Friday, January 9, 2009

`ಬಿದ್ದು ಸಾಯಲು ನೀರಿದ್ದ ಬಾವಿಯೇ ಆಗಬೇಕಿಲ್ಲ'

singingಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ' ಎಂದು ಒಂದು ಸಂಕಲನವನ್ನು ಹೊರತಂದು, ಬರೀ ಸೂರ್ಯನ ಮೇಲೆ ಒಂದು ಸಂಕಲನವಿಡೀ ಕವಿತೆಗಳನ್ನು ಬರೆದುಕೊಟ್ಟಿದ್ದರು. `ಸೂರ್ಯ, ಇನ್ನೊಂದು ಲೋಕದ ಕಿಂಡಿ', `ಸೂರ್ಯ- ಇಡೀ ಲೋಕದ ಕಸವನ್ನು ಕಿರಣಗಳ ಕಸಬರಿಕೆಯಿಂದ ಗುಡಿಸುವ ಜಾಡಮಾಲಿ' ಎಂಬಂಥ ಹೊಳಹುಗಳಿದ್ದ ಸಂಕಲನ ಅದು.
ಆದರೆ ಶಾ ಬಾಲುರಾವ್‌ ಅವರು ಬಹಳ ಚೆಲುವಾದ ಕವಿತೆಗಳನ್ನು ಬಹಳ ಹಿಂದೆ ಪ್ರಕಟಿಸಿದ್ದರು. `ನಡೆದದ್ದೇ ದಾರಿ' ಎನ್ನುವುದು ಆ ಸಂಕಲನದ ಹೆಸರು. ಒಟ್ಟು ನಲವತ್ತೆಂಟು ಕವಿತೆಗಳಿವೆ ಅದರಲ್ಲಿ. 1998ರಲ್ಲಿ `ಅಕ್ಷರ ಪ್ರಕಾಶನ' ಪ್ರಕಟಿಸಿದ ಆ ಸಂಕಲನದ ಕವಿಯ ಮಾತು ಈಗಿನ ಕಾವ್ಯ ಜಗತ್ತಿಗೂ ಒಂದು ದಾರಿದೀಪದಂತೆ ಕಾಣಬಹುದು. ಅವರು ಬರೆಯುವ ಕಾಲಕ್ಕೆ ಕಾವ್ಯ ಹೇಗಿತ್ತು ಎಂದು ಅವರು ಹೇಳಿಕೊಂಡಿದ್ದಾರಾದರೂ ಅದರಲ್ಲಿ ನಮ್ಮ ಕಾಲದ ಕಾವ್ಯಭೂಮಿಯ ಸ್ಥಿತಿಗತಿಯನ್ನೂ ಹೇಳುತ್ತಿದೆಯೇನೋ- ಅನಿಸುತ್ತದೆ. ಆ ಮಾತಿನ ಕೆಲವು ಭಾಗಗಳು, ಅವರ ಮಾತಿನಂತೆ ನಡೆದುಕೊಂಡಿರುವ ಒಂದಿಷ್ಟು ಕವಿತೆಗಳು ಇಲ್ಲಿವೆ. ನಿಮ್ಮ ಓದಿಗಾಗಿ. ದಯವಿಟ್ಟು ಕೊಂಡು ಓದಿ ಸಂಕಲನವನ್ನು. ಬೆಲೆ 50 ರೂಪಾಯಿಗಳು.

