Saturday, November 17, 2007

ನೀ ಕೊಡೆ ನಾ ಬಿಡೆ

ಕೊಡೆಯೆಂದರೆ ಬಾಲ್ಯ, ಕೊಡೆಯೆಂದರೆ ನೆನಪು, ಕೊಡೆಯೆಂದರೆ ತಾಯಿ, ಕೊumbrella1.jpgಡೆಯೇ ನಮ್ಮನು ಕಾಯಿ! ಮಲೆನಾಡಿನಿಂದ ಬಂದ ಎಲ್ಲಾ ಜನರ ಕನಸಲ್ಲೂ ಒಂದು ಕೊಡೆ ಇದ್ದೇ ಇದೆ. ಅದು ತೀವ್ರ ಗಾಳಿ ಬೀಸುವ ಗದ್ದೆ ಬಯಲಲ್ಲಿ ಆಚೆ ಈಚೆ ಮಗಚಿಕೊಳ್ಳುತ್ತಾ, ಕೆಲವೊಮ್ಮೆ ತಲೆ ಕೆಳಗಾಗುತ್ತಾ ನಮ್ಮನ್ನು ಹಿಂಬಾಲಿಸುತ್ತಿದೆ. ಮಲೆನಾಡಿನ ಕಡೆ ಈಗಲೂ ಬಿಚ್ಚಿಟ್ಟ ಕೊಡೆಗಳೆಲ್ಲಾ ಮನೆಯ ಜಗಲಿಯಲ್ಲಿ ರಾತ್ರಿ ಪೂರ್ತಿ ಗಾಳಿಗೆ ಒಣಗುತ್ತಾ, ಬೆಳಗಿನ ಎಳೆ ಬಿಸಿಲಿಗೆ ಕನಸು ಕಾಣುತ್ತಿವೆ. ಮಳೆಗಾಲ ಮುಗಿದು, ಚಳಿ ಪ್ರಾರಂಭವಾಗಿರುವಾಗ ಮಳೆಯ, ಮಳೆಗೆ ಹಿಡಿಯುವ ಕೊಡೆಯ ಮೇಲೆ ಒಂದು ಸಣ್ಣ ನೆನಪಿನ ಬರಹ.

 ನಾವೆಲ್ಲಾ ಹೈಸ್ಕೂಲ್‌ನಲ್ಲಿರುವಾಗ ಒಂದು ಪಾಠವಿತ್ತು. ಹೆಸರು `ಕೊಡೆ ಪುರಾಣ' ಇರಬೇಕು. ಬರೆದವರು ಪಡುಕೋಣೆ ರಮಾನಂದರಾಯರು. ಒಂದು ಲಲಿತ ಪ್ರಬಂಧವದು. ಕೊಡೆಯನ್ನು ಹೆಣ್ಣಿನಂತೆ ಹಾಗೆಂದು ಹೀಗೆಂದು ವರ್ಣಿಸುವ ಲೇಖಕರು ನಗೆಯುಕ್ಕುವಂತೆ ಕೊಡೆ ವ್ಯಾಖ್ಯಾನಕ್ಕೆ ತೊಡಗಿದ್ದರು. ಅಂತಿಮವಾಗಿ ಕೊಡೆಯನ್ನು `ತಾಯಿಯಂತೆ' ಎಂದು ಬಣ್ಣಿಸಿದಾಗಂತೂ ಆ ಲೇಖನದ ಔನ್ನತ್ಯ ಅರ್ಥವಾಗಿತ್ತು. ಆ ಲೇಖನದೊಂದಿಗೆ ಬಾಲ್ಯದ ಕೊಡೆ ಗೆಳೆತನದ ನೆನಪು ಆಗಾಗ ಹಸಿರಾಗಿದ್ದಿದೆ. ಕೊಡೆಯೆಂದರೆ ಎಲ್ಲರಿಗೂ ತಂತಮ್ಮ ಬಾಲ್ಯ ನೆನಪಾಗುತ್ತದೆ. ಅನೇಕ ಚಿತ್ರಕಾರರು ಕೊಡೆ ಹಿಡಿದು ಸಾಗುವ ಮನುಷ್ಯಾಕೃತಿಯಿಂದಲೇ, ದೋ ಎಂದು ಸುರಿಯುವ ಮಳೆಯಿಂದಲೇ ಮಲೆನಾಡನ್ನು ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ. ಕೊಡೆ ಮಲೆನಾಡಿನ, ಮಳೆಗಾಲದ ಅನಿವಾರ್ಯ ಅಂಗವೇ ಆಗಿಹೋಗಿದೆ. ಅದು ಹೆಚ್ಚಾಗಿ ಪೇಟೆಗಳಲ್ಲಿ ಮಾತ್ರ ಬೇಸಿಗೆಯ ಆಯುಧ ಕೂಡ.

