಟ) ಎನ್ನುವುದು `ಬ್ಲಾಸ್ಟ್‌ ನ್ಯೂಸ್‌' ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.

Tuesday, November 25, 2008

ಪತ್ರಕರ್ತನ ಪತ್ರಕತೆ



[caption id="attachment_183" align="aligncenter" width="500" caption="ಚಿತ್ರ: ಮನೋಹರ್‌"]ಮನೋಹರ್‌[/caption]

ಸುರೇಶ್‌ ಕೆ `ಉದಯವಾಣಿ'ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ' ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್‌ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್‌.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್‌ ಅಚಾನಕ್‌ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್‌ ಲೇಖನಕ್ಕೆ ಬಂದು ನಿಂತಿರುವ ನಮ್ಮ ಕುಶಲವಿನಿಮಯ ಪ್ರತಿಭೆ, ಸಂಬಂಧಗಳ ಅರ್ಥವನ್ನೇ ಸಂಕುಚಿತಗೊಳಿಸಿರಬಹುದಾದ ಸಾಧ್ಯತೆ ಇದೆ. `ಒಂದಿಷ್ಟು ವ್ಯಾವಹಾರಿಕ ಪತ್ರಗಳ ನಡುವೆ ಒಂದು ಹಸಿರು ಅಂತರ್ದೇಶಿ ಪತ್ರ ಇದ್ದರೆ ಒಣ ತರಗೆಲೆಯ ನಡುವೆ ಒಂದು ಹಸಿರು ಎಲೆ ಸಿಕ್ಕಷ್ಟು ಖುಷಿಯಾಗುತ್ತದೆ' ಎಂದು ಲೇಖಕ ಜಯಂತ ಕಾಯ್ಕಿಣಿ ಬರೆದಿದ್ದರು.
ಅಂಥ ಅಂತರ್ದೇಶಿ ಪತ್ರಗಳ ಸಂಭ್ರಮದ ದಿನಗಳಲ್ಲೇ ಹುಟ್ಟಿ ಬೆಳೆದು ಬಂದ ಸುರೇಶ್‌, `ಕಾಗದ ಬಂದಿದೆ' ಕತೆಯ ಮೂಲಕ ಸಂಬಂಧಕ್ಕಿರುವ ಅನೇಕ ಸೂಕ್ಷ್ಮಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ನಾವು `ಕಳ್ಳಕುಳ್ಳ' ಬ್ಲಾಗ್‌ನಲ್ಲಿ ಈಗಷ್ಟೇ ಪ್ರಾರಂಭಿಸಿರುವ `ತಿಳಿಯ ಹೇಳುವೆ ಇಷ್ಟಕತೆಯನು' ಮಾಲಿಕೆಯಲ್ಲಿ `ಕಾಗದ' ಕತೆಯನ್ನು ಪ್ರಕಟಿಸುತ್ತಿದ್ದೇವೆ. ಓದಿ.

ಅಲ್ಲಿ ನಿಂತರೆ ಅಪ್ಪ, ಇಲ್ಲಿ ನಿಂತರೆ ನಾವು



[caption id="attachment_180" align="aligncenter" width="500" caption="ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ"]ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ[/caption]

ದೊ
ಡ್ಡ ಮನೆಯಲ್ಲಿ ಅಪ್ಪ ಇದ್ದಾನೆ. ಅವನ ಸಂಗಡ ಅವನ ಕೊನೆಯ ಮಗ ಇದ್ದಾನೆ. ಅಪ್ಪನಿಗೆ ಆ ಹಳೆಮನೆಯ ಮಾಸಲು ಗೋಡೆಗಳ ಮಧ್ಯೆ ಬದುಕಿದರೆ ಮಾತ್ರ ಜೀವ ಆಡುತ್ತದೆ. ಅವನ ಕೊನೆಯ ಮಗನಿಗೆ ಸಂಗೀತ ಎಂದರೆ ಪ್ರಾಣ. ಗಂಡ ತೀರಿಕೊಂಡ ನಂತರ ಅಪ್ಪನ ಮನೆಯಲ್ಲೇ ಉಳಿದಿರುವ ಹೆಣ್ಣು ಮಗಳೊಬ್ಬಳು ಈ ಹುಡುಗನಿಗೆ ಸಂಗೀತಪಾಠ ಮಾಡುತ್ತಾಳೆ. ಆದರೆ ಅವಳ ತಮ್ಮನಿಗೆ ಇದು ಸರಿಬರುವುದಿಲ್ಲ. ಆ ತಮ್ಮ ಯಾವುದೋ ಬಿಸಿನೆಸ್‌ ಎಂದು ಓಡಾಡುತ್ತಾನೆ. ಮೊಬೈಲ್‌ ತೆಗೆದುಕೊಂಡು, ಅಪ್ಪ ಅಮ್ಮನಿಗೆ ಅದನ್ನು ತೋರಿಸಿ `ನೋಡು ಈ ಅಡುಗೆ ಮನೆಯಲ್ಲೂ ನೆಟ್‌ವರ್ಕ್‌ ಎಷ್ಟು ಚೆನ್ನಾಗಿ ಸಿಗುತ್ತದೆ ನೋಡು. ಅಷ್ಟೂ ಕಡ್ಡಿ ಇದೆ' ಎಂದು ತೋರಿಸಿ ಮನೆಯವರನ್ನು ತಬಜಿಲ್‌ ಮಾಡುತ್ತಾನೆ. ಕಾರಿಗಾಗಿ ಸಾಲ ಮಾಡುತ್ತೇನೆ, ಒಂದಿಪ್ಪತ್ತೈದು ಸಾವಿರ ಕೊಡು ಎಂದು ದುಂಬಾಲು ಬೀಳುತ್ತಾನೆ.

ತೀರ್ಥಹಳ್ಳಿ ಸಮೀಪದ ಯಾವುದಾದರೂ ಹಳ್ಳಿಯಲ್ಲಿ ಆ ಕತೆ ಸಾಗುತ್ತಿದೆ.

