Thursday, August 12, 2010

ಕಿರಂ ಮಾತು ನಿಲ್ಲಿಸಿದ್ದಾರೆ, ನಾವು ಬರಹ ಶುರು ಮಾಡೋಣ!


ಎಣ್ಣೆ ಹಾಕಿದ ಇಳಿಗೂದಲು, ಹೆಗಲಿಗೆ ಹಾಕಿದ ಚೀಲ ಮಾಸಲು. ಕಾಲಲ್ಲಿ ಇದ್ದ ಚಪ್ಪಲಿಯಲ್ಲಿ ಯಾರಿಗೂ ಅರಿವಿಗೆ ಬಾರದ ಸವೆತ, ಕಣ್ಣಲ್ಲಿ ಸಣ್ಣ ನಾಚಿಕೆ, ಬೆರಳುಗಳಿಗೆ ಆಗಾಗ ಸಿಗರೇಟು ಹಿಡಿದುಕೊಳ್ಳುವ ಚಡಪಡಿಕೆ, ತೆಗೆದುಕೊಂಡ ಕನ್ನಡಕಕ್ಕೆ ಎಷ್ಟು ವರುಷಗಳಾಗಿದ್ದವೋ, ಅವರ ತಲೆಯೊಳಗೆ ಪೇರಿಸಿಟ್ಟ ಅಸಂಖ್ಯ ಹೊತ್ತಿಗೆಗಳ ಜ್ಞಾನದ ರ್ಯಾಕ್ಗೆ ಎಷ್ಟು ಸಂವತ್ಸರಗಳಾಗಿದ್ದವೋ? ಕುಗ್ಗಿದಂತೆ ನಡೆದು ಬರುತ್ತಿದ್ದ, ಉಬ್ಬಿ ಉಬ್ಬಿ ಮಾತಾಡುತ್ತಿದ್ದ, ಪ್ರೀತಿಯಿಂದ ಕೀಟಲೆಗಳಿಗೀಡಾಗುತ್ತಿದ್ದ, ಶಿಷ್ಯರ ಕಣ್ಣುಗಳನ್ನು ತಮ್ಮ ಬರುವಿಕೆಯಿಂದ ಅರಳಿಸುತ್ತಿದ್ದ, ಹೊಸ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನವನ್ನು ಉಕ್ಕಿಸುತ್ತಿದ್ದ, ಅಸ್ಖಲಿತ ಪಾಂಡಿತ್ಯ ಮತ್ತು ಅಪರಿಮಿತ ಕಾವ್ಯಪ್ರೀತಿಯಿಂದ ಮಾತಿನಲ್ಲೇ ಕವನ ಸಂಕಲನ, ಕಥಾ ಸಂಕಲನ, ವಿಮಶರ್ಾ ಸಂಕಲನಗಳನ್ನು ಬರೆದು ಬರೆದು ಓದುಗರ ಕಿವಿಗಳನ್ನು ತುಂಬುತ್ತಿದ್ದ ಅವರು ಇನ್ನಿಲ್ಲ.
ಅವರು ಕಿರಂ ಎಂಬ ಮುಖ, ಕಿರಂ ಎಂಬ ಸಖ.
ಯಾವುದೇ ದೊಡ್ಡ ಸಮಾರಂಭಗಳ ನೈತಿಕ ಬೆಂಬಲದಂತೆ ಕಿರಂ ನಮಗೆ ಇದ್ದರು. ಕನ್ನಡದ ಹೊಸ ಓದುಗ ಮತ್ತು ಬರಹಗಾರರನ್ನು ಪ್ರಭವಿಸಿದ ಅಸ್ತಂಗತ ನಾಯಕರ ಬಗ್ಗೆ ಸಮಾರಂಭ ನಡೆದರೆ ಅಲ್ಲಿ ಹಾಜರಿರುತ್ತಿದ್ದವರು ಕಿರಂ. ಅಡಿಗರ ಬಗ್ಗೆ ಸಮಾರಂಭ ನಡೆದರೆ ಅಡಿಗರನ್ನು ಅಧಿಕೃತವಾಗಿ ಅರ್ಥ ಮಾಡಿಸಲು ಬರುತ್ತಿದ್ದವರು ಕಿರಂ. ಬೇಂದ್ರೆಯ ಕವಿತೆ ಅರ್ಥವಾಗಲಿಲ್ಲವೆಂದರೆ ಅದಕ್ಕೆ ಕಿರಂ ಒಬ್ಬ ಅದ್ಭುತ ರೆಫರೆನ್ಸ್ ಆಗಿರುತ್ತಿದ್ದರು. ಲಂಕೇಶ್ ಎಂದರೆ ಅವರನ್ನು ಹತ್ತಿರದ ಒಡನಾಟ ಮತ್ತು ಅವರ ಆಳ ಅಧ್ಯಯನದಿಂದ ನಮಗೆ ಅರ್ಥ ಮಾಡಿಸಲು ಬರುತ್ತಿದ್ದವರು ಕಿರಂ. ಎಂಥ ಗೊಂದಲ ಏರ್ಪಟ್ಟರೂ ಕಿರಂ ಬರಬಹುದು, ನಮ್ಮ ಗೊಂದಲವನ್ನು ನಿವಾರಿಸಿ ಹರಸಬಹುದೆಂಬ ಭರವಸೆಯಂತೆ ಅವರಿದ್ದರು. ಸಭೆಯಲ್ಲಿ ಯಾವುದೋ ಮೂಲೆಯ, ಯಾವುದೋ ಕುಚರ್ಿಯಲ್ಲಿ ಅವರು ಕೂತಿದ್ದಾರೆ ಎಂದರೂ ಸಾಕಿತ್ತು, ಬಂದು ಮೈಕ್ ಎದುರು ನಿಂತು ಭಷಣ ಮಾಡಬೇಕೆಂದೇ ಇರಲಿಲ್ಲ.
ಕಿರಂ ಕನ್ನಡ ಸಾಹಿತ್ಯಲೋಕದ ಒಬ್ಬ ದ್ರೋಣಾಚಾರ್ಯ. ಅವರು ಕ್ಲಾಸ್ರೂಂನಲ್ಲಿ ಮಾಡುವುದಕ್ಕಿಂತ ಹೆಚ್ಚು ಪಾಠವನ್ನು ಹೊರಗೆ ಮಾಡಿದರು, ಕ್ಲಾಸ್ರೂಂನೊಳಗಿನ ವಿದ್ಯಾಥರ್ಿಗಳಿಗಿಂತ ಇಪ್ಪತ್ತು ಪಟ್ಟು ಹೆಚ್ಚು ವಿದ್ಯಾಥರ್ಿಗಳು ಅವರಿಗೆ ಹೊರಗೆ ಇದ್ದರು. ಕಿರಂ ಮಾತು ಕೇಳಿಕೊಂಡು ಬೇಂದ್ರೆ ಓದುವುದಕ್ಕೆ ಹೊರಟರು, ಅವರ ಭಷಣಗಳಿಂದ ಪ್ರೇರೇಪಿತರಾಗಿ ಅಡಿಗರ ಓದಿಗೆ ಹೊರಟರು. ಲಂಕೇಶ್ ಅವರ ಕಾವ್ಯದ ಗುಹೆಯೊಳಗೆ ಸಾಗಲು ಕಿರಂ ಒಂದು ಹಿರಿ ದೊಂದಿಯಂತೆ ಕಾಣುತ್ತಿದ್ದರು. ಕಿರಂ ಹೊಸಬರ ನಾಟಕಗಳ ಪ್ರದರ್ಶನಕ್ಕೆ ಬರುತ್ತಿದ್ದರು, ಹೊಸಬರ ಸಂಕಲನ ಬಿಡುಗಡೆಗೆ ಬರುತ್ತಿದ್ದರು, ಹೊಸಬರು ಬರೆದರೆ ಆಸಕ್ತಿಯಿಂದ ಓದಿ ವಿಶ್ಲೇಷಿಸುತ್ತಿದ್ದರು. ತಿದ್ದುತ್ತಿದ್ದರು, ತೀಡುತ್ತಿದ್ದರು. ಎಷ್ಟೋ ಸಲ ಶಿಷ್ಯರ ಪ್ರೀತಿಗೆಂದು ಬಂದು, ನಾಟಕ ಪ್ರದರ್ಶನ ಚೆನ್ನಾಗಿಲ್ಲದಾಗ, ಅತ್ತ ಆ ಪ್ರಯೋಗವನ್ನು ಕಟು ವಿಮಶರ್ಿಸಲೂ ಆಗದೇ, ಇತ್ತ ಶಿಷ್ಯರ ಪ್ರಯತ್ನವನ್ನು ಮನಃಪೂರ್ವಕವಾಗಿ ಬಣ್ಣಿಸಲೂ ಆಗದೇ ಸಭ್ಯ ಗೊಂದಲದಲ್ಲೇ, ನಾಲ್ಕಾರು ಪ್ರಿತಿಯ ಮಾತುಗಳನ್ನು ವೇದಿಕೆಯ ಮೇಲೆ ಬಿತ್ತಿ, ವೇದಿಕೆ ಇಳಿಯುತ್ತಿದ್ದರು.
ಕಿರಂ ಸಾಹಿತ್ಯ ಲೋಕದ ಒಬ್ಬ ಸ್ಟಾರ್ ಆದರು, ಅಸಂಖ್ಯ ಅಭಿಮಾನಿಗಳನ್ನು ಗಳಿಸಿಕೊಂಡರು. ದಿನೇದಿನೇ ಸರಳವಾಗುತ್ತಾ ಹೋದರು, ಸುಲಭವಾಗುತ್ತಾ ತಟ್ಟಿದರು, ಕಾವ್ಯದ ದಾರಿಯ ಪ್ರಯಾಣವನ್ನು ಸುಗಮಗೊಳಿಸುತ್ತಾ ಸಾಗಿದರು. ಕ್ಲಿಷ್ಟ ಕಾವ್ಯಗಳು ಅವರ ದನಿಯಲ್ಲಿ ಸರಳವಾದವು, ಅರ್ಥ ಇನ್ನಷ್ಟು ಗಾಢವಾದವು, ಅಂತಃಕರಣ ಇನ್ನಷ್ಟು ತಟ್ಟುವಂಥಾದವು. ಕಾವ್ಯದ ಓದಿನ ಮಾರ್ಗವನ್ನು ಸುಗಮಗೊಳಿಸುವ ಮೇಷ್ಟ್ರಂತೆ, ಕಾವ್ಯವನ್ನು ಹಾಡಂತೆ ಹೇಳಿ ಅನಕ್ಷರನಿಗೂ ಮುಟ್ಟಿಸುವ ಗಮಕಿಯಂತೆ, ಯುಗ ಯುಗಾದಿಗೊಮ್ಮೆ ಗೋಚಾರ ಫಲವನ್ನು ಹೇಳಿ ಭರವಸೆ ಮೂಡಿಸುವ ಜ್ಯೋತಿಷಿಯಂತೆ ಕಿರಂ ಇದ್ದರು.
ಅಂಥ ಕಿರಂ ನಮ್ಮ ಪಾಲಿಗೆ ನಿಜಕ್ಕೂ ಇನ್ನಿಲ್ಲ. ಯಾಕೆಂದರೆ ಕಿರಂ ಅಂಥ ಅಗಾಧ ಪ್ರತಿಭೆಯನ್ನು ತನ್ನೊಳಗಿಟ್ಟುಕೊಂಡೂ ಬರೆಯಲಿಲ್ಲ. ಅವರ ಭಷಣಗಳನ್ನೊಂದು ತಕ್ಕಡಿಯಲ್ಲಿ, ಬರಹಗಳನ್ನೊಂದು ತಕ್ಕಡಿಯಲ್ಲಿ ಇಟ್ಟು ನೋಡಿದರೆ ಅಲ್ಲಿರುವ ತೂಕ ಭಷಣದ್ದೇ ಹೆಚ್ಚು. ಅದು ತೋಂಡಿ ಸಂಸ್ಕೃತಿ. ಅದು ಕಿಂದರಿಜೋಗಿಗಳಂತೆ, ಗೊರವರಂತೆ ಮನೆಮನೆಗಳಿಗೆ ಹಾಡುಗಳನ್ನು, ಸಂಸ್ಕೃತಿಗಳನ್ನು ತಂದುಕೊಡುವವರಂತೆ ಸಾಹಿತ್ಯವನ್ನು ತಂದುಕೊಟ್ಟರು. ಹೊಸ ಹುಡುಗರ ಸಂಕೋಚದ ಪ್ರಶ್ನೆಗಳಿಗೆ, ಪಂಡಿತರ ಸೋಲಿಸುವ ಸವಾಲಿಗೆ, ಅಧ್ಯಯನಾಥರ್ಿಯ ಪ್ರಾಮಾಣಿಕ ಗೋಜಲಿಗೆ ಕಿರಂ ಸಭೆಯಲ್ಲಿ ಉತ್ತರವಾದರು, ವೇದಿಕೆಯಲ್ಲಿ ಉತ್ತರವಾದರು, ಬಸ್ಸಲ್ಲಿ, ಸಿಗರೇಟು ಹೊಗೆಯ ಗೂಡಂಗಡಿ, ಛಾ ಹೊಟೇಲ್, ಚಿಕ್ಕ ಕೋಣೆ, ಬಾರ್, ಬೀದಿ, ಕ್ಲಾಸ್ರೂಂ, ಸೆಮಿನಾರ್ ಹಾಲ್ಗಳಲ್ಲಿ ಉತ್ತರವಾದರು. ಅಂಥ ಪ್ರಶ್ನೆಗಳಿಗೆ ಇನ್ನು ಮುಂದೆ ಇನ್ಯಾರ ಉತ್ತರವೂ ಉತ್ತರವೇ ಅಲ್ಲ ಎಂಬಂಥ ಉತ್ತರ ಆ ಅವಧೂತನ ಜೋಳಿಗೆಯಲ್ಲಿತ್ತು.