ಮುಮ್ಮಾತು
ನನಗೆ ತಮಾಷೆಯೆನಿಸುವ ನನ್ನ ಬದುಕಿನ ಹಲವಾರು ವ್ಯಂಗ್ಯಗಳಲ್ಲಿ ಒಂದೆಂದರೆ 1947-51ರ ಕಾಲೇಜು ದಿನಗಳಿಂದ ಹಿಡಿದು ಇವತ್ತಿನ ತನಕ ಕವಿತೆಯ ಹೆಸರಲ್ಲಿ ನನಗೆ ತೋಚಿದ್ದನ್ನು ತೋಚಿದಂತೆ ಗೀಚುತ್ತಾ ಬಂದಿದ್ದು, ಅವುಗಳಲ್ಲಿ ಅನೇಕವು ಆಗಿಂದಾಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು, ನನ್ನ ಅಂತರಂಗದ ತಜ್ಞ ಮಿತ್ರರಿಗೆ ಒಪ್ಪಿಗೆಯಾಗಿದ್ದರೂ ನನ್ನ ಸರಿಯಾದ ಕವಿತಾ ಸಂಗ್ರಹವೊಂದು ಇದುವರೆಗೂ ಬಂದಿಲ್ಲ....ಇದಕ್ಕೆ ಮುಖ್ಯ ಕಾರಣವೆಂದರೆ ನನ್ನ ಸೋಮಾರಿತನದ ಜೊತೆಗೆ ನನ್ನ ರಚನೆಯ ಬಗ್ಗೆ ನನ್ನೊಳಗಿನ ತೃಪ್ತಿ- ಅತೃಪ್ತಿಗಳ ಹೊಯ್ದಾಟ, ಗೊಂದಲ.
ಈಚೆಗೊಂದು ದಿನ ಇಲ್ಲಿ ಬಂದಿದ್ದ ನನ್ನ ತರುಣ ಕವಿಮಿತ್ರ ಜಯಂತ ಕಾಯ್ಕಿಣಿ, ಅದೇ ಆಗ ಪ್ರಕಟವಾಗಿದ್ದ ನನ್ನ ಒಂದೆರಡು ಕವಿತೆಯನ್ನು ಓದಿ ಮೆಚ್ಚಿದ್ದವನು `ಕಾಕಾ, ನಿಮ್ಮ ಕವಿತೆಗಳನ್ನೆಲ್ಲಾ ನೋಡಬೇಕಾಗಿದೆ, ತೆಗೆಯಿರಿ' ಎಂದು ಹಠ ಹಿಡಿದ ಫಲವಾಗಿ ಕಪಾಟಿನ ಹಳೆಯ ಕಡತಗಳಲ್ಲಿ ಅಡಗಿದ್ದ ನೂರಕ್ಕೂ ಹೆಚ್ಚು ಕವಿತೆಗಳು ಹೊರಬಂದವು. ಅದರಲ್ಲಿ ನಲವತ್ತೆಂಟನ್ನು ಆರಿಸಿ ಈ ಸಂಗ್ರಹಕ್ಕೆ ಕೊಟ್ಟಿದೆ. ಈ ಆಯ್ಕೆಯಲ್ಲಿ ಸಮಪಾಲು ಕೀರ್ತಿ ಜಯಂತನಿಗೆ ಸಲ್ಲುತ್ತದೆ.

Thursday, January 8, 2009

ಬಾಗಿಲೇ ತೆರೆದು, ಸೇವೆಯನು ಕೊಡು

madwa_011108_euegen-2We are continuously opening the doors with happiness and closing them with despair.
-ಹಾಗೆಂದು ಸಿ ಡಿ ಮೋರ್ಲೆ ಎಂಬ ಲೇಖಕ `ಡೋರ್‌' ಎಂಬ ಲೇಖನದಲ್ಲಿ ಬಾಗಿಲನ್ನು ಬಹಳ ಅದ್ಭುತವಾಗಿ ತೆರೆದು ತೋರಿಸುತ್ತಾ ಹೋಗುತ್ತಾನೆ. ಬಾಗಿಲಿನ ಹಿಂದೆ ಏನೆಲ್ಲಾ ಇರಬಹುದು. ಬಾಗಿಲು ನಮ್ಮೆಲ್ಲಾ ರಹಸ್ಯಕ್ಕೂ ಊಹೋಪೋಹಕ್ಕೂ, ಅರ್ಧ ಸತ್ಯಕ್ಕೂ ಒಳ್ಳೆಯ ಉದಾಹರಣೆ.
ಹಿಂದೊಮ್ಮೆ ಆ ಲೇಖನದಿಂದ ತುಂಬ ಪ್ರೇರಣೆ ಹೊಂದಿ ಕಾಲೇಜು ಓದುವ ಹೊತ್ತಿಗೆ ಬರೆದ ಕವಿತೆ `ಬಾಗಿಲು'. ಸ್ವಲ್ಪ ದೀರ್ಘವಾಯಿತು ಎಂದು ನೀವು ಬೇಕಾದರೆ ಬೈಯಬಹುದು. ಮುಚ್ಚಿದ ಬಾಗಿಲು ನಮಗೆಲ್ಲಾ ನೀಡಿದ ವಿಸ್ಮಯಕ್ಕಾಗಿ ನಮಿಸುತ್ತಾ ಇಲ್ಲಿ ಆ ಕವಿತೆ ಹಾಜರಾಗುತ್ತಿದೆ.


