Monday, September 29, 2008

ಶ್ರೀಸಾಮಾನ್ಯನಿಗೆ ನಮಸ್ಕಾರ!

ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು.

ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.

ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ'ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್‌ ತಂದುಕೊಡುತ್ತಿದ್ದ, ಪೇಪರ್‌ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ ಹಿಂಡಿ, ಹತ್ತಿಕಾಳು ತರುತ್ತಿದ್ದ. ಆತ ಪೋಸ್ಟ್‌ ಮ್ಯಾನ್‌ ಆಗುವ ಜತೆಜತೆಗೇ ನಗರಕ್ಕೂ ಊರಿಗೂ ಒಂದು ಕೊಂಡಿಯೇ ಆಗಿದ್ದ. ಊರ ಮದುವೆ, ತಿಥಿ ಊಟದ ಖಾಯಂ ಅತಿಥಿಯಾಗಿ, ಯಾರ ಆರೋಗ್ಯವೇ ಹದಗೆಡಲಿ ಅವರಿಗೆ ಔಷಧ ಒದಗಿಸುವ ವ್ಯಕ್ತಿಯಾಗಿ ಶೇಷ ನಾಯ್ಕ ಕಾರ್ಯ ನಿರ್ವಹಿಸುತ್ತಿದ್ದ.

Wednesday, September 24, 2008

ಕವಿತೆಯ ಕಣ್ಣೀರು

ಕೋಮು ಗಲಬೆ ಎಂಬ `ಚಿಕುನ್‌ ಗುನ್ಯಾ' ರೋಗ ಸಾಂಕ್ರಾಮಿಕವಾಗಿ ದಿನೇ ದಿನೇ ಕರ್ನಾಟಕವನ್ನು ಆವರಿಸಿಕೊಳ್ಳುತ್ತಿದೆ. ಮತಾಂತರಕ್ಕೆ ಕಾಯ್ದೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಹಿಂಸಾಚಾರದಿಂದಲೇ ಪರಿಹರಿಸಿಕೊಳ್ಳಲು ಎಲ್ಲರೂ ಉತ್ಸುಕರಾದಂತೆ ಕಾಣುತ್ತಿದ್ದಾರೆ.
ಅವರು ಹೊಡೆದರೆಂದು ಇವರೂ, ಇವರು ಬೈದರೆಂದು ಅವರೂ ಗುದ್ದಾಟ ನಡೆಸಿ ರಸ್ತೆ, ಬೀದಿ, ಮನೆ, ಕಾಂಪೋಂಡ್‌ಗಳು ಅನಾಥವಾಗುತ್ತಿವೆ. ಇದಕ್ಕೆ ಸರಿಯಾಗಿ ಉಪ್ಪು ಖಾರ ಹಚ್ಚಿ, ಒಗ್ಗರಣೆ ಹಾಕಿ, ರಾಜಕೀಯ ನಡೆಸಲೂ ಎಲ್ಲಾ ಪಕ್ಷಗಳೂ ನಾಚಿಕೆ ಬಿಟ್ಟು ಮುಂದಾಗಿವೆ.
ಇದರ ನಡುವೆ ಸಾಮಾನ್ಯನ ನೋವು- ಆತಂಕವನ್ನು ಕೇಳುವವರು, ಬಹುಸಂಖ್ಯಾತ- ಅಲ್ಪಸಂಖ್ಯಾತರ ಬಾಂಧವ್ಯವನ್ನು ಮತ್ತೆ ಕಟ್ಟಿ ನಿಲ್ಲಿಸಿ ಸಮಾಜವನ್ನು ಸಮಸ್ಥಿತಿಗೆ ತರುವವರು ಯಾರು ಎಂಬುದು ಪ್ರಶ್ನೆ. ಗುಜರಾತಿನ ಗಲಬೆ ವೇಳೆ ಕವಿ ಅಶೋಕ್‌ ಗುಪ್ತಾ ಬರೆದ ಒಂದು ಗುಜರಾತಿ ಕವಿತೆಯನ್ನು ಇಲ್ಲಿ ಅನುವಾದಿಸಿ ನೀಡಿದರೆ ಅದು ನಮ್ಮ ಗಲಬೆಯನ್ನೂ ಪ್ರತಿಬಿಂಬಿಸುವುದು ಇಲ್ಲಿ ಪರಿಸ್ಥಿತಿಯ ವ್ಯಂಗ್ಯ.