ಆದರೆ ಇಂಥ ಜಾದೂ ಜೋಳಿಗೆಯ ಸಾಹಿತ್ಯ ಜೋಗಯ್ಯನನ್ನು ಹೇಗೆ ನೆನಪು ಮಾಡಿಕೊಳ್ಳುವುದು?
ಚೆೆನ್ನಾಗಿ ಭಷಣ ಮಾಡುತ್ತಿದ್ದರು ಎಂದರೆ ಇನ್ನೊಬ್ಬ ಅಪ್ರತಿಮ ಭಷಣಗಾರರನ್ನು ತೋರಿಸಿ ಇಂಥವರು ಪಯರ್ಾಯವಾಗಬಹುದು ಎಂದು ಜನ ಹೇಳಿಬಿಡಬಹುದು. ಒಳ್ಳೆಯ ಚಿಂತಕ ಎಂದರೆ ಮತ್ತೊಬ್ಬ ಚಿಂತಕನನ್ನು ತೋರಿಸಿ, ಅವನಂತೆ ಎಂದು ಯಾರಾದರೂ ಸರಳೀಕರಿಸಬಹುದು. ಭಷಣಗಾರನಾದರೂ ಪಾಂಡಿತ್ಯಪ್ರದರ್ಶಕನಾಗದ, ಜ್ಞಾನಿಯಾದರೂ ಅಹಂಕಾರಿಯಾಗಿ ಕಾಣದ, ಮಾತಿನ ಮೋಡಿಯಲ್ಲಿ ಕವಿಯಾದರೂ ಬರಹದಲ್ಲಿ ಕವಿಯಾಗದ, ಮೇಷ್ಟ್ರಾದರೂ ಪಾಠವಷ್ಟನ್ನೇ ಮಾಡದ- ವಿಶಿಷ್ಟ ತಳಿಯ ಕಿರಂ ಅವರನ್ನು ಕಾಣದ ಹೊಸ ಜನರೇಷನ್ ಒಂದಕ್ಕೆ ಪರಿಚಯಿಸುವುದು ಕಷ್ಟ, ಅರ್ಥ ಮಾಡಿಸುವುದು ಕಷ್ಟ. ನಮ್ಮ ಜನರೇಷನ್ಗೆ ಕಿರಂ ಗೊತ್ತು, ಪುಣ್ಯವಂತರು ನಮಗೆ ಕಿರಂ ಅವರು ಗೊತ್ತು, ಅವರು ನಮ್ಮ ಪಕ್ಕ ಹಾದು ಹೋಗಿದ್ದಾರೆ, ಅವರು ನಮ್ಮ ಭುಜಕ್ಕೆ ತಾಗಿಕೊಂಡು ಸ್ಪರ್ಶಪುಣ್ಯ ದಯಪಾಲಿಸಿದ್ದಾರೆ, ಮಾತಾಡಿ ನಮ್ಮ ಕಿವಿಗಳಿಗೆ ಸ್ಪರ್ಶಭಗ್ಯ ಕರುಣಿಸಿದ್ದಾರೆ, ನಮ್ಮ ಕಣ್ಣುಗಳು ಅವರನ್ನು ಕಾಣುವ, ಆಸ್ವಾದಿಸುವ ಸ್ಪರ್ಶಯೋಗ ಕಲ್ಪಿಸಿದ್ದಾರೆ. ವಿಷಾದನೀಯ ವಿಷಯ ಏನೆಂದರೆ ಅದು ಒಂದು ದಾಖಲೆಯಾಗುವ, ಇನ್ನೊಂದು ನಾಲ್ಕು ಜನರೇಷನ್ಗೆ ಅಕ್ಷರದ ಮೂಲಕ ತಲುಪುವ ಜ್ಞಾನ, ಪ್ರತಿಭೆ ಆಗಲೇ ಇಲ್ಲ. ಅಂದರೆ ಕಿರಂ ಅವರು ತಮ್ಮ ಅತ್ಯಲ್ಪ ಬರಹ ಸಾಹಿತ್ಯದ ಮೂಲಕ ನಮ್ಮ ಮುಂದಿನ ಜನರೇಷನ್ಗೆ ಗೊತ್ತಾದರೆ ಅದರಿಂದ ಅಷ್ಟೇನೂ ಉಪಯೋಗ ಆಗಲಾರದು. ಯಾಕೆಂದರೆ ಅದು ಕಿರಂ ಅವರ ಇಪ್ಪತ್ತೈದು ಶೇಕಡ ಮಾತ್ರ. ಇನ್ನು ಎಪ್ಪತ್ತೈದು ಶೇ. ಕಿರಂ ನಮಗೆ ಅತ್ಯುತ್ತಮ ದಾರ್ಶನಿಕರಾಗಿ ಪರಿಚಿತರಾಗಿದ್ದರು.
ಈಗ ಕಿರಂ ಅವರನ್ನು ಮತ್ತೆ ಮತ್ತೆ ನಾವು ಪರಿಚಯಿಸಿಕೊಳ್ಳಬೇಕು, ಅವರ ೊಡನಾಟವನ್ನು ನೆನಪಿಸಿಕೊಳ್ಳಬೇಕು. ಕಿರಂ ಅವರ ಭಾಷಣಗಳು ೆಷ್ಟು ಧ್ವನಿ ಮುದ್ರಣಗೊಂಡಿವೆಯೋ ಅದೆಲ್ಲಾ ಪುಸ್ತಕ ರೂಪದಲ್ಲಿ ಹೊರಬರಬೇಕು. ಡಾ.ರಾಜ್ ಅವರ ಸಿನಿಮಾ ಹೊರತಾದ ಬುದಕು ದಾಖಲಾಗಿರುವುದೂ ಹಾಗೇ. ಈಗ ಡಾ.ರಾಜ್ ಅವರೆಂದರೆ ರೆಫರೆನ್ಸ್ ಗೆ ಅವರನ್ನು ಅಭ್ಯಸಿಸುವುದಕ್ಕೆ ಅನೇಕ ಗ್ರಂಥಗಳು, ಅಲೇಖಣಗಳು ಇವೆ. ಕನ್ನಡದ ಾಸಕ್ತರ ಕಣ್ಣನ್ನು, ಕನ್ನಡ ಸಾಹಿತ್ಯ- ಅದರಲ್ಲೂ ಮುಖ್ಯವಾಗಿ ಕನ್ನಡ ಕಾವ್ಯ-ದ ಕಣ್ಣನ್ನು ತೆರೆಸಿದ ಈ ಕಣ್ಣಪ್ಪನ ಬಗ್ಗೆ ನೂರಾರು ಲೇಖನಗಳು, ಪುಸ್ತಕಗಳು, ಅವರ ಆತ್ಮಚರಿತ್ರೆಗಳು ಬರಬೇಕು.
ಯಾರೇ ಸತ್ತರೂ ಅವರ ಸಾವಿನ ಕೆಲವು ತಿಂಗಳುಗಳಷ್ಟೇ ಅದರ ಸ್ಮರಣೆ ಇರುತ್ತದೆ. ಕ್ರಮೇಣ ಅದು ಅಳುವಿನ ಸದ್ದಂತೆ ಕ್ಷೀಣಿಸುತ್ತದೆ. ಕಿರಂನಂಥ ಸಾಧಕನ ವಿಷಯದಲ್ಲೂ ಹಾಗಾಗಬಾರದು. ಈಗ ಅವರ ನೆನಪುಗಳು ಹತ್ತಿರದ ಒಡನಾಟ ಇಲ್ಲದವರನ್ನೇ ಇಷ್ಟೊಂದು ಕಾಡುತ್ತಿರುವಾಗ ಪರಮಾಪ್ತನ ಮನಸ್ಸನ್ನು ಇನ್ನೆಷ್ಟು ಕಾಡಿಸಬೇಕು. ಈ ಕಾಡುವ ಹೊತ್ತಲ್ಲೇ ಏನಾದರೂ ಬರಹ ನೆನಪುಗಳು ಪುಸ್ತಕ ಲೋಕವನ್ನು ದಂಡಿದಂಡಿ ತುಂಬಬೇಕು. ಅಕ್ಷರವನ್ನು ಪ್ರೀತಿಸುವ ಜೀವಿಗೆ ಅದಕ್ಕಿಂತ ಇನ್ನೆಂಥ ಶ್ರದ್ಧಾಂಜಲಿ ಬೇಕು?
ಚಿತ್ರ ಎರವಲು: ಸುಶ್ರುತ ದೊಡ್ಡೇರಿ