ಇತ್ತ ಪಟ್ಟಣ. ಲ್ಯಾಪ್‌ಟಾಪ್‌, ಸ್ಟೆತೋಸ್ಕೋಪ್‌, ಮೊಬೈಲ್‌, ಕರೆನ್ಸಿ, ಬ್ರೇಕ್‌ಫಾಸ್ಟ್‌, ಡಿನ್ನರ್‌ಗಳ ಜಗತ್ತಲ್ಲಿ ಎಲ್ಲರಿಗೂ ಹಗಲಾಗುತ್ತದೆ, ಇರುಳಾಗುತ್ತದೆ. ಅಪ್ಪನನ್ನು ದೂರದ ಹಳ್ಳಿಯಲ್ಲಿ ಬಿಟ್ಟು ಬಂದಿರುವ ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆಯಂದಿರು `ಅಣ್ಣ(ಅಪ್ಪ)ನಿಗೆ ಆರೋಗ್ಯ ಹ್ಯಾಗಿದೆಯೋ' ಎಂದು ಆತಂಕಿತರಾಗುತ್ತಾರೆ. ಅತ್ತ ವಿಧುರ ಅಪ್ಪನಿಗೆ ಈ ಮಕ್ಕಳ ಮೇಲೆ ಸಿಟ್ಟು. ತಮ್ಮನ್ನು ಬಿಟ್ಟು ಪೇಟೆ ಸೇರಿಕೊಂಡಿದ್ದಾರೆಂಬ ಅಸಹನೆ. ಅವರು ಫೋನ್‌ ಮೂಲಕವೋ, ಖುದ್ದಾಗಿಯೋ ವಿಚಾರಿಸಿಕೊಂಡಾಗೆಲ್ಲಾ ಅಪ್ಪ ರೇಗಾಡುತ್ತಾನೆ. ನಿದ್ದೆ ಮಾತ್ರೆ ತೆಗೆದುಕೊಂಡು ಮಧ್ಯಾಹ್ನ ಸಮೀಪಿಸಿದರೂ ಏಳದೇ, ಕೋಣೆಯ ಬಾಗಿಲು ಬೇರೆ ಹಾಕಿಕೊಂಡು ಮಕ್ಕಳ ಹೆದರಿಕೆಗೆ ಕಾರಣನಾಗುತ್ತಾನೆ.

Friday, November 21, 2008

ಒಂದು ಅನಾಮಧೇಯ ಮನವಿ

seedಈ ಜಗತ್ತು
ಇಷ್ಟು ಸಂವತ್ಸರಗಳ ಕಾಲ
ಬದುಕಿಕೊಂಡಿರಲು
ಕಾರಣವಾದ
ಒಂದು ಸಣ್ಣ ಉಸಿರಂತೆ
ನಾನು ಬದುಕಲು
ಬಯಸುತ್ತೇನೆ-
ಸದ್ದಿಲ್ಲದೇ, ಸುದ್ದಿಯೇ ಆಗದೇ
ಗದ್ದಲದ ನಡುವೆ ಜಾಗ ಕಂಡುಕೊಂಡ
ಮೌನದಂತೆ...

ಆದರೆ ನಾಗರಿಕ ಬದುಕಿಗೆ
ನಾನು ತಾಗಿಕೊಳ್ಳಬೇಕೆಂದರೆ
ಅಡ್ರಸ್‌ ಪ್ರೂಫ್‌ ಕೇಳುತ್ತಾರೆ,
ನನಗೇನೋ ಕಳಿಸಿಕೊಡಲು
ನನ್ನ ಅಡ್ರಸ್‌ ಬರೆದುಕೊಳ್ಳುತ್ತಾರೆ,
ನಾನು ಮತ ಹಾಕುತ್ತಿದ್ದೇನಾ
ಎಂದು ಗೆಳೆಯರು ವಿಚಾರಿಸುತ್ತಾರೆ.

Wednesday, November 19, 2008

ಅಂತೂ ಇಂತೂ ಕತೆ ಬಂತು!

[caption id="attachment_170" align="alignleft" width="360" caption="ಚಿತ್ರಕೃಪೆ: ಫ್ಲಿಕರ್‌"]ಫ್ಲಿಕರ್‌[/caption]

`ಕಳ್ಳಕುಳ್ಳ' ಬ್ಲ್ಯಾಗ್‌ನ ಸಹವರ್ತಿ ಚೇತನ್‌ ನಾಡಿಗೇರ್‌ ಹಿಂದೊಮ್ಮೆ ಇದೇ ಬ್ಲ್ಯಾಗ್‌ನಲ್ಲಿ `ನೀನಾನಾದ್ರೆ ನಾನೀನೇನಾ' ಎಂಬ ಕತೆಯೊಂದನ್ನು ಬರೆದಿದ್ದರು. ಕತೆ ಬರೆಯುವ ಸಾಮರ್ಥ್ಯ ಇದ್ದೂ ಬರೆಯದ ವ್ಯಕ್ತಿಗಳಲ್ಲಿ ಚೇತನ್‌ ಒಬ್ಬರು. ಅನೇಕ ಕತೆಯ ಎಳೆಯನ್ನು ತಮ್ಮ ಸ್ನೇಹಿತರ ಬಳಿ ಆಗಾಗ ಹೇಳುತ್ತಾ, `ಬರೆದುಬಿಡುತ್ತೇನೆ, ಬರೆದೇಬಿಡುತ್ತೇನೆ' ಎಂದು ಹೆದರಿಸುವ ಇವರು, ಇತ್ತೀಚೆಗೆ ಹಾಗೇ ಹೇಳಿ, ಹೆದರಿಸಿ ಅನಂತರ ಕತೆಯೊಂದನ್ನು ಬರೆದುಕೊಂಡೇ ಬಂದು ಅಚ್ಚರಿ ಮೂಡಿಸಿದ್ದಾರೆ.
ಈ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟಕತೆಯನು' ಮಾಲಿಕೆಯ ಮೊದಲ ಕತೆಯಾಗಿ ಚೇತನ್‌ಬರೆದ `ಗುರುವಿನ ಗುಲಾಮನಾಗುವತನಕ'ವನ್ನು ಪ್ರಕಟಿಸಲಾಗುತ್ತದೆ. ವ್ಯಂಗ್ಯವೇ ಕತೆಯಾಗಿರುವ ಇದು ತನ್ನ ಲಲಿತಗುಣದಿಂದ, ಅದೆಷ್ಟೋ `ಆಡದ ಮಾತು'ಗಳಿಂದ ಇಷ್ಟವಾಗಬಹುದು. ಅಂದಹಾಗೆ ಮುಂದೆ ಈ ಮಾಲಿಕೆಯಲ್ಲಿ ಹೀಗೇ ಕತೆ ಪ್ರಕಟಗೊಳ್ಳುತ್ತಾ ಹೋಗುತ್ತದೆಂಬುದನ್ನು ನಿರೀಕ್ಷಿಸಲಡ್ಡಿಯಿಲ್ಲ. ಈ ಕತೆಗೆ ನಿಮ್ಮ ಪ್ರತಿಕ್ರಿಯೆ ಸದಾ ಇರಲಿ. ಇನ್ನು ನೀವು ಮತ್ತು ನಮ್ಮೀ `ಗುರು'ಕತೆ.