ಓಡು ಗೆಳತಿ ಓಡು

ಸತ್ತವರ ಆತ್ಮ ಖಂಡಿತ ಶಾಂತಿಯಿಂದಿಲ್ಲ,
ಬಹಳ ಮುಖ್ಯವಾಗಿ ರಾತ್ರಿ ಹೊತ್ತು.
ನನಗೆ ಎಷ್ಟೋ ಸಲ ಕೇಳುತ್ತದೆ,
ಅವನು ಮಹಡಿ ಮೇಲೆ ಹೋಗಿ
ಕೋಣೆ ಬಾಗಿಲು ಹಾಕಿಕೊಳ್ಳುತ್ತಾನೆ,
ಬಾಗಿನ್ನು ಯಾರೂ ತಳ್ಳಿ ಒಳಬರದಿರಲೆಂದು
ಮಂಚ, ಬೆಂಚುಗಳನ್ನು ಅಡ್ಡ ಇಡುತ್ತಾನೆ.
ಕೆಲವೊಮ್ಮೆ ಗಾಢ ಮೌನ,
ಸಿಡಿದು ಹಾರುವ ಬೆಂಕಿ, ಹೆಣ ಸುಟ್ಟ ವಾಸನೆ
ನೆನೆದು ಆ ಮೌನವನ್ನೂ ಒಡೆದು ಅರಚುತ್ತಾನೆ
`ಓಡು ಗೆಳತಿ ಓಡು'.

ನಾನವನನ್ನು ಸಮಾಧಾನಿಸುತ್ತೇನೆ-
`ವರ್ಷಗಳಾದವು ಗೆಳೆಯ ಅವರು ಹೋಗಿ.
ನನಗೇನೂ ಆಗಿಲ್ಲ,
ನೀನಂತೂ ಸತ್ತಾಗಿದೆ'.
ಆದರೂ ಅವನು ಕನವರಿಕೆಯಂತೆ ಕೂಗುತ್ತಾನೆ:
`ಇಲ್ಲ, ಅವರು ಬರುತ್ತಿದ್ದಾರೆ,
ಓಡು ಗೆಳತಿ ಓಡು'.

Monday, September 22, 2008

ನಗರ ಚಳಿಯಲ್ಲೊಂದು ಅಡ್ರೆಸ್ಟಿಕೆ!

[caption id="attachment_92" align="alignleft" width="438" caption="curtacy: flickr"]flickr[/caption]

ಊರು ಬಿಟ್ಟು ಪಟ್ಟಣ ಸೇರಿದ ಮನುಷ್ಯರು ಬೆಳಿಗ್ಗೆ ಬಸ್‌ಸ್ಟ್ಯಾಂಡ್‌ನಲ್ಲಿ ಅಡ್ರೆಸ್‌ ಇಲ್ಲದೇ ನಿಲ್ಲುತ್ತಾರೆ. ತಿಕ್ಕದ ಹಲ್ಲು, ಬಾಚದ ಕೂದಲು, ಅರ್ಧಂಬರ್ಧ ಇನ್‌ಷರ್ಟ್‌, ಎತ್ತೆತ್ತಲೋ ಎತ್ತಿ ಹಾಕುವ ಕಾಲ್ಗಳು, ಭವಿಷ್ಯದ ಬಗ್ಗೆ ಆತಂಕ, ಹಿಂಬದಿ ಪಾಕೀಟಿನಲ್ಲಿರುವ ಹಣದ ಸುರಕ್ಷೆಯ ಬಗ್ಗೆ ಭಯ, ಬಸ್‌ ತಪ್ಪಿಹೋದರೆ ಎಂಬ ಚಡಪಡಿಕೆ, ಡಾಯ್ಲೆಟ್‌ಗೆ ಹೋಗುವ ಅವಸರ.

ಆಗಷ್ಟೇ ನಾವು ನಂನಮ್ಮ ಊರಲ್ಲಿ ಡಿಗ್ರಿ ಮುಗಿಸಿ, ಯಾವುದೋ ವಿಶ್ವವಿದ್ಯಾಲಯದಲ್ಲಿ ಪಿಜಿ ಪೂರೈಸಿ ನಮ್ಮ ಕೈ ಮೇಲೆ ಕೆಲಸ ಇಟ್ಟು, ತಿಂಗಳಿಗೊಂದಾವರ್ತಿ ಸಂಬಳ ನೀಡುವ ಸಾಹುಕಾರರಿಗಾಗಿ ಕಾಯುತ್ತಿರುತ್ತೇವೆ. ಕೆಲಸ ಸಿಕ್ಕಿ, ಒಂದಷ್ಟು ತಿಂಗಳು ದುಡ್ಡು ಕೂಡಿ ಹಾಕಿ ನಮ್ಮ ಮನೆಯ ಬಾಡಿಗೆಯನ್ನು ನಾವೇ ತುಂಬುವಂತಾಗುವ ಹಂತ ತಲುಪುವವರೆಗೆ, ಅಡ್ವಾನ್ಸ್‌ ಅನ್ನು ನಾವೇ ಕೂಡಿಟ್ಟುಕೊಳ್ಳುವ ಸಾಮರ್ಥ್ಯ ಬರುವವರೆಗೆ ನಮಗೆ ನಗರದ ನಂಟರ ಮನೆಯೇ ಅಡ್ರೆಸ್‌.

Wednesday, September 17, 2008

ಹುಟ್ಟಿ ಹಬ್ಬವಾಗುವ ಕ್ರಿಯೆ!