Wednesday, June 16, 2010

ಹೊಸ ಬೆಳಕಿನ ... ಹೊಸ ಬಾಳನು ತಾ ಅತಿಥಿ!


ನಾವೀಗ ನಿಮ್ಮ ಬಳಗದ ಸದಸ್ಯರು.
ಕಳ್ಳಕುಳ್ಳ ಇನ್ನುಮುಂದೆ ಬ್ಲಾಗ್ ಸ್ಪಾಟ್ ನ ಅಡ್ರೆಸ್ ನಲ್ಲಿ ಸಿಗಲಿದ್ದೇವೆ. ಅಡ್ರಸ್ ಮಾತ್ರ ಬದಲಾಗಿದೆ. ನಮ್ಮ ಮಾತು, ಕತೆ, ಕವಿತೆಗಳೆಲ್ಲಾ ಅದೇ ಅಕ್ಕರೆಯೊಂದಿಗೆ ಪ್ರತ್ಯಕ್ಷವಾಗುತ್ತದೆ.
ನಿಮ್ಮ ಪ್ರತಿಕ್ರಿಯೆ, ಟೀಕೆ, ಟಿಪ್ಪಣಿ, ಕಾಳಜಿಗಳನ್ನೆಲ್ಲಾ ಈ ವೇದಿಕೆಗೆ ಟ್ರಾನ್ಸಫರ್ ಮಾಡಿ, ಅಷ್ಟೇ.

Friday, June 11, 2010

ಕನ್ನಡಿಯೊಳಗೆ ನಾನಿಲ್ಲ, ಮತ್ತ್ಯಾರು!

ಜಪಾನ್ ಸಾಹಿತ್ಯದ ಅತ್ಯಂತ ಪ್ರಮುಖ ಕವಯಿತ್ರಿ ರಿನ್ ಇಷಿಗಾಕಿ (Rin Ishigaki : 1920-2004). ಬ್ಯಾಂಕ್ ನಲ್ಲಿ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸುತ್ತಾ, ಶ್ರೇಷ್ಠ ಕವಿತೆಗಳಿಗೆ ಜನ್ಮನೀಡಿದ ಈಕೆ ಕಾರ್ಮಿಕ ಹೋರಾಟದಲ್ಲಿ ಸಕ್ರಿಯಳಾಗಿದ್ದವಳು. ನಾಲ್ಕು ಕವನ ಸಂಗ್ರಹಗಳನ್ನು ಹೊರತಂದು, ಪ್ರಬಂಧಗಾರ್ತಿಯಾಗಿಯೂ ಗುರುತಿಸುವಂಥ ಕೃತಿಗಳನ್ನು ಕೊಟ್ಟ ರಿನ್ 2004ರಲ್ಲಷ್ಟೇ ತೀರಿಕೊಂಡಳು. ಆಕೆಗೆ ಜಪಾನ್ ಸಾಹಿತ್ಯದ ಕೆಲವು ಮಹತ್ವದ ಪ್ರಶಸ್ತಿಗಳು ಸಂದಿವೆ. ಆಕೆಯ ‘Island’ ಕವಿತೆಯ ಭಾವಾನುವಾದ.


ದೊಡ್ಡ ಕನ್ನಡಿಯಲ್ಲಿ ನಿಂತಿದ್ದೇನೆ, ನಾನು;


ತುಂಬ ಒಂಟಿ ಅನ್ನಿಸುವ


ಸಣ್ಣ ದ್ವೀಪ,


ಎಲ್ಲರಿಂದ ಬೇರ್ಪಟ್ಟಂಥ ಒಂದು ರೂಪ.



ನನಗೆ ಗೊತ್ತು ಈ ದ್ವೀಪದ ಚರಿತ್ರೆ,


ಈ ದ್ವೀಪದ ಆಯಾಮ,


ಅದರ ಸೊಂಟ, ಜಘನಗಳ ಸುತ್ತಳತೆ,


ಕಾಲಕಾಲಕ್ಕೆ ತೊಟ್ಟ ಬಟ್ಟೆಬರೆ,


ಹಕ್ಕಿಯ ಹಾಡು,


ಚ್ರೈತ್ರದ ಪಾಡು,


ಹೂ ಪರಿಮಳದ ಜಾಡು.



ನನ್ನ ಮಟ್ಟಿಗೆ ಹೇಳುವುದಾದರೆ


ನಾನು ದ್ವೀಪದಲ್ಲಿ ನಿಂತಿರುವೆ,


ನಾನೇ ಉತ್ತಿದ್ದು,


ನಾನೇ ಬಿತ್ತಿದ್ದು,


ನಾನೇ ಬೆಳೆದು ಬೆಳಗಿದ್ದು ಇಲ್ಲಿ.


ಇದರ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಯಾರಿಗೂ,


ಒಂದು ಶಾಶ್ವತ ವಿಳಾಸ ಪಡೆಯಲಿಲ್ಲಿ


ಸಾಧ್ಯವಿಲ್ಲ ಎಂದಿಗೂ.