1
ಸುಟ್ಟಿಟ್ಟಿಗೆಗೆ ಮೆದು ಮಣ್ಣು ಮೆತ್ತಿ,
ಪಂಚಾಂಗದ ಇಂಚಿಂಚೂ ನೀರೆರಚಿದಾಗ
ಸೂರಿನ ಹನಿಸುಗಳ ತಡೆಗೆ
ಪರದೆ ಕಣ್ಣ ಗೋಡೆ:
ಹೊಸಮಣ್ಣ ಪ್ರಾಕಾರದಲ್ಲಿ ಅವಿತರೆ
ಬಿಟ್ಟೀತೇ ಹುಚ್ಚು ಗಾಳಿ
ಮಳೆಯ ನಡುವೆ ಗೂಳಿ ನುಗ್ಗುವ ಪರಿ?
ಪಾಗರದ ನಡುವಿನಲಿ ನಮ್ಮನ್ನೇ ಕಳಕೊಂಡಾಗ
ನುಸುಳಿ ಹೊರ ಹೊರಡಲಿಕ್ಕೆ,
ಎಳೆ ಬಿಸಿಲಿನ ಅಂಬೆಗಾಲಿಡುವ ನಾಳೆಗಳ
ರಂಗವಲ್ಲಿ ಚುಕ್ಕೆ ಇಟ್ಟು ಸ್ವಾಗತಿಸುವುದಕ್ಕೆ
ಬೇಕಲ್ಲವೇ?-
ಕಾವಲು ಕಣ್ಣ ಮುಚ್ಚಿಸಿ
ತಿಂಗಳ ಬೆಳಕ ರಾತ್ರಿಗಳ ಅಟ್ಟಿ
ನಿಲ್ಲಿಸುವ ನಂದಿ-ಬೀಟೆ ಸಾಗವಾನಿಯ ಗಟ್ಟಿ
ಬಾಗಿಲು,
ಮತ್ತು
ಬಿಡುವ ನೆಮ್ಮದಿಯ ನಿಟ್ಟುಸಿರು.

Monday, January 5, 2009

`ಹೆಣ್ಣಾಗಿದ್ದರೆ ನಾನೂ ವೇಶ್ಯೆಯಾಗುತ್ತಿದ್ದೆ'



[caption id="attachment_247" align="aligncenter" width="500" caption="ಸಾಹಿತ್ಯ ಸಮಾರಂಭವೊಂದರಲ್ಲಿ ಪಿಳ್ಳೆ (ಎಡಭಾಗದವರು)"]ಸಾಹಿತ್ಯ ಸಮಾರಂà²à²µà³Šà²‚ದರಲ್ಲಿ ಪಿಳ್ಳೆ (ಎಡà²à²¾à²—ದವರು)[/caption]