ಒಂದು ಕ್ಷಣ ಬೆಚ್ಚಿ ಬಿದ್ದರು ಸುಭದ್ರಮ್ಮ!
ಅವರೆಂದೂ ತನ್ನ ಮಗನ ಬಾಯಲ್ಲಿ ಅಂಥ ಮಾತು ಕೇಳಿರಲಿಲ್ಲ ಅಥವಾ ಅವನು ಹಾಗೆ ಪ್ರತಿಕ್ರಿಯಿಸಬಹುದು ಎಂದು ಯೋಚಿಸಿರಲಿಲ್ಲ. ಮನೆ ಮುರಿಯುವ ಮಾತೋ ಆಸ್ತಿ ಮಾರುವ ಮಾತೋ ಆಗಿದ್ದರೆ... ಅವರು ಅರಗಿಸಿಕೊಳ್ಳುತ್ತಿದ್ದರೇನೋ? ಆದರೆ ವತ್ಸ ಆಡಿದ್ದು ಬೇರೆಯದೇ ಮಾತು. ಅಲ್ಲಿಂದ ಸುಭದ್ರಮ್ಮ ಮುಂಚಿನಂತಿರಲಿಲ್ಲ. ಅವರ ಜೀವನವೇ ಬದಲಾಗಿ ಹೋಯಿತು. ಅವರ ಯೋಚನೆಯೇ ಬೇರೆಯಾಯಿತು. ಯಾಕೋ ಶ್ರೀವತ್ಸ ಕ್ರಮೇಣ ಬದಲಾಗುತ್ತಿದ್ದಾನೆ ಎಂದನಿಸಿತು. ತಮ್ಮಿಂದ ಕೈ ಜಾರುತ್ತಿದ್ದಾನೆಂದು ಕೊರೆಯುತ್ತಿತ್ತು. ಅದೆಲ್ಲಾ ಇತ್ತೀಚಿನ ಮಾತು...

Tuesday, November 18, 2008

ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ



jogula



ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವನ್ನು ಮಾತಾ­ಡಿ­ಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗು­ವಿನ ಅರ್ಪ­ಣಾ­ಭಾವ, ವಾತಾ­ವ­ರ­ಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾ­ಸ­ನೆ­ಗಳು ಒಂದಾ­ಗು­ತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗು­ವಿಗೂ ಜೋಗುಳ ವರ.
ಹಾಗೆ ನೋಡಿ­ದರೆ ಜೋಗುಳ ಎಲ್ಲರ ಎದೆ­ಯೊ­ಳ­ಗಿ­ರುವ ಒಂದು ಆಕಾ­ರ­ವಿ­ಲ್ಲದ ಭಾವ. ಅಲ್ಲಿ ರಾಗ­ಜ್ಞಾನ ಚೆನ್ನಾ­ಗಿ­ರ­ಬೇ­ಕಾ­ಗಿಲ್ಲ, ಸಾಹಿ­ತ್ಯದ ಹಂಗಿಲ್ಲ, ಜೋಗುಳ ಹಾಡು­ವು­ದನ್ನು ಯಾರಾ­ದರೂ ಮೆಚ್ಚಿ ಅಭಿ­ನಂ­ದಿ­ಸಲಿ ಎಂಬ ಅಪೇ­ಕ್ಷೆ­ಯಿಲ್ಲ. ತನ್ನ ಕರು­ಳಿನ ಕೊಡು­ಗೆ­ಯನ್ನು ಅಮ್ಮ ಮಲ­ಗಿ­ಸು­ತ್ತಾಳೆ, ಮಲ­ಗಿ­ಸು­ತ್ತು­ನು­ನುನು' ಅಂತ ಹಾಡು­ತ್ತಾಳೆ, ರಾಗ ಬದ­ಲಾ­ದು­ದನ್ನೂ ಗಮ­ನಿ­ಸ­ದಾ­ಗು­ತ್ತಾಳೆ. ಇಲ್ಲಿ ಬೇಕಾ­ಗಿ­ರು­ವುದು ಎರಡು ಮನ­ಸ್ಸ­ಗಳ ನಡು­ವಿನ ಒಂದು ಭಾವ ಮಾತ್ರ.

ಅಷ್ಟೇ ಆಲ್ಲ, ಜೋಗುಳ ತಾಯ್ತ­ನದ ಪ್ರತೀಕ. ಮಗು ಹುಟ್ಟಿ ಬೆಳೆ­ಯು­ವ­ರೆಗೆ ಆಮ್ಮ ಜೊಗುಳ ಹೇಳು­ತ್ತಾಳೆ. ಜೋಗುಳ ಕೇಳಿ ಮಗು ಬೆಳೆದು, ಜೋಗು­ಳ­ವನ್ನು ಮರೆ­ಯ­ಬ­ಹುದು. ಒಂದು ಕಾಲ­ಕ್ಕೆ­ಅ­ಮ್ಮನ ಜೋಗು­ಳಕ್ಕೆ ಹಠ ಮಾಡು­ತ್ತಿದ್ದ ಮಗ/ಳು ನಿಧಾ­ನ­ವಾಗಿ ಬದು­ಕಿನ ಕುಲು­ಮೆ­ಯಲ್ಲಿ ಬದ­ಲಾ­ಗುತ್ತಾ ಹೋಗು­ತ್ತಾನೆ/ಳೆ. ಆಗ ತನ್ನ ಮಗ/ಳು ತನ್ನ ಅಂತ್ಯ­ಕಾ­ಲದ ಹೊತ್ತಿಗೆ ಹಾಡ­ಬ­ಹು­ದಾದ ಮೌನ ಜೋಗು­ಳ­ಕ್ಕಾಗಿ ಕಾಯು­ತ್ತಾಳೆ ಅಮ್ಮ. ತನ್ನ ಕೆನ್ನೆಯ ಮೇಲೆ ನೇವ­ರಿ­ಸುವ ತನ್ನ ಕುಡಿಯ ಕೈಗಾಗಿ ಅಮ್ಮ ಈ ಜಗದ ತೊಟ್ಟಿ­ಲಲ್ಲಿ ಮಲಗಿ ಮೌನ­ವಾಗಿ ಅಳು­ತ್ತಾಳೆ.
ಅಮ್ಮ­ನಿಗೆ ಮಗು ತಾಯಿ
ಮಗುವೇ ಆಮ್ಮನ ಕಾಯಿ!
***
ಇದೀಗ ಅಮ್ಮನ ರೀತಿ ಬೇರೆ, ಮಗು­ವಿನ ರೀತಿ ಬೇರೆ. ಜೋಗುಳ ಇಲ್ಲೀಗ ಇನ್ನಷ್ಟು ಸಾಂಕೇ­ತಿಕ. ಬೇಬಿ­ಸಿ­ಟಿಂ­ಗ್‌­ನಲ್ಲಿ ತನ್ನ ಮಗು­ವನ್ನು ಬಿಟ್ಟ ಆಮ್ಮ, ಗಡಿ­ಬಿ­ಡಿ­ಯಲ್ಲಿ ಕಂದ­ನನ್ನು ಮುದ್ದಿಸಿ ಹೊರ­ಟರೆ ಅದೇ ಮಗು­ವಿನ ಪಾಲಿನ ಜೋಗುಳ. ರಾತ್ರಿ ಆಯಾಳ ಕೈಯಲ್ಲಿ ಮಗು­ವನ್ನು ಬಿಟ್ಟು ಗಂಡ, ಹೆಂಡತಿ ನೈಟ್‌ ಶಿಫ್ಟ್‌ಗೆ ಹೊರಟು ನಿಂತಾಗ ಮಗು­ವಿ­ನೆಡೆ ಆ ಪೋಷ­ಕರು ಎಸೆದ ಒಮದು ಮಮ­ತೆಯ ನೋಟವೇ ಆ ಮಗು­ವಿನ ಪಾಲಿಗೆ ಜೋಗುಳ. ಸರೋ­ಗೇಟ್‌ ಮದರ್‌, ಸಿಂಗಲ್‌ ಪೇರೆಂ­ಟಿಂಗ್‌ ಎಂಬೆಲ್ಲಾ ತಂತ್ರ­ಜ್ಞಾ­ನ­ಪ್ರೇ­ರಿತ ತಾಯ್ತ­ನದ ಜಗತ್ತಲ್ಲಿ ಮನೆ ಮನೆಯ ರಾಮ, ಕೃಷ್ಣ, ಚಂದ್ರ­ಹಾ­ಸರು ದಿಕ್ಕೆಟ್ಟು ನೋಡು­ತ್ತಿ­ದ್ದಾರಾ? ಮಡಿ­ಲಲ್ಲಿ ಮಗು ನಲಿಯೇ, ನಲಿದ ಮಗುವೂ ಮಡಿ­ಲಲ್ಲಿ ನಿಲ್ಲದೇ ಯಶೋದೆ, ದೇವ­ಕಿ­ಯರು ಕಂಗಾ­ಲಾ­ಗಿ­ದ್ದಾರಾ?