ಕನ್ನಡಿಯಲ್ಲಿರುವ ನಾನು


ದಿಟ್ಟಿಸುತ್ತಾ ನೋಡುತ್ತೇನೆ, ನನ್ನೇನ್ನೇ;


ಇಲ್ಲಿ ಕಾಣುವ,


ಅಲ್ಲೆಲ್ಲೋ ದೂರದ ಒಂದು ಸಣ್ಣ ದ್ವೀಪ.

Friday, May 7, 2010

ಅನ್ ಹ್ಯಾಪಿ ಮದರ್ಸ್ ಡೇ!



[caption id="attachment_310" align="aligncenter" width="500" caption="ಅಮ್ಮನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು"][/caption]

ಅಮ್ಮಂದಿರ ದಿನ ಅಂತ ಮೊನ್ನೆ ವೆಬ್ ಸೈಟ್ ಒಂದರಲ್ಲಿ ಬಾಲಿವುಡ್ ನ ಅಮ್ಮಂದಿರ ಇನ್ನೂ ಮಸುಕದ ಗ್ಲಾಮರ್ ಬಗ್ಗೆ ಫೋಟೋ ಸಹಿತ ಒಂದು ಸಾಲಿನ ಬರೆಹ ಇತ್ತು. ಅಮ್ಮಂದಿರ ದಿನಕ್ಕೆ ಮಾಧ್ಯಮಗಳೆಲ್ಲಾ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ಸಿದ್ಧವಾಗುತ್ತಿವೆ.




ಈ ಭಾನುವಾರ ಎಲ್ಲಾ ವ್ಯಾಪಾರ ಮಳಿಗೆ, ಎಲ್ಲಾ ಹೊಟೇಲ್, ಎಲ್ಲಾ ಮಾಲ್ ಗಳು ಶುಭಾಶಯಗಳಿಂದ, ಸಂಭ್ರಮಗಳಿಂದ ತುಂಬುತ್ತವೆ, ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿದ ಅಮ್ಮನೆಂಬ ಕೈಗಳಿಗೆ ಹೂಗೊಂಚಲಿನ ಶುಭಕಾಮನೆ. ಆದರೆ ಇಲ್ಲೊಂದೆರಡು ಫ್ಯಾಮಿಲಿಗಳಿಗೆ ಹ್ಯಾಗೆ ಅಮ್ಮಂದಿರ ದಿನದ ಶುಭಾಶಯ ಹೇಳೋದು ಅಂತ ಗೊತ್ತೇ ಆಗುತ್ತಿಲ್ಲ. ನಿಮಗೇನಾದರೂ ಹೇಳುವುದಕ್ಕೆ ಸಾಧ್ಯವಾದರೆ ಅದಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಸಲ್ಲುತ್ತದೆ.


1.

ಜನವರಿ 08, 2007

ಅಂದು ಸೋಮವಾರ. ಅನುರಾಧಾ ಹೆಸರಿನ ಆ ಅಮ್ಮ ಎಂದಿನಂತೆ ಗಡಿಬಿಡಿಯಲ್ಲೇ ಎದ್ದಳು. ಗಂಡನನ್ನು ಆಫೀಸಿಗೆ ರೆಡಿ ಮಾಡಿದಳು. ಗಂಡ ರೆಡಿ ಆಗುತ್ತಿದ್ದ ಹಾಗೇ ಮಗನನ್ನು ಶಾಲೆಗೆ ರೆಡಿ ಮಾಡಬೇಕಿತ್ತು. ಅದೂ ಎಂದಿನಂತೆ ನಿರಾತಂಕವಾಗಿ ಸಾಗಿತು. ಅವನು ಶಾಲೆ ಮುಗಿಸಿ ಬೇಗನೆ ಬಂದರೆ ಅವನಿಗೆ ಏನಾದರೂ ಮಾಡಿಡಬೇಕು ಅಂತ ಅದನ್ನೂ ಮಾಡಿದಳು. ಗಂಡ ಬೈದಿರಬಹುದು, ತಿಂಡಿಗೆ ಉಪ್ಪು ಜಾಸ್ತಿ, ಕಾಫಿಗೆ ಸಕ್ಕರೆ ಕಮ್ಮಿ ಅನ್ನುವುದೆಲ್ಲಾ ಅದಕ್ಕೆ ಕಾರಣ ಇರಲೂಬಹುದು. ಆದರೆ ಮಗ ಮಾತ್ರ ಅಮ್ಮನ ಗಡಿಬಿಡಿಯನ್ನು ಪ್ರೀತಿ, ಅಭಿಮಾನ ಮತ್ತು ಕನಿಕರದಿಂದ ನೋಡಿರಬಹುದು.

[caption id="attachment_311" align="alignleft" width="225" caption="ಅನುರಾಧಾ ಶರ್ಮ"][/caption]

ಗಂಡ, ಮಗನನ್ನು ಅವರವರ ಕೆಲಸಕ್ಕೆ ಕಳಿಸಿಕೊಟ್ಟು ತನ್ನ ಕೆಲಸಕ್ಕಾಗಿ ರೆಡಿ ಆದಳು. ಓಡುತ್ತೋಡುತ್ತಾ ಬ್ಯಾಂಕ್ ಮೆಟ್ಟಿಲೇರಿದಳು. ಕ್ಯಾಶ್ ವಿಡ್ರಾ ಮಾಡಿಕೊಂಡಳು. ಉಳಕೊಂಡಿರುವ ತ್ಯಾಗರಾಜ ನಗರಿಂದ ಅಲಸೂರಿಗೆ ಹೋಗಬೇಕಿತ್ತು. ಅಲ್ಲಿ ತಾನು ಮಾಡುತ್ತಿರುವ ಅರೆಕಾಲಿಕ ಎಲ್ಲೈಸಿ ಏಜೆಂಟ್ ಉದ್ಯೋಗದ ಕೆಲಸಗಳೆಲ್ಲಾ ಬಾಕಿ ಇದೆ. ಬ್ಯಾಂಕ್ ನಲ್ಲಿ ಸಿಕ್ಕ ಒಂದೆರಡು ಪರಿಚಿತ ಮುಖವನ್ನೂ ನಗು ಹೊರತುಪಡಿಸಿ ಉಳಿದ ಯಾವ ಮಾತುಗಳಲ್ಲೂ ಭೇಟಿ ಮಾಡುವುದಕ್ಕೆ ವೇಳೆ ಇರಲಿಲ್ಲ.

ಅಷ್ಟರಲ್ಲಿ ಮೊಪೆಡ್ ಏರಿ ಆಗಿತ್ತು. ಮೊಪೆಡ್ ಸಾಗುತ್ತಿತ್ತು. ಬಹುಶಃ ಯಾರದೋ ಪಾಲಿಸಿ ಮೆಚೂರ್ ಆಗಿದ್ದು, ಯಾರದೋ ಹೊಸ ಪಾಲಿಸಿಗಾಗಿ ಅರ್ಜಿ ತುಂಬಿಸುವ ಕೆಲಸಗಳೆಲ್ಲಾ ಅವಳ ತಲೆಯೊಳಗೆ ತುಂಬಿಕೊಂಡಿದ್ದಾಗ ಅವಳ ಮೊಪೆಡ್ ಎಂಜಿ ರಸ್ತೆಯ ಸಿಗ್ನಲ್ ಒಂದರ ಎದುರು ನಿಂತಿತ್ತು, ಮಣಿಪಾಲ್ ಸೆಂಟರ್ ಪಕ್ಕ ಹೊರಳಿ ಹೋದರೆ ಸಿಗದೇ ಇರುವುದಕ್ಕೆ ಅಲಸೂರು ಯಾವ ಮಹಾ ದೂರವೂ ಅಲ್ಲ.

...05, 04, 03, 02, 01, 00

Sunday, April 18, 2010

ವಿಧಿವಶವಾಯಿತೇ ಪ್ರಾಣ ಹಾ!

[caption id="attachment_305" align="aligncenter" width="300" caption="(ಪದ್ಯ ಕೃಪೆ: ಸಂಚಯ ಪತ್ರಿಕೆ, ಚಿತ್ರಗಳು: clker.com ಮತ್ತು ಕೆಂಡಸಂಪಿಗೆ)"][/caption]

ಹೊಸ ಬೆಳಗಿನ ಕವಿ, ಕತೆಗಾರ ಎನ್ ಕೆ ಹನುಮಂತಯ್ಯ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಶನಿವಾರ ಸಂಜೆ ಮತ್ತು ತೀರಿಕೊಂಡ ವಿಷಯ ಮರುದಿನ ಬೆಳಿಗ್ಗೆ ಗೊತ್ತಾದಾಗ ಯಾಕೋ ಬೇಸರದ ಮಂಜು ಇಡೀ ದಿನ ಕವಿದುಕೊಂಡೇ ಇತ್ತು. ಹಾಗಂತ ಕವಿತೆಗಳ ಹೊರತಾಗಿ ಯಾವತ್ತೂ ಅವರನ್ನು ಭೇಟಿಯಾಗಿಲ್ಲ, ಫೋನ್ ನಲ್ಲೂ ಸಂಪರ್ಕಿಸುವ ಪ್ರಮೇಯ ಬಂದಿರಲಿಲ್ಲ. ಆದರೆ ವಿಶೇಷವಾಗಿ ಅವರ ಕವಿತೆಗಳ ಓದು ನಮ್ಮ ನಿಮ್ಮನ್ನು ವಿವಶರಾಗಿಸುತ್ತಿತ್ತು, ನಮ್ಮ ನೋವುಗಳು, ಸಣ್ಣ ಸಣ್ಣ ನಲಿವುಗಳು ಅವರ ಕವಿತೆಗಳಲ್ಲಿ ಸಶಕ್ತವಾಗಿ ಮೂಡುತ್ತಿದ್ದವು.