Thursday, November 15, 2007

ಆಕಾಶದ ಸಹವಾಸ ದೋಷ!

ಹಾರುವ ಯಾನ ವಿಮಾನದಲಿ ಚಿಕ್ಕವರಾಗಿದ್ದಾಗ ಬಸ್ಸೆಂದರೆ ಹತ್ತಲು ಆಸೆಪಡುವ ಕಾಲವಿತ್ತು. ಆಮೇಲೆ ಬೈಕ್‌ ಆಸೆ ಬಂತು, ಆಮೇಲೆ ಕಾರು, ಆಮೇಲೆ ರೈಲು, ಆಮೇಲೆ ವಿಮಾನ. ಆದರೆ ಈಗ ಎಲ್ಲವೂ ಬದಲಾಗಿದೆ. ಈಗ ವಿಮಾನವೂ ಮಕ್ಕಳಲ್ಲಿ ಚಿಕ್ಕ ಸಂಭ್ರಮವನ್ನು ಹುಟ್ಟುಹಾಕದೇ ಹೋಗಬಹುದು. ಆದರೆ ನಾನು ಮೊನ್ನೆ ಮೊನ್ನೆ ಮೊದಲ ಬಾರಿ ವಿಮಾನ ಹತ್ತಿದೆ, ಈ ನೆಲದ ಸಹವಾಸವನ್ನು ಸ್ವಲ್ಪ ಕಾಲ ತೊರೆದು ಆಕಾಶದ ಸಹವಾಸ ಮಾಡಿದ್ದೆ.

ಅದರ ಸಹವಾಸ ದೋಷ ಇಲ್ಲಿ ಅನುಭವವಾಗಿದೆ, ಓದಿ!

ರೇಣುಕಾ ಶರ್ಮ ಬಂದಿದ್ದರೆ ಇಲ್ಲಿ ಸ್ವರ್ಗದ ಸೀನ್‌ ಶೂಟಿಂಗ್‌ ಮಾಡಿಬಿಡುತ್ತಿದ್ದರು.

ಹಾಗನಿಸಿದಾಗ ನಾನು ಈ ಭೂಮಿಯಿಂದ ಅದೆಷ್ಟೋ ಕಿಲೋಮೀಟರ್‌ ಎತ್ತರದಲ್ಲಿದ್ದೆ. ಆಗ ವಿಮಾನದಲ್ಲಿ ಬೆಲ್ಟ್‌ ಹಾಕಿಕೊಂಡು ನಿರಾಳವಲ್ಲದ ಸ್ಥಿತಿಯಲ್ಲಿ ಕುಳಿತು, ತೆರೆಯಲಾಗದ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಹೊರಗೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ, ಹಿಂಜಿ ಹಿಂಜಿ ಆಗಸದಂಗಳದಲ್ಲಿ ಹರಡಿದಂತೆ ಕಾಣುತ್ತಿದ್ದವು ಮೋಡಗಳ ಸಾಲು, ಅದನ್ನು ಯಾರೂ ಕದ್ದೊಯ್ಯದಂತೆ ಕಾಯುತ್ತಾ ಕುಳಿತಂತಿದ್ದ ದೂರ ದಿಗಂತದಲ್ಲಿ ಸೂರ್ಯ!