ತಾಯ್ತ­ನದ ಹಲವು ಮುಖ­ಗ­ಳನ್ನು ಹೊತ್ತ ಧಾರಾ­ವಾ­ಹಿ­ಯೊಂದು ಇದೇ ನವೆಂ­ಬರ್‌ 24ರಿಂದ ಝೀ ಚಾನ­ಲ್‌ನಲ್ಲಿ ಪ್ರಸಾ­ರ­ವಾ­ಗು­ತ್ತಿದೆ. `ಪ್ರೀತಿ ಇಲ್ಲದ ಮೇಲೆ' ಎಂಬ ಜನ­ಪ್ರಿಯ ಧಾರಾ­ವಾ­ಹಿಯ ಚುಕ್ಕಾಣಿ ಹಿಡಿ­ದಿದ್ದ ವಿನು ಬಳಂಜ ಅವರೇ ಈ ಧಾರಾ­ವಾ­ಹಿಯ ನಿರ್ದೇ­ಶಕ. ಹೆಸರು: ಜೋಗುಳ. `ನ­ಚಿ­ಕೇತ್‌' ಬರೆದ ಕತೆಗೆ ಚಿತ್ರ­ಕತೆ ಸಿದ­­ಪ­ಡಿ­ಸಿ­ರು­ವ­ವರು ಪತ್ರ­ಕರ್ತ ಸತ್ಯ­ಮೂರ್ತಿ ಆನಂ­ದೂರು. ಕರ್ನಾ­ಟಕ ಶಾಸ್ತ್ರೀಯ ಸಂಗೀತ ಪರಂ­ಪ­ರೆಯ ದೊಡ್ಡ ವಿದ್ವಾಂಸ ಆನೂರು ಅನಂ­ತ­ಕೃಷ್ಣ ಶರ್ಮ (ಶಿವು) ಈ ಧಾರಾ­ವಾ­ಹಿಗೆ ಸಂಗೀತ ನೀಡುವ ಮೂಲಕ ಕಿರುತೆ­ರೆಗೆ ಕಾಲಿ­ಟ್ಟಿ­ದ್ದಾರೆ. 24ರಿಂದ ಸೋಮ­ವಾ­ರ­ದಿಂದ ಶುಕ್ರ­ವಾ­ರ­ದ­ವ­ರೆಗೆ ರಾತ್ರಿ 8.30ಕ್ಕೆ ಪ್ರಸಾ­ರ­ವಾಗುವ ಈ ಧಾರಾ­ವಾ­ಹಿಯ ಶೀರ್ಷಿಕೆ ಗೀತೆ­ಯನ್ನು ಬರೆ­ದಿದ್ದು ವಿಕಾಸ ನೇಗಿ­ಲೋಣಿ.
ಆದರ ಪೂರ್ಣ­ಪದ್ಯ ಇಲ್ಲಿದೆ:
ಭಾವ­ಗಳ ತೊಟ್ಟಿ­ಲಲ್ಲಿ ಮನಸೇ ಮಗು­ವಾಗಿ
ಲಾಲಿಯ ಹಾಡಲಿ ಜಗ­ವೆಲ್ಲಾ
ಜೋಜೋ ಜೋಜೋ...

ಕಿಲ­ಕಿಲ ನಗು­ವಿನ ಶ್ಯಾಮನೇ
ತೆರೆ­ಸಲಿ ಹೃದ­ಯದ ಕಣ್ಣನೇ
ಮನೆ ಮನದ ಕನ­ಸಾಗು
ಕನಸೇ ನೀ ಉಸಿ­ರಾ­ಗು
ಕನ­ಸಿನ ತೇರಲಿ ಬಯ­ಕೆ­ಗಳ ಆಗ­ಮನ
ಪಯ­ಣದ ದಾರಿ­ಯಲಿ ಹೆಜ್ಜೆ ಹೆಜ್ಜೆಯೂ ರೋಮಾಂ­ಚ­ನ
ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ
ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ
ಜೋ ಜೋ ಎಂದರೆ ಕಂದ­ನಿಗೆ ಸವಿ­ಹಾಲು
ಜೋಗು­ಳದ ಪ್ರೀತಿ­ಯಲಿ ಎಲ್ಲ­ರಿಗೂ ಸಮ­ಪಾಲು
ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ
ಬೆಳೆಯೋ ಹೆಜ್ಜೆಗೆ ಜೋ ಜೋ