ಕವಿ ಎನ್ನುವ ಟ್ಯಾಗ್ ಗೂ ಮೀರಿ ಎನ್ ಕೆ ಹನುಮಂತಯ್ಯ ಎಂಬ ಒಬ್ಬ ವ್ಯಕ್ತಿಯ ಸಾವು ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಇತ್ತೀಚೆಗೆ ಕೇಳಿಬಂದ ಸಣ್ಣವಯಸ್ಸಿವರ ಸಾವಿನ ಸುದ್ದಿಗೆ ಇದು ಮೂರನೇ ಸೇರ್ಪಡೆ. ಮೊದಲು ಕೇಳಿದ ಅಂಥ ಸಾವು ಮಲೆನಾಡ ಕಡೆಯ ಜನಪ್ರಿಯ ಗಾಯಕ, ಪ್ರತಿಭಾವಂತ ಸುಭಾಷ್ ಹಾರೆಗೊಪ್ಪ. ಮೂವತ್ತೈದು ಮುಟ್ಟಿದ್ದ ಆ ಗಾಯಕ ಒಂದು ಬೆಳಿಗ್ಗೆ ಇದ್ದಕ್ಕಿದ್ದಂತೇ ತೀರಿಕೊಂಡ. ಪುಟ್ಟ ಮಗು ಮತ್ತು ಮುದ್ದಿನ ಮಡದಿಯರನ್ನು ಹಿಂದೆ ಬಿಟ್ಟು ಸಾವಿನ ಮನೆಗೆ ತೆರಳಿದ ಸುಭಾಷ್, ಕುಡಿತಕ್ಕೆ ಬಲಿಯಾದ ಎಂದು ಮಲೆನಾಡು ಮಾತಾಡಿತು, ಅದು ಆತ್ಮಹತ್ಯೆ ಎಂಬ ಅನುಮಾನದ ಮಾತೂ ತೂರಿ ಬಂತು. ಏನೇ ಮಾತಾದರೂ ಅದರೊಳಗೆಲ್ಲಾ ಇರುವ ಸಾಮಾನ್ಯ ಸಂಗತಿ ಒಂದೇ, ಸಾವು.

ಇನ್ನೊಂದು ಸಾವು ಖ್ಯಾತ ಚಿತ್ರ ಸಾಹಿತಿ, ಚಿತ್ರ ಕತೆಗಾರ ಬಿ. ಎ. ಮಧು ಎನ್ನುವ ಸಜ್ಜನರ ಪುತ್ರನ ಸಾವು. ಇನ್ನೂ ಇಪ್ಪತ್ತು ವರ್ಷದ ಆ ಹುಡುಗ ತೀರಿಕೊಂಡದ್ದು ಹೇಗೆ ಎಂಬ ಪ್ರಶ್ನೆಗೆ ಅದು ಸಹಜ ಸಾವಲ್ಲ, ಅಸಹಜ ಸಾವು ಎಂದಷ್ಟೇ ಹೇಳಬಹುದು. ಆದರೆ ಇದೀಗ ಮೈಸೂರಿನ ಮಧು ಮನೆಯಲ್ಲಿ ಸಾವಿನ ಸೂತಕ, ಇರುವ ಒಬ್ಬ ಮಗನನ್ನು ಕಳೆದುಕೊಂಡವನ ದುಃಖಕ್ಕೆ ಎಂಥ ಸಾಂತ್ವನವೂ ಸಾಲದೇ.

ಆ ಎರಡು ಸಾವಿಗೆ ಇನ್ನೊಂದು ದುಃಖಕರ, ಆಘಾತಕಾರಿ ಸೇರ್ಪಡೆ ಎಂದರೆ ಹನುಮಂತಯ್ಯ.

ಇಪ್ಪತ್ತರ ಹರೆಯದ ಸಾವು ಉಂಟುಮಾಡುವ, ಉಳಿಸಿ ಹೋಗುವ ನೋವು ಒಂದು ಥರ ಆದರೆ ಉಳಿದೆರಡು ಸಾವು ಉಂಟುಮಾಡುವ ಪರಿಣಾಮ ಇನ್ನೊಂದು ಥರ. ಮೂವತ್ತರ ಆಚೀಚೆಯ ವಯಸ್ಸು ಅಂದರೆ ಅವರನ್ನು ಸಂಸಾರವೊಂದು ಅವಲಂಬಿಸಿರುತ್ತದೆ. ಆ ಸಂಸಾರದ ಕುಡಿ, ಕವಲುಗಳು ಆಗಷ್ಟೇ ಒಡೆಯುವುದಕ್ಕೆ ಪ್ರಾರಂಭಿಸಿರುತ್ತವೆ. ಅವರನ್ನು ಹುಷಾರಾಗಿ ದಡ ಸೇರಿಸಬೇಕಾದ ಕುಟುಂಬವೊಂದರ ನಾವಿಕ ಹೀಗೆ ಸಾಗರ ಮಧ್ಯದಲ್ಲೇ ಅವಲಂಬಿತರನ್ನು ಬಿಟ್ಟು ಹೋದರೆ ಅವರ ಗತಿ ಏನು? ಎಲ್ಲಾ ಸಾವುಗಳಿಗೂ ಒಂದೇ ಥರದ ಪರಿಣಾಮ ಬೀರುವ ಸಾಮರ್ಥ್ಯ ಇರುವುದಿಲ್ಲವಾದರೂ ಇಂಥ ವಯಸ್ಸಿನ ಸಾವು ಉಂಟುಮಾಡುವ ಸಾವು ಘೋರ ನರಕ.

ಹನುಮಂತಯ್ಯ, ಸುಭಾಷ್ ಹಾರೆಗೊಪ್ಪ ಮತ್ತು ಹೆಸರು ತಿಳಿಯದ ಆ ಹುಡುಗನಿಗೆ ನಮ್ಮ ಅಕ್ಷರ ಶ್ರದ್ಧಾಂಜಲಿ. ಆ ಕುಟುಂಬಗಳಿಗೆಲ್ಲಾ ಸಾವು ಭರಿಸುವ ಶಕ್ತಿ ಬರಲಿ.

[caption id="attachment_306" align="alignleft" width="202" caption="ತಪ್ಪಿ ಹೋಯಿತಲ್ಲೇ ಹಕ್ಕಿ"][/caption]

ತಣ್ಣಗೆ ಮತ್ತು ಅಷ್ಟೇ ಮೊನಚಾಗಿ ಬರೆಯುತ್ತಿದ್ದ ಎನ್ಕೆಎಚ್, ಅವರ ಕವನ ಸಂಕಲನಗಳಿಂದ, ಹತ್ತಿರದ ವಲಯದವರ ನೆನಪುಗಳಿಂದ, ಆಗಲೇ ಅರಳಿಸಿದ ಘಮಘಮ ಪ್ರತಿಭೆಯಿಂದ, ಹಾಯಾದ ಒಡನಾಟ ಮತ್ತು ಅವರ ಬಗ್ಗೆ ಇದ್ದ ಗೌರವ, ಪ್ರೀತಿಗಳಿಂದ ಹನುಮಂತಯ್ಯ ಯಾವತ್ತೂ ಬದುಕಿರುತ್ತಾರೆ ಪತ್ರಿಕೆಯಲ್ಲಿ ಓದಿದ್ದ, ಮೊನ್ನೆ ಮೊನ್ನೆ ‘ಸಂಚಯ’ ಸಂಚಿಕೆಯಲ್ಲಿ ಪ್ರಕಟವಾಗಿ ಮತ್ತೆ ಓದಲು ಅವಕಾಶವಾಗಿದ್ದ ‘ಹಕ್ಕಿ ಮತ್ತು ಬಲೆ’ ಎಂಬ ಹನುಮಂತಯ್ಯ ಕವಿತೆ ಇಲ್ಲಿ ತುಂಬ ನೆನಪಾಗುತ್ತಿದೆ. ಅದನ್ನು ಪ್ರಕಟಿಸಿ ಹನುಮಂತಯ್ಯ ಅವರನ್ನು ನೆನಯುವುದು ತರ.

ಹಕ್ಕಿ ಮತ್ತು ಬಲೆ

ಹಗಲು ಇರುಳಿನ ಬಲೆಯೊಳಗೆ

ಹಕ್ಕಿ ಸಿಲುಕಿದೆ

ಪಕ್ಕದಲ್ಲೇ ಬೇಟೆಗಾರರ ಬಲೆ

ಉರಿಯುತ್ತಿದೆ.