ನಮ್ಮ ಅನೇಕ ಸಿನಿಮಾಗಳಲ್ಲಿ ಸ್ವರ್ಗದ ದೃಶ್ಯವನ್ನು ಶೂಟ್‌ ಮಾಡುವಾಗ ಮೋಡವೆಂದು ಭ್ರಮಿಸುವಂತೆ ಧೂಪದ ಹೊಗೆ ಹಾಕುತ್ತಿದ್ದರು, ಅದರ ಮಧ್ಯೆ ಒಂದೋ ಅನಂತನಾಗ್‌ `ಕಮಲ ನಯನ, ಕಮಲ ವದನ' ಎನ್ನುತ್ತಾ ಹಾಡುವ ನಾರದರಾಗಿರುತ್ತಿದ್ದರು, ಇಲ್ಲದಿದ್ದರೆ ಆ ಮೋಡದಂಥ ಸೆಟ್‌ನಲ್ಲಿ ಬೆಳ್ಳಿಬೆಟ್ಟದಲ್ಲಿ ಕುಣಿಯುತ್ತಿದ್ದಾನೆ ಎಂದು ಫೀಲ್‌ ಆಗುವಂತೆ ಈಶ್ವರ ತಾಂಡವನೃತ್ಯ ಮಾಡುತ್ತಿರುತ್ತಿದ್ದ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಆ ಈಶ್ವರನ ಪಾತ್ರದಲ್ಲಿ ನಟ ಶ್ರೀಧರ್‌ ಇರುತ್ತಿದ್ದರು. ಆಗಲೇ ಈ ಹತ್ತಿಯಂಥ ಮೋಡಗಳನ್ನು ರೇಣುಕಾ ಶರ್ಮ ಆಗಿದ್ದರೆ ಶೂಟಿಂಗ್‌ಗೆ ಬಳಸಿಕೊಳ್ಳುತ್ತಿದ್ದರೇನೋ ಅನಿಸಿದ್ದು.

Wednesday, November 14, 2007

ಕಳ್ಳ ಕುಳ್ಳರ ನಮಸ್ಕಾರ!

ಬ್ಲಾಗ್‌ ಮಳ್ಳರಿಗೆ ಈ ಕಳ್ಳ ಕುಳ್ಳರ ನಮಸ್ಕಾರ!
ಇದು ವಿಕಾಸ್‌ ನೇಗಿಲೋಣಿ ಮತ್ತು ಚೇತನ್‌ ನಾಡಿಗೇರ್‌ ಎಂಬ ಇಬ್ಬರು ಸ್ನೇಹಿತರು ಸೇರಿ ಪ್ರಾರಂಭಿಸುತ್ತಿರುವ ಒಂದು ಬ್ಲಾಗ್‌. ಕಳ್ಳ ಮತ್ತು ಕುಳ್ಳ ಎಂಬ ಅಭಿದಾನವನ್ನು ಇಬ್ಬರಲ್ಲೊಬ್ಬರಿಗೆ ಖಚಿತವಾಗಿ ಆರೋಪಿಸಿದರೆ ಅದು ವಿವಾದವಾಗುವುದರಿಂದ ಹೆಸರಿಸುವುದು ನಿಮಗೆ ಬಿಟ್ಟಿದ್ದು. ನಾವಿಬ್ಬರೂ ವೃತ್ತಿಯಲ್ಲಿ ಪತ್ರಕರ್ತರು. ಪ್ರವೃತ್ತಿಯಲ್ಲಿ ಇಬ್ಬರಿಗೂ ಸಿನಿಮಾ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಸಮಾನ ಅಭಿರುಚಿ ಇದೆ.