Friday, November 14, 2008

ನೋವುಗಳ ದಾರದಲಿ ಸುರಿದ ಮುತ್ತು

hoffman11ಯುದ್ಧ- ಶಾಂತಿಯ ವಿರುದ್ಧದ ಪದ. ಯುದಕ್ಕೆ ಮೊದಲು ಉತ್ಸಾಹ, ನಡೆದಾದ ಮೇಲೆ ಅನಾಥ ಪ್ರಜ್ಞೆ. ಈಗ ಜಗತ್ತು ಯಾವುದೇ ಘೋಷಿತ ಯುದ್ಧದಿಂದ ಬಳಲುತ್ತಿಲ್ಲವಾದರೂ ನಡೆಯುತ್ತಿರುವ ಜಗತ್ತಿನ ಪ್ರತಿ ವಿಪ್ಲವಗಳೂ ಒಂದು ರೀತಿಯಲ್ಲಿ ಯುದ್ಧದ ರೂಪವೇ ಆಗಿ ಕಾಣುತ್ತಿವೆ.
ಯುದ್ಧಾನಂತರದ ಕುರುಕ್ಷೇತ್ರದ ಕುರಿತು ಕುವೆಂಪು `ಸ್ಮಶಾನ ಕುರುಕ್ಷೇತ್ರ' ಬರೆದರು. ಜಗತ್ತಿನ ಯಾವುದೇ ಯುದ್ಧ ಮುಗಿಯಲಿ, ಅಲ್ಲಿ ನಮಗೆ ಕಾಣುವುದು `ಸ್ಮಶಾನ ಕುರುಕ್ಷೇತ್ರ'. ಆದರೆ ಜಗತ್ತು ಎಷ್ಟು ಯುದ್ಧಗಳನ್ನು ಕಂಡಿಲ್ಲ? ಎಷ್ಟು ಯುದ್ಧಗಳ ನಂತರ ಅದೆಷ್ಟು ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡಿಲ್ಲ? ಅಂಥ ನಿರ್ವಸಿತ, ಮಮತೆವಂಚಿತ, ದಿಕ್ಕುಗೆಟ್ಟ ಶಿಶುಗಳ ಹಣೆಯ ಮೇಲೆ, ಕಣ್ಣೀರಿಗೆ ಮಾತ್ರ ಜಾಗವಿರುವ ಅವರ ಕೆನ್ನೆಯ ಮೇಲೆ, ಅತ್ತು ಅತ್ತು ಕೆಂಪಗಾದ ಕಿವಿ, ಮೂಗಿನ, ಕೊಂಕು ತುಟಿಯ ಮೇಲೆ ಯಾರಾದರೂ ನೇವರಿಕೆ ತಂದಾರೇ?
ಇರಾನಿ ಕವಿ ಆಶಿಶ್‌ ತಾಕೂರ್‌ ತನ್ನ `ಯುದ್ಧಪೀಡಿತ ಶಿಶುವಿಗೊಂದು ಓಲೆ' ಕವಿತೆಯಲ್ಲಿ ಅಂಥ ಮಕ್ಕಳನ್ನು ಪದಗಳಿಂದ ನೇವರಿಸಿದ್ದಾರೆ. `ಹವಳದ ಕುಡಿಯಂಥ ಅಳುವ ಕಂದನ ತುಟಿ'ಗೆ ಸಾಂತ್ವನದ ಗುಟುಕು ಹನಿಸಿದ್ದಾರೆ. ಆ ಕವಿತೆಯ ಭಾವಾನುವಾದ ಇಲ್ಲಿದೆ.

Thursday, November 13, 2008

ಕತೆ ಹೇಳುವೆ, ಕೇಳುವಂತವನಾಗು



[caption id="attachment_158" align="aligncenter" width="500" caption="ಚಿತ್ರಕೃಪೆ: ಪ್ರದೀಪ್‌ ರಘುನಾಥನ್‌"]ಪ್ರದೀಪ್‌ ರಘುನಾಥನ್‌[/caption]

ಈ ದಾರಿ ಸುಸ್ತು ಕಡಿಮೆ ಮಾಡಲು ನಿನಗೆ ನಾನೊಂದು ಕತೆ ಹೇಳುತ್ತೇನೆ.
ಹೀಗೆ ನಮ್ಮ ಅನೇಕ ಜನಪದ ಕತೆಗಳು ಶುರುವಾಗುತ್ತವೆ. ಗಿಳಿ ಕತೆ ಹೇಳಿದ್ದು, ಬೇತಾಳ ಕತೆ ಹೇಳಿದ್ದು ನಮಗೆಲ್ಲಾ ಗೊತ್ತು.
ಆದರೆ ಇಲ್ಲಿ ಸ್ವಲ್ಪ ತಾಂತ್ರಿಕವಾಗಿ ಅಪ್‌ಡೇಟ್‌ ಆಗಿ `ಬ್ಲಾಗ್‌' ಕತೆ ಹೇಳುತ್ತದೆ. ಕಳ್ಳಕುಳ್ಳ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟ ಕತೆಯನು' ಮಾಲಿಕೆಯಲ್ಲಿ ಕತೆ ಶುರುವಾಗುತ್ತದೆ ಎಂದು ನಿನ್ನೆ ಹೇಳಲಾಗಿತ್ತಲ್ಲಾ, ಹೌದು ಕತೆ ಶುರುವಾಗುತ್ತದೆ.
ಅದಕ್ಕಾಗಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ. ಕತೆ ಹೇಳುವವರು ಈಗ ರೆಡಿ ಆಗುತ್ತಿದ್ದಾರೆ. ನೆಟ್‌ ಡೌನ್‌ ಇದ್ದರೆ, ಮಂತ್ರಿಗಳು ಉದ್ಘಾಟನೆಗೆ ತಡವಾದರೆ, ಬಸ್‌ ಬರಬೇಕಾಗಿದ್ದು ಇನ್ನೂ ಬಸ್‌ಸ್ಟ್ಯಾಂಡ್‌ಗೆ ಬರದಿದ್ದರೆ, ಸಿಗ್ನಲ್‌ ಬಿಟ್ಟರೂ ತಾಂತ್ರಿಕ ಕಾರಣದಿಂದ ಟ್ರಾಫಿಕ್‌ ಪೊಲೀಸ್‌ ಆ ದಾರಿಯನ್ನು ಸುಗಮಗೊಳಿಸದಿದ್ದರೆ, ಪವರ್‌ಕಟ್‌ ಆಗಿ, ಇನ್ನೂ ಕರೆಂಟ್‌ ಬರದಿದ್ದರೆ ಕಣ್ಣರಳಿಸಿ, ತಲೆ ತುರಿಸಿಕೊಂಡು, ಕೈ ಕಾಲು ಬಡಿದು, ಬಂದೇ ಬರುತ್ತದೆ ಎಂದು ತಾಳ್ಮೆಯಿಂದ ಕಾಯುವ ನೀವು ನಮ್ಮ `ಕತೆ'ಗೂ ಕಾಯುತ್ತೀರಲ್ಲಾ?
ಇನ್ನೇನು ಬಂದೇ ಬಿಡುತ್ತದೆ, ಕತೆ.