ಕೆ ಜಿ ಶಂಕರ ಪಿಳ್ಳೆ.
ಮಲೆಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೇರಳ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿರುವ ಇವರ ಕವಿತೆಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪದಗಳು ಪುನರಾವರ್ತನೆಯಾಗುತ್ತಾ ಆಗುತ್ತಾ ನಿಮಗೆ ಹೊಸ ಅರ್ಥವನ್ನು, ಹೊಳಹನ್ನು ಕೊಡುತ್ತಾ ಹೋಗುತ್ತವೆ ಅವರ ಕವಿತೆಗಳು.
ಅವರು ಮಾನವ ಹಕ್ಕುಗಳ ಹೋರಾಟದಲ್ಲೂ ಸಕ್ರಿಯವಾಗಿದ್ದಾರೆ. ಪ್ಯಾಧ್ಯಾಪಕರಾಗಿ ದುಡಿದ ಅನುಭವ ಅವರದು. ಅವರ ಕವಿತೆಯನ್ನು ಓದುತ್ತಾ ಹೋದರೆ ಹೊಸ ಬಗೆಯ ಕಾವ್ಯವಾಗಿ ಕಾಣುತ್ತಾ ಹೋಗುತ್ತದೆ, ಬೆರಗಾಗುತ್ತದೆ. `ಬಾವಿ', `ಬೊಕ್ಕ', `ತರಾವರಿ ಪೋಜಿನ ಫೋಟೋಗಳು', `ಜಿಡ್ಡು ಮೆತ್ತಿದ ಆರಾಮಕುರ್ಚಿ', `ಉಡುದಾರ', `ಬಂಗಾಲ್‌' ಮೊದಲಾದ ಕವಿತೆಗಳನ್ನು ಓದುತ್ತಾ ಓದುತ್ತಾ ಕಾವ್ಯಾಸಕ್ತರಾದ ನೀವು ಥ್ರಿಲ್‌ ಆಗಿರುತ್ತೀರಿ. ಕನ್ನಡದಲ್ಲಿ ಅಡಿಗರನ್ನು, ಲಂಕೇಶರನ್ನು ಓದಿ ಮೆಚ್ಚಿ ಆರಾಸುವವರು ಈ ಸಂಕಲನವನ್ನೂ ಅಷ್ಟೇ ಪ್ರೀತಿಯಿಂದ ಪರಿಗ್ರಹಿಸಲು ಸಾಧ್ಯ.
`ಬೊಕ್ಕ ಬೊಕ್ಕನ ಜೊತೆ ಮಾತನಾಡುವಾಗ
ಬಚ್ಚಿಡುವಂಥದ್ದು ಏನೂ ಇಲ್ಲ.
ಒಂದು ನಾಜೂಕಿನ ನಗೆಯಲ್ಲಿ
ಭೂತವೋ ಭವಿಷ್ಯವೋ ಏನು ಬೇಕಾದರೂ
ಪ್ರತಿಬಿಂಬಿಸಲು ಪ್ರಯಾಸವಿಲ್ಲ

ಆದರಿಂದು,
ಕವಿ ಕವಿಯ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಯಾತ್ರಿಕ ಯಾತ್ರಿಕನ ಜೊತೆ ಮಾತಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ನೆರೆಯವ ನೆರೆಯವನ ಜೊತೆ ಮಾತನಾಡುವಾಗ
ಬಚ್ಚಿಡುತ್ತಾನೆ ಏನೋ ಒಂದನ್ನು.
ಇಂಡಿಯಾ ಚೀನಾ ಜೊತೆ ಮಾತನಾಡುವಾಗ
ಬಚ್ಚಿಡುತ್ತವೆ ಎಲ್ಲವನ್ನೂ....'
-ಎಂದೆಲ್ಲಾ ಬರೆದು ಬೆಚ್ಚಿ ಬೀಳಿಸುವ ಅವರ ಕವಿತೆಗಳಲ್ಲಿ ನಿತ್ಯ ನೈಮಿತ್ಯಿಕ ವಿಷಯಗಳೇ ವಸ್ತುಗಳಾಗಿವೆ. ಆದರೆ ಆ ನಮ್ಮ ನಿತ್ಯದಲ್ಲೇ ಇರುವ ಸಂಗತಿಯಲ್ಲಿ ಅವರು ಸುರಿಸುವ ಜಿಜ್ಞಾಸೆ, ಓದೇ ಅನುಭವಿಸಬೇಕಾದ ಸಂಗತಿ.
ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ `ಕೆಜಿ ಶಂಕರ ಪಿಳ್ಳೆಯವರ ಕವಿತೆಗಳು' ಸಂಕಲನ ಇದೀಗ ಮಾರುಕಟ್ಟೆಯಲ್ಲಿದೆ. ಮಲೆಯಾಳಂ ಮತ್ತು ಕನ್ನಡ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿ ಅನುಭವವಿರುವ ತೇರ್‌ಳಿ ಶೇಖರ್‌ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರ ಅನುವಾದದ ಸೊಗಸು ಎಷ್ಟು ಅದ್ಭುತವಾಗಿದೆ ಎಂದರೆ ಮೂಲದ ಲಯ ಒಂಚೂರೂ ಆಚೀಚೆ ಆಗಿಲ್ಲ. ಪಿಳ್ಳೆ ಕವಿತೆಗಳ ಲಯವೇ ಭಿನ್ನ. ಅದನ್ನು ಅನುವಾದದಲ್ಲೂ ಉಳಿಸಿಕೊಳ್ಳುವುದು ಅನುವಾದಕರಿಗೆ ಸಾಧ್ಯವಾಗಿದೆ ಎನ್ನುವುದು ಕಾವ್ಯಪ್ರೇಮಿಗಳಿಗೆ ಖುಷಿಯ ವಿಷಯ.
ಆ ಮೂಲ ಕಾವ್ಯದ ಪುಳಕಕ್ಕೆ, ಅನುವಾದದ ಜಲಕ್‌ಗೆ ಇಲ್ಲಿ ಒಂದೆರಡು ಕವಿತೆಗಳನ್ನು ನೀಡಲಾಗುತ್ತಿದೆ, ಓದಿ. ನೀವೇ ಇಷ್ಟಪಟ್ಟು ಆ ಸಂಕಲನವನ್ನು ಹುಡುಕಿ ಹೋಗಿಬಿಡುತ್ತೀರಾ.