ಗುರುವಾರ ಕನ್ನಡ ಚಿತ್ರರಂಗದಲ್ಲಿ ಹುಟ್ಟುಹಬ್ಬಗಳ ಹರಿದಿನ. ಡಾ ವಿಷ್ಣುವರ್ಧನ್‌ ಹಾಗೂ ಸೂಪರ್‌ ಸ್ಟಾರ್‌ ಉಪೇಂದ್ರ ಅವರಿಗೆ ಗ್ರಾಂಡ್‌ ಹುಟ್ಟುಹಬ್ಬ. ಹಾರಗಳೂ, ತುರಾಯಿಗಳೂ, ಕೇಕುಗಳೂ, ಬಾಕುಗಳೂ ಈ ಸಂದರ್ಭದಲ್ಲಿ ಗಾಂನಗರದಲ್ಲಿ ಓಡಾಡುತ್ತವೆ. ಒಬ್ಬರು ರೆಸಲ್ಯೂಷನ್‌ ಪಾಸ್‌ ಮಾಡಬಹುದು. ಮತ್ತೊಬ್ಬರು `ನನಗೆ ಯೋಗ ಇದೆ, ಯೋಗ್ಯತೆ ಇಲ್ಲ. ಆದರೂ ನನ್ನನ್ನು ಇಷ್ಟು ವರ್ಷ ಬೆಳೆಸಿದ್ದೀರಿ. ಧನ್ಯವಾದಗಳು' ಎಂದು ಭಾಷಣ ಮಾಡಬಹುದು.
ಉಪೇಂದ್ರ ಅವರ `ಬುದ್ಧಿವಂತ' ಚಿತ್ರ ಇದೇ ದಿನ ಬಿಡುಗಡೆಯಾಗಬೇಕಾಗಿದ್ದರೂ ಸೆನ್ಸಾರ್‌ ಮಂಡಳಿ ಸೆನ್ಸಾರ್‌ ಸರ್ಟಿಫಿಕೆಟ್‌ ನೀಡದಿರುವುದರಿಂದ ಒಂದು ವಾರ ಮುಂದೆ ಹೋಗಿದೆ. ಈ ಬಗ್ಗೆ ವಾದ ವಿವಾದ, ಚರ್ಚೆ ಮಂಥನಗಳಿಗೂ ಈ ಜನ್ಮದಿನ ವೇದಿಕೆಯಾಗಬಹುದು. ಆ ಕಡೆ ವಿಷ್ಣುವರ್ಧನ್‌ ಅವರ ಹೊಸ ಚಿತ್ರ `ನಾನೇ ಬೇರೆ ನನ್ನ ಸ್ಟೈಲೇ ಬೇರೆ' ಚಿತ್ರ ಘೋಷಣೆಯಾಗುತ್ತಿದೆ. `ನಂಯಜಮಾನ್ರು' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ.

Tuesday, September 16, 2008

ದೇವರು ಕೋಣೆಯಲ್ಲಿರಲಿ

ಡೀ ಮಂಗಳೂರು ಮನೆ ಬಾಗಿಲು ಹಾಕಿಕೊಂಡು, ಕಿಟಕಿಯಲ್ಲಿ ಆಗಾಗ ಹಣಕಿ ಹಣಕಿ ನೋಡುತ್ತಿದೆ. ಚೆಲ್ಲಾಪಿಲ್ಲಿಯಾದ ಕಲ್ಲು, ಮಣ್ಣು, ರಕ್ತದ ಕಲೆ, ಕೋಲು, ಚಪ್ಪಲಿ, ಕನ್ನಡಕದ ಗ್ಲಾಸ್‌, ಒಡೆದ ಗಾಜು, ಮುರಿದ ಗೇಟುಗಳು ರಸ್ತೆಗಳನ್ನು ಕುಶಲ ಕೇಳುತ್ತಿವೆ.



ಆಸ್ಪತ್ರೆಗೆ ಹೋಗುವವರೂ, ಮೆಡಿಕಲ್‌ ಶಾಪ್‌ನಲ್ಲಿ ಕ್ರೋಸಿನ್‌, ಜೆಲುಸಿನ್‌ ತೆಗೆದುಕೊಂಡು ಬರಲು ಅಂದುಕೊಂಡವರೂ, ಭಾನುವಾರ ಹೊಸ ಸಿನಿಮಾ ನೊಡಿಕೊಂಡು ಬರೋಣ ಎಂದು ಆಸೆಪಟ್ಟವರೂ, ಈಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ ಮಾಡಿಸೋಣ ಎಂದು ಭಾವಿಸಿದವರೂ ಟೀವಿಯಲ್ಲಿ ನ್ಯೂಸ್‌ ಫ್ಲಾಷ್‌ ನೋಡುತ್ತಾ ತಟಸ್ಥವಾಗಿದ್ದಾರೆ.