Wednesday, November 12, 2008

ತಿಳಿಯ ಹೇಳುವೆ ಇಷ್ಟಕತೆಯನು

[caption id="attachment_155" align="aligncenter" width="500" caption="ಚಿತ್ರ ಕೃಪೆ: ರಾಬರ್ಟ್‌ ಡಾಸನ್‌"]ರಾಬರ್ಟ್‌ ಡಾಸನ್‌[/caption]

`ಎಲ್ಲರೊಳಗೂ ಒಂದೆ ಕತೆ ಇರುತ್ತದೆ' ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ' ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ' ಮಾಡಲಿದೆ. ಒಂದಿಷ್ಟು ರೀಮೇಕ್‌, ಒಂದಿಷ್ಟು ಸ್ವಮೇಕ್‌ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ.
ಅದನ್ನು ಬರೆದವರು ಯಾರು, ಹ್ಯಾಗಿದೆ, ಎಂಥ ಕತೆ, ರೀಮೇಕಾ, ಸ್ವಮೇಕಾ ಎಂಬೆಲ್ಲಾ ಪ್ರಶ್ನೆಗಳಿಗೆ ಆ ಕತೆಯ ಪ್ರಕಟಣೆಯಲ್ಲೇ ಉತ್ತರ ಸಿಗುತ್ತದೆ.
ಕಾಯೋಣ ಕತೆ ಕೇಳೋದ್ಯಾವಾಗ ಅಂತ?

Saturday, November 8, 2008

ಬಾಲ ದಾರಿಯಲ್ಲಿ ಸೂರ್ಯ ಜಾರಿಹೋದ

slumbala2ಬೀದೀಲಿ ಬಿದ್ದೋರು, ಸದ್ದಿಲ್ಲದೇ ಇದ್ದೋರು, ಒಳಗೊಳಗೇ ಅತ್ತೋರು ನನ್ನ ಜನಗಳು...
`ನನ್ನ ಜನಗಳು' ಎಂಬ ಸಿದಲಿಂಗಯ್ಯ ಅವರ ಕವಿತೆಯಲ್ಲಿ ಬರುವ ಮೇಲ್ಕಂಡ ಸಾಲಲ್ಲಿ ಇರುವ ಸಂಕಟ ಅಸಾಧಾರಣವಾದುದು. `ಸ್ಲಂ ಬಾಲಾ' ಚಿತ್ರದಲ್ಲೂ ಆ ವೇದನೆ, ಸಂಕಟ ಇದೆ. `ಸೈಜುಗಲ್ಲು ಹೊತ್ತೋರು' ದಲಿತರಾದರೆ ಮಂತ್ರಿಗಳ ಸಾಮ್ರಾಜ್ಯಕ್ಕೆ `ಸೈಜುಗಲ್ಲಾಗಿ' ಹೋಗುವವ ಸ್ಲಂ ಬಾಲಾ. ಅವರ ರಾಜಕೀಯ ಹಾದಿಯನ್ನು ವಿರೋದಿಗಳಿಂದ ಮುಕ್ತ ಮಾಡುತ್ತಾ, ತನ್ನ `ದೊಡ್ಡೋರ' ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನೂ ಬಲಿ ಕೊಡುತ್ತಾ, ಅವರ ಚುನಾವಣಾ ಸಾಫಲ್ಯಕ್ಕಾಗಿ ಕೊಲೆಗಿಲೆ ಮಾಡುತ್ತಾ ಬಾಲಾ ಬೆಳೆಯುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕನಸಿನಿಂದ ಸಿಂಗರಿಸುತ್ತಾನೆ. `ಮೈ ಪಾರ್ವತವ್ವ, ಮೈ ಸ್ಲಂ, ಮೈ ಪೀಪಲ್‌' ಎನ್ನುತ್ತಾ ಕುಡಿದ ಮತ್ತಲ್ಲಿ ತನ್ನವರನ್ನು ಪ್ರೀತಿಸುತ್ತಾನೆ. ಹೀಗೆ ಬೆಳೆಯುತ್ತಾ ಹೋದವನು ಬಳಸಿಕೊಂಡವರಿಂದಲೇ ಹತನಾಗುತ್ತಾನೆ.

ಬಿಡುಗಡೆಯಾಗಿರುವ `ಸ್ಲಂ ಬಾಲಾ' ಅನೇಕ ಕಾರಣಕ್ಕೆ ನೋಡಲೇಬೇಕಾದ ಸಿನಿಮಾ. ಅತ್ಯಂತ ಮಂದಗತಿಯ ಚಲನೆ, ಅನೇಕ ಕಡೆ ವಸ್ತುವಿನ ನಿರ್ವಹಣೆ ವಿಚಾರದಲ್ಲಾಗಿರುವ ಔಟ್‌ ಆಫ್‌ ಫೋಕಸ್‌ ಮೊದಲಾದ ಸಮಸ್ಯೆಗಳು ಚಿತ್ರದುದ್ದಕ್ಕೂ ಕಾಡಿದರೂ ಇವೆಲ್ಲಾ ಆಕ್ಷೇಪಗಳನ್ನೂ ಮೀರಿದ ಕಾರಣಕ್ಕಾಗಿ ನಾವೆಲ್ಲಾ `ಸ್ಲಂ'ಗೆ ಒಮ್ಮೆ ಹೋಗಿ ಬರಬೇಕು. ನಾವು ದಲಿತ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ ಕಾಣುತ್ತಲೇ ಬಂದ ಶೋಷಣೆಯ ಇನ್ನೊಂದು ರಾಜಕೀಯ ರೂಪವಾಗಿ `ಬಾಲಾ' ಕಾಣುತ್ತಾನೆ.