ಕಾಗೆ
ಗುಡ್ಡ ನಿಂತಿದೆ ಗುಡ್ಡವಾಗಿಯೇ
ಗುಡ್ಡದ ಮೇಲೆ ಮಾವು ನಿಂತಿದೆ ಮಾವಾಗಿಯೇ
ಮಾವಿನ ಕೆಳಗೆ ಹಸು ಮೇಯುತ್ತಿದೆ ಹಸುವಾಗಿಯೇ
ಮಾವಿನ ಕಣ್ಣಿಗೆ ಕಾಗೆ ಕುಟುಕುವಾಗ
ಮಾವು ಅಲುಗಾಡುತ್ತದೆಹಸುವಾಗಿಯೇ
ಗುಡ್ಡದ ಬಾಲಕ್ಕೆ ಕಾಗೆ ಕುಟುಕುವಾಗ
ಗುಡ್ಡ ಅಲುಗಾಡುತ್ತದೆ ಹಸುವಾಗಿಯೇ

ನಾನು
ವೇಶ್ಯೆಯಾಗಿದ್ದಳು ನನ್ನ
ಮುದಿ ಮುದಿ ಮುತ್ತಜ್ಜಿ
ಹೆಣ್ಣಾಗಿದ್ದರೆ
ನಾನೂ
ವೇಶ್ಯೆಯಾಗುತ್ತಿದ್ದೆ.

ವಿಟನಾಗಿದ್ದ ನನ್ನ
ಮುದಿ ಮುದಿ ಮುತ್ತಾತ
ಗಂಡಾಗಿದ್ದರೆ
ನಾನೂ
ವಿಟನಾಗುತ್ತಿದ್ದೆ.

ಶಬ್ದಾಸುರನ ನಗರದಲ್ಲಿ
ಒಂದು ಹಿಂಡು ಕಿವಿಗಳು
ಅಲೆಯುತ್ತಿವೆ
ಮೌನವನ್ನು ದತ್ತು ಪಡೆಯಲು,
ಶಬ್ದಾಸುರನ ನಗರದಲ್ಲಿ.

ಒಲವಿನಂತೆಯೋ
ಒತ್ತೆಯಂತೆಯೋ
ಪಿ. ಎಫ್‌. ಲೋನಿನಂತೆಯೋ
ಬಂಡೆ ರಾಶಿಯಂತೆಯೋ
ೃಹತ್‌ ತಟಾಕದಂತೆಯೋ
ಥಟ್ಟನೆ

ಆವಿಯಾಗಿ ಮರೆಯಾದ ಮೌನವನ್ನು.
ಕೆತ್ತಿ ಕೆತ್ತಿ ಶಿಲ್ಪಗಳನ್ನೋ
ಮೊಗೆದು ನೆನಸಿ ಹಣ್ಣುಗಳನ್ನೋ
ಬೆಳೆಸಬಹುದಾದ ಮೌನವನ್ನು.

ಅರ್ಥ
ಭಾಷೆಯ ದಾರದಲ್ಲಿ ಪೋಣಿಸಿ
ಜಗತ್ತನ್ನು
ಗಡಿಯಾರದಂತೆ
ಹೊತ್ತು ನಡೆಯುತ್ತೇನೆ
ಎತ್ತ ಹೋಗುವಾಗಲೂ
ಏನೇ ಮಾಡುವಾಗಲೂ

ಆದ್ದರಿಂದ
ಯಾವ ದೂರಕ್ಕೂ
ಯಾವ ಕರ್ಮಕ್ಕೂ
ಯಾವ ಮಾತಿಗೂ
ಯಾವ ತಾಳಕ್ಕೂ
ಯಾವ ಹೊತ್ತಲ್ಲೂ
ಒಂದೇ ಒಂದು ಅರ್ಥ: ಕಾಲ.