ಈಗ

ಹಾಡಲೇಬೇಕು

ಪುಟ್ಟ ಕೊಕ್ಕಿನಲ್ಲಿ

ಬೇಟೆಗಾರರು ನಿದ್ರಿಸುವಂತೆ

ಈಗ

ಈ ಪುಟ್ಟ ಕೊಕ್ಕನ್ನೇ

ಖಡ್ಗವಾಗಿಸಬೇಕು

ಬಲೆ ಹರಿದು ಬಯಲ ಸೇರುವಂತೆ.

Tuesday, March 30, 2010

ಕವಿತೆ ಕೇಳಿದೆ, ಧೂಳು ಹಿಡಿದು ಎಷ್ಟು ದಿನಗಳಾದವು?

ಲೇಖನ, ಕತೆ, ವಿಮರ್ಶೆ, ವಾದ, ವಿವಾದ, ಪ್ರಮಾದ, ವಿಷಾದ ಪತ್ರಗಳ ರಾಶಿಯ ಮಧ್ಯೆ ಮುಗ್ಧವಾಗಿ ಸಿಗುವುದು ಹಾಗೂ ಹಾಯಾಗಿ ನಗುವುದು ಎಂದರೆ ಅದು ಕವಿತೆ ಮಾತ್ರ. ಅಂಥ ಹೊಸ ಕವಿತೆ, ನಿಮಗಾಗಿ...


 


ನಾನು ನಾನಾಗಿಯೇ

ಈ ಬೀದಿಗಳಲ್ಲಿ ಓಡಾಡುವುದಿಲ್ಲ.

ನನ್ನ ಕಾಲ್ಗಳು ಒಂದೆಡೆ,

ನನ್ನ ಭಾವನೆ ಒಂದೆಡೆ

ನನ್ನ ಬುದ್ಧಿ ಒಂದು ಕಡೆ,

ನನ್ನ ಸಂಬಂಧ, ನನ್ನ ಪ್ರೀತಿ

 ನನ್ನ ದ್ವೇಷ, ನನ್ನ ರೋಷ,

ನನ್ನ ಅರ್ಧ ಕನಸು,

ನನ್ನ ಪಾಪಪ್ರಜ್ಞೆ ಒಂದೊಂದು ಬೀದಿಗಳಲ್ಲಿ

ರಾತ್ರೋರಾತ್ರಿ

ಅಥವಾ

ಹಾಡ ಹಗಲು ತಿರುಗುತ್ತಿರುತ್ತವೆ.

ನೀವು ಹೇಳುತ್ತೀರಿ: ನೋಡಲ್ಲಿ

ಅವನೊಬ್ಬನೇ ಹೋಗುತ್ತಿದ್ದಾನೆ

ಅಥವಾ

ಅರೆ, ಅವನು ಯಾರ ಜೋಡಿನೋ ಹೋಗ್ತಾ ಇದಾನೆ?

ಪ್ಯಾಂಟ್ ಜೇಬಲ್ಲಿ ಕೀಲಿಕೈ,

ಷರ್ಟ್ ಜೇಬಲ್ಲಿ ಪೆನ್ನು, ಪಾಸು,

ದೇಹದ ಸಕಲ ಸ್ಥಳಗಳಲ್ಲಿ ನಮ್ಮ ಅಸ್ತಿತ್ವದ ದಾಖಲೆ,

ಪತ್ರಗಳೊಡನೆ ಉಣ್ಣುವ, ಉಸುರುವ,

ಚೀರುವ, ಕಾರುವ, ನಗುವ,

ಸುಳ್ಳು, ಸತ್ಯಗಳ ಗೊತ್ತಾಗದಂತೆ

ಮಾತುಗಳ ಗ್ಲಾಸ್ ನಲ್ಲಿಟ್ಟು

ಮಿಶ್ರಣ ಮಾಡಿ ಕುಡಿವ, ಕುಡಿಸುವ

ನಮ್ಮನ್ನು ನೋಡಿ ನೀವ್ಯಾರಿಗೋ ಪರಿಚಯಿಸುತ್ತೀರಿ:

ನೋಡಿ, ಇವನು ಒಳ್ಳೆ ಹುಡುಗ,

ಒಳ್ಳೆ ಕಂಪನಿಯಲ್ಲಿದ್ದಾನೆ, ಕೈ ತುಂಬ ಸಂಬಳ.

 ಬಾಗಿಲು, ಕಿಟಕಿ, ಗೋಡೆ,

ಸೂರು, ಡೋರ್ ಲಾಕ್, ಗ್ರಿಲ್,

ಕರ್ಟನ್, ಸರಳು, ಅಡುಗೆ ಮನೆ ಹೊಗೆ ನಳಿಕೆ,

ಪೀಪ್ ಹೋಲ್, ಗೇಟುಗಳುಂಟು ಮನೆಗಳಿಗೆ,

ಅದಕ್ಕೇ ಈ ಜಗತ್ತಲ್ಲಿ ನಾನು ಒಳ್ಳೆಯವ,

ಅವರು ಉತ್ತಮರು, ಇವರು ದೇವರಂಥವರು,

ಮತ್ತವನು ಸಜ್ಜನ, ಸನ್ನಡತೆಯ ಸುಕುಮಾರ,

ಸುಸಂಸ್ಕೃತ, ಮುಗ್ಧ ನಗು, ವ್ಯಕ್ತಿತ್ವ ಸಾದಾಸೀದ,

ನೇರ ನಡೆನುಡಿಯ ಪ್ರೀತಿಪಾತ್ರ,

ಸನ್ಮಿತ್ರ.

ಓಟಲ್ ಲಿಸ್ಟ್, ಟೆಲಿಫೋನ್ ಡೈರೆಕ್ಟರ್

ತೆಗೆದರೆ ತಲೆ ತಿರುಗುತ್ತದೆ,

ಎಲ್ಲಾ ಹೆಸರುಗಳೂ ಅಂಗಿ, ಚೆಡ್ಡಿ ತೆಗೆದಂತೆ

ಬೆತ್ತಲಾಗಿ,

ಎಲ್ಲವನ್ನೂ ಒತ್ತೆಯಿಟ್ಟಂತೆ

ಕತ್ತಲಾಗಿ

ಒಂದಾದ ಮೇಲೆ ಒಂದು ಬರುತ್ತಾ ಹೋಗುತ್ತವೆ

ಅಕಾರಾದಿಯಾಗಿ.

ಟೇಬಲ್ ಮೇಲೆ ಅಕ್ಷಾಂಶ ರೇಖಾಂಶದ

ಭೂಗೋಳ ಸುತ್ತುತ್ತದೆ,

ಗೋಡೆಯಲ್ಲಿ ಅರಬ್ಬೀಸಮುದ್ರ, ಪೆಸಿಫಿಕ್ ಸಾಗರದ

ಭೂಪಟ ಗಾಳಿಗೆ ಹಾರುತ್ತಿದೆ,

ಅಪ್ಪ, ಅಜ್ಜ, ಮುತ್ತಜ್ಜನ ಫೋಟೋಗಳ

ಮೇಲೆಲ್ಲಾ ಧೂಳು ಹಿಡಿದು ಎಷ್ಟು ದಿನಗಳಾದವು?

Tuesday, March 16, 2010

ಅರ್ಧಕ್ಕೇ ಎದ್ದು ಬಂದಿರಾ, ಕತೆಯ ಒಳಗಿಂದ?

ಕಳ್ಳ ಕುಳ್ಳ ಮತ್ತು ಈ ಬ್ಲಾಗರ್ ಗಳ ಕಳ್ಳುಬಳ್ಳಿ ಸಂಬಂಧ ಆಗಾಗ ತಪ್ಪುತ್ತದೆ, ಆಗಾಗ ಅಪ್ಪುತ್ತದೆ. ಅನೇಕ ಅಡೆತಡೆಗಳ ಮಧ್ಯೆಯೂ ಮತ್ತೆ ಬರೆಯುವ ಆಸೆ, ಉತ್ಸಾಹ, ಪ್ರೀತಿ ಕಾಡುತ್ತಲೇ ಇದೆ. ಸದ್ಯ ‘ಸುವರ್ಣ ನ್ಯೂಸ್’ ಚಾನೆಲ್ ನಲ್ಲಿ ಕೆಲಸದಲ್ಲಿರುವ ನಾವಿಬ್ಬರು, ಮತ್ತೆ ಏನಾದರೂ ಬರೆಯುವ ಆಸೆಯೊಂದಿಗೆ ಮರಳಿದ್ದೇವೆ. ಇತ್ತೀಚೆಗೆ ಕಾಡಿದ, ಕೆಣಕಿದ ಒಂದಿಷ್ಟು ಸಂಗತಿಗಳ ಬರೆವಣಿಗೆಯ ಫಲ, ಈ ಮೊದಲ ಪೋಸ್ಟ್. ಮುಂದೆ ನಿಮ್ಮ ಜೊತಂ ಕವಿತೆ, ಕತೆಗಳನ್ನೆಲ್ಲಾ ಹಂಚಿಕೊಳ್ಳಿಕ್ಕಿದೆ. ನಾವು ಮತ್ತೆ ಫೀಲ್ಡಿಗಿಳಿದಿದ್ದೇವೆ. ಇನ್ನು ನಿರಂತರ ಆಡುತ್ತೇವೆ. ರನ್, ರನ್ ಆಂಡ್ ರನ್ ಫಾರ್ ನಾಟ್ ಔಟ್!



1.

ಅಲ್ಲಿ ಇಡೀ ಗೋಕುಲವೇ ನೆರೆದಿದೆ. ಕೃಷ್ಣನ ಕೊಳಲನ್ನು ಆಲಿಸಿ ಮುಪ್ಪಿನ ಕೀಲುಗಳೂ, ದವಡೆಯ ಜೋಲುಗಳೂ ಉತ್ಸಾಹಗೊಂಡಿವೆ. ಮಗ್ಗುಲ ಹಸುಗೂಸ ಮರೆತ, ಪಕ್ಕದ ಗಂಡನ್ನ ತೊರೆದ ಗೋಪಿಕೆಯರೆಲ್ಲಾ ಕೃಷ್ಣನಿಗಾಗಿ ಹೊರಟು ಬಂದಿದ್ದಾರೆ. ಕೃಷ್ಣ ಮಥುರೆಗೆ ಹೋಗುವುದಕ್ಕೆ ಮುನ್ನ ಅವನನ್ನೊಮ್ಮೆ ಕಣ್ತುಂಬ ನೋಡತೊಡಗಿದ್ದಾರೆ. ಸಭೆಯ ಗೋಪಿಕೆಯರ ಮನಸ್ಸೂ ಆ ಕೃಷ್ಣನ ಪ್ರೀತಿಗೆ ಒಳಗೊಳಗೇ ಕೈಚಾಚುತ್ತದೆ, ಅವನ ಭಕ್ತಾನುಕಂಪೆಗೆ ಜೋಂಪಿನಂತೆ ಪ್ರತಿಕ್ರಿಯಿಸುತ್ತಿದೆ. ಆದರೆ ಆ ಗೋಕುಲದ,ಆ ಬೃಂದಾವನದ ಕೃಷ್ಣನನ್ನು ಕೂಡುವುದಕ್ಕೆ ಐಹಿಕವಾದ ಅಡ್ಡಿಗಳಿವೆ ಸಾಕಷ್ಟು. ಆ ಪಾರಮಾರ್ಥಿಕದ ಪ್ರೀತಿಗೆ ಸೋತು ಓಡಿಹೋಗುವುದಕ್ಕೆ ನಮ್ಮ ಪ್ರಾಪಂಚಿಕ ಅಡಚಣೆಗಳು ತಡೆಯುತ್ತಿವೆ. ಗೋಕುಲದ ಸುಖದಲ್ಲಿ ಮೈಮರೆತ ಅಂಥ ಜಗನ್ನಿಯಾಮಕ ಕೃಷ್ಣನನ್ನೇ ಮಧುರೆಯ ಬಿಲ್ಲಹಬ್ಬ ನೆಪವಾಗಿ ಕರೆಯಿತು, ನಮ್ಮ ಮನೆ, ಮಠ, ಮಗು, ಮೊಬೈಲು, ಸೀರಿಯಲ್ಲು ಇತ್ಯಾದಿ ಸಕಲ ಆಕರ್ಷಣೆಗಳು ಕೈ ಹಿಡಿದೆಳೆಯವೇ, ಚಕ್ಕಳಮಕ್ಕಳ ಕುಳಿತ ನಮ್ಮೀ ಆಸಕ್ತಿಯನ್ನು ವಿಚಲಿತಗೊಳಿಸವೇ?

ನಾವು ಹೊರಡುತ್ತೇವೆ, ಅರ್ಧಕ್ಕೇ. ತನ್ಮಯವಾಗಿ ಕೂತ ದೇಹಗಳ, ಏಕಾಗ್ರ ಮನಸ್ಸುಗಳ ಸಂದಣಿಯಿಂದ ಒಂದೊಂದೇ ದೇಹಗಳು, ಮನಸ್ಸುಗಳು, ಅರೆ ಮನಸ್ಸುಗಳು ಎದ್ದು ಹೋರಡುತ್ತವೆ. ಒಳ್ಳೆಯ ನಾಟಕ, ಒಳ್ಳೆಯ ಸಂಗೀತ ಕಚೇರಿ, ಒಳ್ಳೆಯ ಸಿನಿಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಭೆ, ಪುಸ್ತಕ ಬಿಡುಗಡೆ, ಉಪನ್ಯಾಸಗಳಿಂದ ಹೀಗೆ ಕಳಚಿಕೊಳ್ಳುವ ಕ್ರಿಯೆ, ದೇಹದಿಂದ ಪ್ರಾಣ ಕಳಚಿಕೊಂಡಷ್ಟೇ ದುಃಖಕರ, ವಿಷಾದಕರ. ಆದರೂ ನಾವು ಚಿಂತಿಸುತ್ತೇವೆ, ಅರ್ಧಕ್ಕೆ ಹೋಗುವುದು ಅವರವರ ಅರಸಿಕತೆಯ ದ್ಯೋತಕವೇ? ಮುಗಿದ ಮೇಲೆ ಹೋದರಾಗದೇ ಎಂದು ನಾವು ನೀವು ವಾದಿಸಿದರೆ ಮುಗಿಯುವ ಹೊತ್ತಿಗೆ ಆ ಜನಗಳಿಗೆ ಒಂದು ಮುಖ್ಯ ಕೆಲಸ ತಪ್ಪಬಹುದು. ಮನೆಗೆ ಹೋಗುವುದಕ್ಕೆ ಬಸ್ಸು, ಸರಿಯಾದ ಸಮಯಕ್ಕೆ ಹೋಗಬೇಕಾದಲ್ಲಿಗೆ ಹೋಗದಿದ್ದರೆ ಊಟ, ವಸತಿಗಳೆಲ್ಲಾ ತಪ್ಪಬಹುದು. ಇದೊಂದೇ ಕಾರಣಕ್ಕಾಗಿ ಅರಸಿಕತೆಯ ಪಟ್ಟ ಕಟ್ಟಬಾರದು, ಪಾಪ ಪಾಪ.

ಯಾಕೋ ಕಾಡುವುದಕ್ಕಾಗಿಯೇ ನಮಗೆ ಈ ಜಗತ್ತು ಒಂದಿಷ್ಟನ್ನ ಅರ್ಧವೇ ಉಳಿಸಿ ಹೋಗಿರುತ್ತದೆ. ಅರ್ಧಕ್ಕೇ ಹೊರಟು ಹೋಗುವುದರಲ್ಲಿ ಒಂದು ಕಲಾತ್ಮಕ ಅಪಚಾರ ಇದೆ. ನಾವು ನೋಡಿದಷ್ಟನ್ನೇ ಮನಸ್ಸಲ್ಲಿ ಮೆಲುಕು ಹಾಕುವುದಕ್ಕೆ ಪ್ರಾರಂಭ ಮಾಡುತ್ತೇವೆ. ನೋಡಿದ್ದಷ್ಟನ್ನೇ ಎಂದರೆ ಇನ್ನೂ ಇದೆ ಎಂದು ಗೊತ್ತಿರುವ, ಆದರೆ ಮುಂದೇನೆಂದು ಗೊತ್ತಿರದ ಸಂಗತಿಯನ್ನು. ಮನೆಗೆ ಹೋಗುವವರೆಗೂ ಆ ಒಂದು ಪ್ರಸಂಗ ನಮ್ಮ ಮನಸ್ಸಲ್ಲೇ ಕೊರೆಯತೊಡಗುತ್ತದೆ. ಯಾವುದೋ ಎಸ್ಸೆಮ್ಮೆಸ್ ಓದಿ ಮುಗಿದ ನಂತರವೂ, ಊಟ ಮಾಡಿದ ನಂತರವೂ, ಕಾರ್ಯಕ್ರಮದಿಂದ ತೆರಳಿ, ನಕ್ಕು, ಯಾವುದೋ ಸೀರಿಯಲ್ ನೋಡಿ, ಕಾಮಿಡಿ ದೃಶ್ಯಕ್ಕೆ ನಕ್ಕು ಮಲಗಿ, ನಿದ್ದೆ ತಿಳಿದು ಎದ್ದ ಮೇಲೂ ಆ ಕಾರ್ಯಕ್ರಮ ಮರು ಪ್ರಸಾರವಾಗುತ್ತಲೇ ಇರುತ್ತದೆ ಅನವರತ.