Friday, November 7, 2008

ಕಲ್ಲು ಕಲ್ಲೆಂದೇಕೆ ಬೀಳುಗಳೆವರು?

dsc_1287-apsಶಿಲ್ಪವಾದಾಗಲೇ ಶಿಲೆಗೆ ಪಾಪ ವಿಮೋಚನೆ. ದೇವರ ಮುಡಿ ಸೇರುವುದೇ ಹೂವಿನ ನಿಜವಾದ ಮುಕ್ತಿ ಕಲ್ಪನೆ. ಮುಡಿ ಏರದ ಹೂವೂ, ಶಿಲ್ಪವಾಗದ ಕಲ್ಲೂ ಶಪಿತ ಗಂಧರ್ವರಿಗೆ ಸಮ. ಇಂಥ ಶಪಿತ ಗಂಧರ್ವ ಶಿಲಾತಪಸ್ವಿಗಳಿರುವ ಹಂಪಿಗೆ ಇತ್ತೀಚೆಗೆ `ಉತ್ಸವ'ದ ಉತ್ಸಾಹ.
ಮಂತ್ರಿಗಳ ಭಾಷಣವೂ, ಸ್ಥಳೀಯ ಮುಖಂಡರ ಪ್ರತಿಷ್ಠೆಯೂ, ಅವ್ಯವಸ್ಥೆಯ ಆಗರವೂ ಆದ ಈ `ಉತ್ಸವ' ನಿಜವಾಗಿಯೂ ಖುಷಿ ಕೊಟ್ಟಿದ್ದು ಕಲ್ಲುಗಳಿಗೆ ಮಾತ್ರ. ಮೂರು ದಿನಗಳ ಕಾಲ ಅವುಗಳಿಗೆ ಯಾತ್ರಿಕರ ಜೊತೆ ಓಡಾಟ, ಮೌನ ಸಂಭಾಷಣೆಯ ಒಡನಾಟ. ಮೂರು ದಿನ `ಕಲ್ಲು ಕರಗಿದ ಸಮಯ'ದ ಗುಟ್ಟಾದ ವರದಿಯ ಮುದ್ರಿತ ಪ್ರಸಾರ, ಇಲ್ಲಿದೆ.


ಕಲ್ಲಾಗಿ ಹೋಗು!
ಹೀಗೆಂದು ಋಷಿ ಮುನಿಗಳು ಯಾರ ಮೇಲಾದರೂ ಕೋಪಗೊಂಡರೆ ಶಪಿಸಿಬಿಡುತ್ತಿದ್ದರು. ಅಹಲ್ಯೆ ಕಲ್ಲಾದದ್ದು ನಮಗೆಲ್ಲಾ ಗೊತ್ತಿರುವ ಒಂದು ಜನಪ್ರಿಯ ಪೌರಾಣಿಕ ಪ್ರಕರಣ. ನಮ್ಮ ಪುರಾಣಗಳನ್ನು ಜಾಲಾಡಿದರೆ ಇಂಥ ಅನೇಕ ಪ್ರಸಂಗಗಳು ನಮಗೆ ಕಾಣಸಿಗುತ್ತವೆ. ಕಲ್ಲಾಗಿದ್ದ ಅಹಲ್ಯೆಯನ್ನು ಹೆಣ್ಣಾಗಿ ಮಾಡಿದ್ದು ರಾಮನ ಹೆಚ್ಚುಗಾರಿಕೆಯೋ, ಅಹಲ್ಯೆಯ ಪಾತಿವ್ರತ್ಯದ ಹೆಚ್ಚುಗಾರಿಕೆಯೋ- ಇಷ್ಟು ವರ್ಷ ಕಳೆದರೂ ಇನ್ನೂ ತೀರ್ಮಾನವಾಗಿಲ್ಲ.

Saturday, November 1, 2008

ಜೋಡು ಹಾದಿ, ಹೂ ಹಾದಿ

ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು ಕೊಂದುಕೊಳ್ಳದಿದ್ದರೆ ಏನೋ ಪುಣ್ಯ. ಆದಕ್ಕಾಗಿ ಒಂದೇ ಕ್ಷಣ `ಅಬ್ಬಾ, ಸದ್ಯ' ಎಂಬ ನಿಟ್ಟುಸಿರು. ಆ ಕ್ಷಣದಿಂದಲೇ ಬಾಡತೊಡಗುತ್ತದೆ ಪರಿಮಳದೊಂದಿಗೆ ಮಲ್ಲಿಗೆಯ ತನುಮನ. ಬಿಳಿ ಕಂದಾಗುತ್ತದೆ, ಕೆಂಪಾಗುತ್ತದೆ, ಎಳೆದರೂ ಜಗ್ಗದ ರಬ್ಬರಾಗುತ್ತದೆ, ತನ್ನ ಸೂತ್ರವನ್ನು ಕಿತ್ತುಕೊಂಡು ಕಸವಾಗುತ್ತದೆ.

ಅಸಂಖ್ಯ ಕಸಗಳ ಮಧ್ಯೆ ಮರುದಿನ ಯಾರೋ ಏನೋ ಅರಿಯದ ಒಂದು ಹೆಸರಿಲ್ಲದ ಚೂರು ಅದು. ನಿನ್ನೆಯಿದ್ದ ಸುಗಂಧ, ನಿನ್ನೆಯಿದ್ದ ಅಂದ, ನಿನ್ನೆಯ ಮುಡಿಸು, ನಿನ್ನೆಯಿಡೀ ಅದರೊಡನೆ ಕಳೆದ ಪರಿಮಳದ ಬದುಕು, ಆ ಪರಿಮಳ ಕೊಟ್ಟ ಸುಗಂಧ ಸಂಚಾರ, ಅದು ದೇಹ- ಜೀವವೊಂದಕ್ಕೆ ಹೆಚ್ಚಿಸಿ ಕೊಟ್ಟ ಸೌಂದರ್ಯ- ಊಹೂಂ ನೆನಪಿಲ್ಲ.

ಅದಕ್ಕೊಂದು ಶ್ರದಾಂಜಲಿ ಸಭೆ ಮಾಡಲಿಲ್ಲ, ಒಂದು ಕ್ಷಣ ಎದ್ದು ನಿಂತು ಶಾಂತಿ ಕೋರಲಿಲ್ಲ.