(ಮುಂದಿನ ಓದಿಗೆ ನೀವು ಆ ಸಂಕಲನವನ್ನು ತೆಗೆದುಕೊಳ್ಳಲೇಬೇಕು.)

Sunday, January 4, 2009

ಇವತ್ತೇ `ಆಮೀರ್‌' ನೋಡಿ

still3ಮೊನ್ನೆ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಜಗತ್ತಿನ ಇಡೀ ಭಯೋತ್ಪಾದನೆಯನ್ನು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮಗಳ ಕುಲುಮೆಯಲ್ಲಿ `ಜ್ವಲಿಸುತ್ತಿರುವ ತಾಜ್‌ ಹೊಟೇಲ್‌' ಭಯೋತ್ಪಾದನೆಯ ಸಂಕೇತವಾಗಿ ಹೋಗಿದ್ದೂ ಆಗಿದೆ. ಆದರೆ ಭಯೋತ್ಪಾದನೆ ಜಗತ್ತನ್ನು ಸುಡುತ್ತಾ ಬಂದು ಎಷ್ಟೋ ವರ್ಷಗಳಾದವು. ಅದರ ಬಿಸಿ ಮುಂಬೈ, ದೆಹಲಿ, ಬೆಂಗಳೂರುಗಳನ್ನು ತಟ್ಟಿದ್ದೂ ಇತ್ತೀಚೆಗೇನಲ್ಲ.
ಆದರೆ ಕಳೆದ ಒಂದು ವರ್ಷದಿಂದೀಚೆ ಭಯೋತ್ಪಾದಕ ಕೃತ್ಯದ ಮೇಲೆ ಹಿಂದಿಯಲ್ಲಿ ಒಂದೇ ಸಮನೆ ಚಿತ್ರಗಳು ತಯಾರಾಗುತ್ತಿವೆ. `ಮುಂಬೈ ಮೇರಿ ಜಾನ್‌', `ಎ ವೆಡ್ನೆಸ್‌ಡೇ', `ಆಮೀರ್‌' ಹಾಗೂ `ಶೂಟ್‌ ಆನ್‌ ಸೈಟ್‌' ಅಂಥ ನಾಲ್ಕು ಸಿನಿಮಾಗಳು. ಅವುಗಳಲ್ಲಿ `ಎ ವೆಡ್ನೆಸ್‌ಡೇ' ಚಿತ್ರವನ್ನು ನಮ್ಮ ಗಾಂನಗರವೂ ನೋಡಿಬಿಟ್ಟಿದೆ. ಮೇಕಿಂಗ್‌ ದೃಷ್ಟಿಯಿಂದ ಉತ್ತಮ ಚಿತ್ರವನ್ನಾಗಿ ಅದನ್ನು ನೋಡಬಹುದಾದರೂ ಅದು ಪ್ರತಿಪಾದಿಸುವ ಮೌಲ್ಯ, ಅಂತರಂಗದಲ್ಲಿ ಅದಕ್ಕಿರುವ ರಂಜಕ ಗುಣ, ಪ್ರಚೋದಿಸುವ ಮನಸ್ಥಿತಿಯನ್ನು ಯಾರಾದರೂ ಪ್ರಶ್ನಿಸಿಯಾರು.
ಅವುಗಳಲ್ಲಿ `ಮುಂಬೈ ಮೇರಿ ಜಾನ್‌' ಮತ್ತು `ಆಮೀರ್‌' ಹೆಚ್ಚು ಸಂವೇದನೆಯ ಸಿನಿಮಾ. ಅದರಲ್ಲೂ `ಆಮೀರ್‌' ಒಂದು ಘಟನೆಯ ಕತೆಯಾಗುತ್ತಲೇ ಸಾಮಾನ್ಯರ ಜಗತ್ತಿನ ತಲ್ಲಣದ ನೇರ ಪ್ರಸಾರವೂ ಆಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿಯ ಒಂದು ದಿನದ ಬದುಕಲ್ಲಿ ಎದುರಾಗುವ ಹಠಾತ್‌ ಬೆಳವಣಿಗೆ, (ಈಗಿನ ಭಯೋತ್ಪಾದಕ ವಾತಾವರಣದಲ್ಲಿ)ನಮ್ಮ ನಿಮ್ಮ ಮನೆಯಲ್ಲಿ ಕೂಡ ಆಗಬಹುದಾದ ವಾತಾವರಣವಾಗಿ ಕಾಣುತ್ತದೆ. ಆ ಚಿತ್ರದ ವ್ಯಕ್ತಿ ಹಂತಹಂತವಾಗಿ ನಾವೆಲ್ಲರೂ ಆಗಿ ಬದಲಾಗುವುದರಲ್ಲೇ ಚಿತ್ರದ ಯಶಸ್ಸಿದೆ. ಏನಿಲ್ಲ, ಇವತ್ತು (ಭಾನುವಾರ, 4,ಜನವರಿ 2009) `ಆಮೀರ್‌' `ಎನ್‌ಡಿಟೀವಿ ಕಲರ್ಸ್‌'ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ನೋಡಿ. ಇಲ್ಲದಿದ್ದರೆ ಆ ಚಿತ್ರದ ಡಿವಿಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹುಡುಕಿದರೆ ಕಷ್ಟವೇನಿಲ್ಲ.
ಸಿನಿಮಾ ಹ್ಯಾಗಿದೆ? ಮುಂದೆ ಓದಿ.