ಪ್ರತಿಯೊಬ್ಬರ ಬಾಲ್ಯದಲ್ಲೂ ಒಂದೊಂದು ಅರ್ಧವೇ ನೋಡಿದ ಕಲಾ ಪ್ರಕಾರಗಳಿವೆ. ಟೀವಿಯಲ್ಲಿ ಪ್ರಸಾರವಾಗುವ ಸಿನಿಮಾಗಳೆಲ್ಲಾ ಕರೆಂಟು ಕೈಕೊಟ್ಟ ಕಾರಣಕ್ಕಾಗಿ ಅರ್ಧ ಮಾತ್ರ ಗೊತ್ತಾಗಿದ್ದೆಷ್ಟೋ ಇವೆ. ಬಹಳ ಹಿಂದೆ ದೂರದರ್ಶನವೊಂದೇ ಮನರಂಜನೆಯ ಮಾಧ್ಯಮ ಆಗಿದ್ದಾಗ ದೂರದರ್ಶನದಲ್ಲೇ ಕರೆಂಟು ಹೋಗಿ, ಸಿನಿಮಾ ಪ್ರಸಾರವೇ ರದ್ದಾದ ಪ್ರಸಂಗಗಳಿವೆ. ನಿದ್ದೆಗಣ್ಣಲ್ಲೇ ಕಾಣುತ್ತಾ ಕುಳಿತ ಯಕ್ಷಗಾನ ಪ್ರಸಂಗದಿಂದ ಅಪ್ಪ ಬಲತ್ಕಾರದಿಂದ ಎಬ್ಬಿಸಿಕೊಂಡು ಬಂದು, ಹಾಸಿಗೆಗೆ ಹಾಕಿದ ಕಾರಣಕ್ಕಾಗಿ ಅಥವಾ ತನಗೇ ಗಾಢ ನಿದ್ದೆ ಹತ್ತಿ ಯಕ್ಷಗಾನ ಪ್ರಸಂಗವನ್ನು ಉಳಿದರ್ಧ ಮಿಸ್ ಮಾಡಿಕೊಂಡ ಹುಡುಗರು ಮಲೆನಾಡಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಸಂಗೀತ ಕಚೇರಿಗಳಲ್ಲಂತೂ ಎಷ್ಟು ಸಲ ಅರ್ಧ ಮಾತ್ರ ಕೂರುವುದಕ್ಕೆ ಸಾಧ್ಯವಾಗಿ, ಬಸ್ಸು ತಪ್ಪುವ ಕಾರಣಕ್ಕೆ, ತುಂಬ ಸಮಯ ಆಯಿತೆಂಬ ಸಬೂಬಿಗೆ ಅನ್ಯಾಯವಾಗಿ ಸಂಗೀತದ ಸವಿ ಅರ್ಧವೇ ಪ್ರಾಪ್ತವಾಗಿದೆ.

ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಾ, ಕಾಲೇಜು ಪೂರೈಸಿದವರಿಗೆ ಹೀಗೆ ಅರ್ಧ ಮಾತ್ರ ನೋಡಲಿಕ್ಕೆ ಸಾಧ್ಯವಾದ ಕಾರ್ಯಕ್ರಮ, ಸಿನಿಮಾ, ಆರ್ಕೆಷ್ಟ್ರಾ, ನಾಟಕ, ಯಕ್ಷಗಾನಗಳು ಅದೆಷ್ಟೋ? ಇಂಥ ಸಮಯಕ್ಕೆ ಹಾಸ್ಟೇಲ್ ನಲ್ಲಿರಬೇಕೆಂಬ ಕಟ್ಟುನಿಟ್ಟಿನ ನಿಯಮ ಇದ್ದಾಗ, ನೋಡುತ್ತಿರುವ ಕಾರ್ಯಕ್ರಮ ಮುಗಿಯದೇ ಹೋದಾಗ ಸೀಟಿನಿಂದ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು, ಹಿಂದೆ ಹಿಂದೇ ನೋಡುತ್ತಾ, ನಿಂತು ಸ್ವಲ್ಪ ನೋಡುತ್ತಾ, ಆ ಕಾರ್ಯಕ್ರಮ ಕಣ್ಣ ಕೊನೆಗೆ ಕಾಣುವವರೆಗೂ ಆಸ್ವಾದಿಸುತ್ತಾ, ತನ್ನ ವಿಧಿಯನ್ನು ಹಳಿಯುತ್ತಾ ಹಾಸ್ಟೇಲ್ ಸೇರಿಕೊಂಡವರ ಸಂಖ್ಯೆ ಎಷ್ಟಿಲ್ಲ?

ಕ್ಷಣಕಾಲ ಕಣ್ಮುಚ್ಚಿ, ನೆನಪಿನ ಗಣಿಗೆ ಕಿವಿ ಹಚ್ಚಿ ಕೇಳಿಸಿಕೊಳ್ಳೋಣ, ಕಾಣಿಸಿಕೊಳ್ಳೋಣ.

Wednesday, February 24, 2010

ಪಟ್ಟಿ ಕಟ್ಟಿಕೊಳ್ಳಿ ಕಣ್ಣಿಗೆ




[caption id="attachment_288" align="alignleft" width="248" caption="ಕಣ್ಣಿಗೆ ಬಟ್ಟೆ ಇರುವವರೆಗೆ"][/caption]

ಏನೇನೋ ನೋಡಬೇಕಿದೆ ಇನ್ನು ಮುಂದೆ,
ಹೊರಡುವ ಮೊದಲು

ಬಟ್ಟೆ ಕಟ್ಟಿಕೊಳ್ಳಿ ಕಣ್ಣಿಗೆ.

ಕಣ್ಣುಗಳಿಗೆ ಕಟ್ಟಿದ ಬಟ್ಟೆಗಾಗಿ

ತೆರಿಗೆ ತೆತ್ತ

ಜನ ಈ ಜಗತ್ತಿನಲ್ಲಿ ಯಾರೂ ಇಲ್ಲ.

ನೀರಿಗಿರುವ, ನೆಲಕ್ಕಿರುವ, ದುಡಿಮೆ, ಖರ್ಚಿಗಿರುವ

ತೆರಿಗೆ, ಬಟ್ಟೆಗಿಲ್ಲ...

ನಾವು ಎಲ್ಲರೂ ಹಾಕಿಕೊಂಡ

ಆ ಸಾಮೂಹಿಕ ಪಟ್ಟಿಯ ಹಿಂದೆ

ಎಲ್ಲ ಸತ್ಯಗಳೂ, ಎಲ್ಲಾ ಮಿತ್ಯಗಳೂ

ಅವರವರು ಅರಿತುಕೊಂಡಂತೆ.

ನಮ್ಮ ಅರಿವು, ನಮ್ಮ ಮರೆವು

ಜಗತ್ತಿನ ಸುಗಮ ನಡುಗೆಗೆ

ಧಕ್ಕೆ ಆಗದಿರಲಿ.

ಹೆಜ್ಜೆಗಳು ತಪ್ಪಬಹುದು, ಮನಸ್ಸುಗಳು ಜಾರಬಹುದು

ಎಲ್ಲೆಗಳನ್ನು ಮೀರಬಹುದು,

ಸಣ್ಣ ಸಣ್ಣ ಸಮಸ್ಯೆಗಳ ಮಧ್ಯೆ

ಸಿಲುಕುತ್ತಿದ್ದವ

ಈಗ ದೊಡ್ಡ ಸಮಸ್ಯೆಗಳನ್ನ ತಾನೇ

ಹುಟ್ಟುಹಾಕಿ ತನ್ನ ಇನ್ನೊಂದು ಆಕರ್ಷಕ

ತಪ್ಪುಗಳ ಮೂಲ ಅದನ್ನು ಗೆಲ್ಲಬಹುದು.

ಅಷ್ಟಕ್ಕೂ ಗೆಲುವೆಂಬುದು

ಯಾರ ಸೋಲಿನ ವಿರುದ್ಧಾರ್ಥಕ ಪದ



?
ಪಟ್ಟಿಗಳ ಕಟ್ಟಿಕೊಂಡ ಗಾಂಧಾರಿ ಇರುವವರೆಗೂ

ಅಲ್ಲೊಂದು ಕೌರವರ ಅಟ್ಟಹಾಸವಿರುತ್ತದೆ,

ಪಾಂಡವರ ವಿಜಯವಿರುತ್ತದೆ.

ದ್ರೌಪದಿಯ ಹೆರಳು, ಕುಂತಿಯ ನರಳು

ಕರ್ಣನ ಔದಾರ್ಯದ ಉರುಳು

ಸಾಗುತ್ತಿರುತ್ತದೆ.

ಗಾಂಧಾರಿಯ ಕಣ್ಣ ಸುತ್ತಾ ಬಟ್ಟೆಯ ಗುರುತು,

ಪಾಂಡವರ ಪಕ್ಷಪಾತಿ ಕೃಷ್ಣನ ಸುತ್ತ,

ದೃತರಾಷ್ಟ್ರನ ಕುರುಡಿನ ಸುತ್ತ

ಕೌರವರ ದುರಾದೃಷ್ಟದ ಸುತ್ತ

ಈ ಪಟ್ಟಿಯ ಕಲೆಗಳು ಇದ್ದೇ ಇದ್ದವು,
ಕಲೆಗಳಿಗೆ ಸಾಕ್ಷಿಪ್ರಜ್ಞೆ ಬರುವವರೆಗೆ

ಲಲಿತ ಕಲೆ,

ಕಣ್ಣಿಗೆ ಬಟ್ಟೆ ಇರುವವರೆಗೆ

ಕವಿಗೆ ಬೆಲೆ.