ಚಪ್ಪಲಿ ಹಾಗಲ್ಲ. ಯಾರದೋ ಕಾಲಿಗೆ ಬೀಳುವ ಮುಂಚೆ, ಕಾಲಿನಿಂದ ಜಾರಿಬಿದ್ದ ದಿನದಾಚೆ ಅದಕ್ಕೊಂದು ಅಸ್ತಿತ್ವವಿದೆ, ಪೂರ್ವಾಶ್ರಮವಿದೆ. ಯಾರದೋ ಚರ್ಮವಾಗಿದ್ದು, ದೇಹದೊಳಗಿನ ಜೀವಸಂಚಾರಕ್ಕೆ, ಎಲ್ಲಾ ಅಲ್ಲಲ್ಲೇ ಹಾಗೆ ಹಾಗೇ ಇದ್ದು ಜೀವನ ಸುಸೂತ್ರವಾಗಿ ನಡೆಯುವುದಕ್ಕೆ ಅದರ ಸಹಕಾರ ಇತ್ತು. ಆ ಸಹಕಾರ ಮುಗಿದ ದಿನದಿಂದ ಅದು ದೇಹದಿಂದ ಬೇರ್ಪಟ್ಟು, ಬೇರ್ಪಟ್ಟ ಮೇಲೆ ಪರಿಷ್ಕರಣೆಗೆ ಸಿಕ್ಕಿ, ಯಾವುದ್ಯಾವುದೋ ದ್ರವ್ಯ, ರಸಾಯನಿಕಗಳ ಜೊತೆ ಗುದ್ದಾಡಿ ಹೊಸ ಜನ್ಮಕೆ ದಾಟಿಕೊಂಡು ಚಪ್ಪಲಾಯಿತು. ಕಾಲಿಗೆ ಬಿದ್ದು ಬಚಾವಾಯಿತು.

ಆದರೆ ಅದಕ್ಕೂ ಅಲ್ಲೂ ಸೀಮಿತ ಆಯುಷ್ಯವಿದೆ. ಉಂಗುಷ್ಠ ತುಂಡಾಗಿಯೋ, ಹಿಮ್ಮಡಿ ಹರಿದೋ ಅದೂ ಆ ಕಾಲಿಂದ ಬೇರ್ಪಡುತ್ತದೆ. ಅದರ ಪಾಲಿಗೆ ಬೇರ್ಪಡುವುದೆಂದರೆ ಮಾರ್ಪಡುವುದು. ದೇಹದಿಂದ ಬೇರ್ಪಟ್ಟು, ಚಪ್ಪಲಾಗಿ ಮಾರ್ಪಾಡಾದ ಇದು ಚಪ್ಪಲಾಗಿ ಬೇರ್ಪಟ್ಟ ಮೇಲೂ ಭಿಕ್ಷುಕ, ತಬ್ಬಲಿಗಳ ಕಾಲಾಳಾಗಿ ಮಾರ್ಪಡುತ್ತದೆ. ಬೇರ್ಪಟ್ಟರೂ ಸಾಯುವುದಿಲ್ಲ. ಮತ್ತೆ ಇನ್ನೊಂದು ಹೆಜ್ಜೆಯನ್ನು ಹುಡುಕಿ ಅದು ಹೊರಡಬಹುದು. ಆ ಹೆಜ್ಜೆಯಲ್ಲಿ ಒಂದಿಷ್ಟು ದಿನ ಇರಬಹುದು. ಆ ಪಾದ ತಿರಸ್ಕರಿಸಿದ ಹೊತ್ತಿಂದ ಆ ಚಪ್ಪಲಿ ತ್ರಿಲೋಕ ಸಂಚಾರಿ. ಮಣ್ಣಾಗದೇ, ಇಲ್ಲವಾಗದೇ, ಹೆಸರೂ ಇಲ್ಲದಂತೆ ಆಗದೇ ಆ ಚಪ್ಪಲಿ ಗಲ್ಲಿ ಗಲ್ಲಿಗಳಿಗೆ ಹೊರಡುತ್ತದೆ.

ಕಂಡವರಿಗೆ ತಮ್ಮ ಚಪ್ಪಲಿಯ ನೆನಪು, ಇಲ್ಲದವರಿಗೆ ತನಗೆ ಇದ್ದಿದ್ದರೆ ಎಂಬ ಕೊರಗು, ಕಾಲಿಲ್ಲದವರಿಗೆ ದೇವರು ಕಾಲನ್ನು ಕೊಡಲಿ, ಆಮೇಲೆ ನಾನೇ ಚಪ್ಪಲು ಸಂಪಾದಿಸಿಕೊಳ್ಳುವೆ ಎಂಬ ಪ್ರಾರ್ಥನೆ.. ಆಗುತ್ತದೆ. ಜಿ ಎಸ್‌ ಸದಾಶಿವ ಅವರಿಗೆ ಅದರಿಂದ `ಚಪ್ಪಲಿಗಳು' ಕತೆ ಹುಟ್ಟಿಕೊಳ್ಳುತ್ತದೆ. ಜಯಂತ ಕಾಯ್ಕಿಣಿ ಅವರಿಗೆ ಮುಂಬಯಿಯಲ್ಲಿ ಸಿಕ್ಕ ಒಂಟಿಕಾಲಿನ ಶೂ ಕತೆಯಾಗುತ್ತದೆ.

ಚಪ್ಪಲಿ ಹೀಗೆ ಜನ್ಮ ಬದಲಾಯಿಸುತ್ತಾ, ಜನುಮ ಜನುಮದಲ್ಲೂ ಏನೇನೋ ಆಗುತ್ತಾ ಹೋಗುತ್ತದೆ, ಯಾರದೋ ದಾರಿಯಲ್ಲಿ ಥಟ್ಟನೆ ಒಂದೇ ಆಗಿಯೋ, ಜೊತೆಯಾಗಿಯೋ ಸಿಕ್ಕು ಮಾತಾಡಿಸುತ್ತದೆ. ಶಾಪ್‌ನಲ್ಲಿ ಕುಳಿತು `ಕೊಳ್ಳು ಬಾ' ಎನ್ನುತ್ತದೆ. ಮಾಲ್‌ನಲ್ಲಿ
ಕುಳಿತುಕೊಂಡು `ಪಡೆದುಕೋ' ಎನ್ನುತ್ತದೆ. ಜಾಹೀರಾತುಗಳಲ್ಲಿ ಕ್ಯಾಟ್‌ವಾಕ್‌ ಮಾಡಿ `ಹ್ಯಾಗಿದೆ ನನ್ನ ಡಿಸೈನ್‌' ಎನ್ನುತ್ತದೆ. ಹಾಕಿಕೊಂಡರೆ ಹರಿಯುವವರೆಗೆ ನಿಯತ್ತಿನಿಂದ ನಿಮ್ಮ ಪಾದಸೇವೆ ಮಾಡುತ್ತದೆ, ಪಾದದಿಂದ ಬೇರ್ಪಟ್ಟ ನಂತರ ಹೀಗೇ ಮತ್ತೊಂದು ಜನ್ಮಕ್ಕೆ ಹೊರಟು ನಿಂತ ಚರ್ಮದಾರಿ.

ಅದಕೋ ನೂರೆಂಟು ಹಾದಿ, ಹೂವಂಥ ನಾವೋ ಸೌಂದರ್ಯ, ಪರಿಮಳ ಇರುವಷ್ಟು ದಿನ ಮಾತ್ರ ವಾದಿ, ಸಂವಾದಿ!