Friday, January 2, 2009

ಮತ್ತೊಂದು ವರ್ಷ: ಹೊಸ ವರ್ಷನ್‌!

IND0160Bಗೋಡೆಯ ಮೇಲೆ ಹೊಸ ಕ್ಯಾಲೆಂಡರ್‌ ಹಾಕಬೇಕು, ಎಲ್ಲಾದರೂ ಡೇಟ್‌ ಬರೆಯಬೇಕಾಗಿ ಬಂದಾಗ ಬದಲಾದ ಇಸ್ವಿಯನ್ನು ನೆನಪು ಮಾಡಿ ನೆನಪಿಟ್ಟುಕೊಳ್ಳಬೇಕು. ಜನವರಿಯಿಂದಾದರೂ ಸರಿಯಾಗುತ್ತೇನೆ ಎಂದು ಮತ್ತೊಂದು ವರ್ಷ ಹೊಸ ರೆಸಲ್ಯೂಷನ್‌ ತೆಗೆದುಕೊಳ್ಳಬೇಕು. ಈ ವರ್ಷದಿಂದ ಕುಡಿತವನ್ನು ಬಿಟ್ಟೆ, ಇನ್ನು ಸಿಗರೇಟು ಮುಟ್ಟುವುದೇ ಇಲ್ಲ ಎಂದೆಲ್ಲಾ ನೆಂಟರಿಷ್ಟರ ಹತ್ತಿರ ಜನವರಿ ಮೊದಲ ವಾರದಲ್ಲೇ ಕೊಚ್ಚಿಕೊಳ್ಳುವುದಾದರೆ ಕೊಚ್ಚಿಕೊಳ್ಳಿ. ಇಲ್ಲದಿದ್ದರೆ ಜನವರಿ ಮುಗಿಯುತ್ತಲೇ ಜಾರಿಗೆ ಬಂದ ಆ ರೆಷಲ್ಯೂಷನ್‌ ಜಾರಿ ಹೋಗಿಬಿಡಬಹುದು.
ಜನವರಿ ಒಂದು ಥರ ಸ್ಟಾಕ್‌ ಕ್ಲಿಯರೆನ್ಸ್‌ ತಿಂಗಳು. ಕಳೆದ ವರ್ಷ ಬಾಕಿ ಇಟ್ಟುಕೊಂಡ ವಿಷಯಗಳನ್ನೆಲ್ಲಾ ಮುಗಿಸಲೇಬೇಕಾಗುತ್ತದೆ. ತೆಗೆದುಕೊಳ್ಳಬೇಕಾದ ಹೊಸ ವಸ್ತು, ಹಣ ತೊಡಗಿಸಬೇಕಾದ ಮ್ಯೂಚುವಲ್‌ ಫಂಡ್‌, ಪ್ರಾರಂಭಿಸಬೇಕಾದ ಹೊಸ ವ್ಯಾಪಾರ, ನಿಲ್ಲಿಸಲು ನಿರ್ಧರಿಸಿದ ಜಗಳ, ತೆಗೆದುಕೊಳ್ಳಬೇಕೆಂದುಕೊಂಡ ಸೈಟ್‌, ಕೊಂಡ ಸೈಟ್‌ನಲ್ಲಿ ಕಟ್ಟಿಸಲು ಶುರುಮಾಡಬೇಕಾದ ಮನೆ, ತುಂಬಬೇಕಾದ ಸಾಲ, ಭರಿಸಬೇಕಾದ ಬಡ್ಡಿ ಇತ್ಯಾದಿ ಇತ್ಯಾದಿ. ಹಳೆಯ ವರ್ಷದಲ್ಲಿ ಬಿಡುಗಡೆ ಮಾಡಬೇಕಾಗಿದ್ದ ಚಿತ್ರವನ್ನು ಬೇಕೆಂದೇ ಮುಂದೂಡಿ, ಹೊಸ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದುಕೊಂಡಿದ್ದೆಲ್ಲಾ ಆಗುತ್ತದಾ, ಬಿಡುಗಡೆಯಾದ ಚಿತ್ರ ಹಿಟ್‌ ಆಗುತ್ತದಾ ಎಂದೇ ಚಿಂತಿಸುತ್ತಾ ಜನವರಿ ಪ್ರತಿ ಹೊಸವರ್ಷಕ್ಕೂ ಒಂದು ಥರದ ಜನ`ವರಿ'ಯೇ ಆಗುತ್ತದೆ.
ಹೊಸ ವರ್ಷ ಎಂದರೆ ಸಂಭ್ರಮ. ಅಲ್ಲಿ ಇರುವುದು ಭರವಸೆ. ಆದರೆ ಆ ಭರವಸೆ ಹೆಚ್ಚಿನ ಸಂದರ್ಭದಲ್ಲಿ ಕ್ಷಣಿಕ, ಕೆಲವೊಂದು ಶಾಶ್ವತ. ಕಾಲೇಜಿನ ಎಷ್ಟೋ ಹುಡುಗ, ಹುಡುಗಿಯರು ಮಾತು ಬಿಟ್ಟಿದ್ದರೂ ಹೊಸ ವರ್ಷದಂದು ದೋಸ್ತರಾಗುತ್ತಾರೆಂಬುದು ಒಂದು ಶಾಶ್ವತ ಭರವಸೆ. ಬೈಯುವ ಮಾಸ್ತರು, ಲೆಕ್ಚರರ್‌ಗಳು ವಿದ್ಯಾರ್ಥಿಗಳನ್ನು ಹೊಸ ವರ್ಷದ ದಿನವಾದರೂ ಚೆನ್ನಾಗಿ ಮಾತಾಡಿಸುತ್ತಾರೆ ಎಂಬ ಭರವಸೆ ಕಾಲೇಜಿನ ಕ್ಲಾಸ್‌, ಪಿರಿಯಡ್‌ಗಳಿಗೆ. ಇದು ಕ್ಷಣಿಕ ಆಗಿರಲೂಬಹುದು. ರೇಗುವ ಕಂಡಕ್ಟರ್‌, ಸರಿಯಾಗಿ ಮಾತಾಡಿಸದೇ ದಿನಾ ಟೆಕ್ಕಿಗಳನ್ನು ತುಂಬಿಸಿಕೊಳ್ಳುವ ಕ್ಯಾಬ್‌ಡ್ರೈವರ್‌, ಪ್ರಾಜೆಕ್ಟ್‌ ಹೆಡ್‌, ಸರ್ಕಾರಿ ಆಸ್ಪತ್ರೆ ಡಾಕ್ಟರ್‌, ಮಹಾನಗರ ಪಾಲಿಕೆಯ ಸಿಬ್ದಂದಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳೆಲ್ಲಾ ಆ ಒಂದು ದಿನವಾದರೂ `ಹ್ಯಾಪಿ ನ್ಯೂ ಈಯರ್‌' ಸ್ವೀಕರಿಸಿ, ನಗುತ್ತಾ `ವಿಶ್‌'ವಾಸ ತೋರಿಸಬಹುದು ಎಂಬುದು ಶಾಶ್ವತವೋ, ಕ್ಷಣಿಕವೋ- ನಿರ್ಧರಿಸಲಾಗದ ಭರವಸೆ.